ಬೆಳಗಾವಿಯಲ್ಲಿ ರೈಲು ತಡೆ ಚಳವಳಿ; ರೈತರು ಪೊಲೀಸ್ ವಶಕ್ಕೆ
ಬೆಳಗಾವಿ, ಫೆಬ್ರವರಿ 18; ಬೆಳಗಾವಿಯಲ್ಲಿ ರೈಲು ತಡೆ ಚಳವಳಿ ನಡೆಸಲು ಮುಂದಾದ ಮಾಜಿ ಕೇಂದ್ರ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ ಸೇರಿದಂತೆ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದರು. ರೈಲು ನಿಲ್ದಾಣಕ್ಕೆ ನುಗ್ಗಲು ರೈತರು ಪ್ರಯತ್ನ ನಡೆಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ನೀತಿಗಳನ್ನು ಖಂಡಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಬೆಂಬಲಿಸಿ ಗುರುವಾರ ರಾಜ್ಯದಲ್ಲಿ ರೈಲು ತಡೆ ಚಳವಳಿ ನಡೆಸಲಾಗುತ್ತಿದೆ.
ಬೆಳಗಾವಿ ರೈಲು ನಿಲ್ದಾಣಕ್ಕೆ ಆಗಮಿಸಿದ ರೈತರ ದಂಡು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ನೇತೃತ್ವದಲ್ಲಿ ರೈಲು ನಿಲ್ದಾಣಕ್ಕೆ ನುಗ್ಗಲು ಪ್ರಯತ್ನ ನಡೆಸಿದರು. ಆದರೆ, ಪೊಲೀಸರು ರೈತರನ್ನು ಒಳಗೆ ಬಿಡಲಿಲ್ಲ.

ಪೊಲೀಸರು ಬ್ಯಾರಿಕೇಡ್ ಹಾಕಿ ರೈಲು ನಿಲ್ದಾಣದ ಗೇಟ್ ಬಂದ್ ಮಾಡಿದ್ದಾರೆ. ರೈಲು ನಿಲ್ದಾಣದ ಹೊರಗೆ ರೈತರನ್ನು ಪೊಲೀಸರು ತಡೆದರು. ಬಾಬಾಗೌಡ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ರೈತರು, ಮಾತನಾಡುವ ಹಕ್ಕನ್ನು ಕಿತ್ತುಕೊಳ್ಳುತ್ತೀರಿ ಅಂದರೆ ಇದು ಎಂತಹ ಪ್ರಜಾಪ್ರಭುತ್ವ? ಎಂದು ಪ್ರಶ್ನಿಸಿದರು.
ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಚಳವಳಿ ಮಾಡುವುದು ನಮ್ಮ ಹಕ್ಕು. ಸರ್ವಾಧಿಕಾರಿ ಆಡಳಿತದ ಪ್ರಭಾವ ನ್ಯಾಯಾಂಗ ಮೇಲೂ ಆಗುತ್ತಿದೆ. ಬೆಳಗಾವಿ ರಾಯಣ್ಣನ ನಾಡು, ಹುಟ್ಟು ಹೋರಾಟಗಾರರು ನಾವು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ರೈಲು ರೋಕೋ ಚಳುವಳಿಗೆ ಮುಂದಾಗಿರುವ ರೈತರು.
— oneindiakannada (@OneindiaKannada) February 18, 2021
ರೈತರನ್ನು ರೈಲು ನಿಲ್ದಾಣದ ಮುಂಭಾಗದಲ್ಲೇ ತಡೆದ ಪೊಲೀಸರು.
ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ. ರೈತರನ್ನು ವಶಕ್ಕೆ ಪಡೆದ ಪೊಲೀಸರು.#belagavi #RailRokoForFarmers pic.twitter.com/G11OWF8avS
ಬಾಬಾಗೌಡ ಪಾಟೀಲ ಅವರು, "ಪ್ರಧಾನಿ ಮೋದಿ ಏಕೆ ದೆಹಲಿಯಲ್ಲಿ ರೈತರ ಜೊತೆಗೆ ಮಾತನಾಡಲಿಲ್ಲ. ಮೋದಿ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆ ಅಲುಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರದಲ್ಲಿ ಇರುವ ಸರ್ಕಾರ ರೈತರ ಅಳಲು ಆಲಿಸುತ್ತಿಲ್ಲ. ಇವರು ಕರಿ ಬ್ರಿಟಿಷರು" ಎಂದು ವಾಗ್ದಾಳಿ ನಡೆಸಿದರು.
ರೈಲು ನಿಲ್ದಾಣದ ಒಳ ಹೋಗುವ ವಿಚಾರದಲ್ಲಿ ರೈತರು ಮತ್ತು ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು. ಬಾಬಾಗೌಡ ಪಾಟೀಲ ಸೇರಿ ಹಲವು ರೈತರನ್ನು ಪೊಲೀಸರ ವಶಕ್ಕೆ ಪಡೆದರು. ರೈಲು ತಡೆ ವಿಫಲಗೊಳಿಸಿದಕ್ಕೆ ಬೆಳಗಾವಿ ರೈಲ್ವೆ ನಿಲ್ದಾಣ ಎದುರಿನ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಿಲ್ಲಿಸದ ರೈತರನ್ನು ವಶಕ್ಕೆ ಪಡೆದ ರೈಲ್ವೆ ಹಾಗೂ ಕ್ಯಾಂಪ್ ಠಾಣೆ ಪೊಲೀಸರು ಕ್ಯಾಂಪ್ ಪೊಲೀಸ್ ಠಾಣೆಗೆ ರೈತರನ್ನು ಕರೆದುಕೊಂಡು ಹೋಗಿ, ಬಳಿಕ ಬಿಡುಗಡೆ ಮಾಡಿದರು.












Click it and Unblock the Notifications