ಲಕ್ಷ್ಮಣ ಸವದಿಗೆ ಪರಿಹಾರ ಕೊಡಲು ಭಿಕ್ಷೆ ಎತ್ತಿದ ರೈತರು!
ಬೆಳಗಾವಿ, ಅಕ್ಟೋಬರ್ 5: 'ರೈತರು ಕೇಳಿದಷ್ಟು ನೆರೆ ಪರಿಹಾರ ನೀಡಲು ಸಾಧ್ಯವಿಲ್ಲ. ಅವರು ಕೇಳಿದಷ್ಟು ಪರಿಹಾರ ನೀಡಿದರೆ ನಾನೇ 1 ಕೋಟಿ ರೂಪಾಯಿ ಪರಿಹಾರ ತೆಗೆದುಕೊಳ್ಳಬೇಕಾಗುತ್ತದೆ' ಎಂಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಯಾಗಿ ಇಂದು ರೈತರು ಲಕ್ಷ್ಮಣ ಸವದಿ ಅವರಿಗೇ ಪರಿಹಾರ ನೀಡಲು ಮುಂದಾಗಿದ್ದಾರೆ. ಪರಿಹಾರ ನೀಡಲೆಂದು ಭಿಕ್ಷೆ ಎತ್ತಿದ್ದಾರೆ.
ನೆರೆ ಸಂತ್ರಸ್ತರಿಗೆ ಬೆಳೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮ ಖಂಡಿಸಿ ಇಂದು ಬೆಳಗಾವಿಯಲ್ಲಿ ಮತ್ತೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಚೆನ್ನಮ್ಮ ವೃತ್ತದದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಇದೇ ಸಂದರ್ಭ ಭಿಕ್ಷೆ ಎತ್ತಿ ಹಣ ಸಂಗ್ರಹಿಸಿ ಡಿಸಿಎಂಗೆ ರವಾನಿಸುವ ಮೂಲಕ ಬಿಸಿ ಮುಟ್ಟಿಸಿದರು.
ರೈತರು ಕೇಳಿದಷ್ಟು ಪರಿಹಾರ ಕೊಡಲು ಆಗದು: ಡಿಸಿಎಂ ಲಕ್ಷ್ಮಣ ಸವದಿ
ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಸಂದರ್ಭ, "ಪ್ರವಾಹದಲ್ಲಿ ನನ್ನ ಕಬ್ಬಿನ ಬೆಳೆಯೂ ಹಾಳಾಗಿದೆ, ನನಗೂ ಕೋಟಿ ರೂಪಾಯಿ ಪರಿಹಾರ ಬರಬೇಕು" ಎಂದು ನಿನ್ನೆಯಷ್ಟೇ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ರೈತರು ಅವರಿಗೆ ನೀಡಲು ಹಣ ಸಂಗ್ರಹಿಸಿದ್ದಾರೆ.
ರೈತರಿಂದ ಚಿಲ್ಲರೆ ಹಣ ಸಂಗ್ರಹಿಸಿದ ಪ್ರತಿಭಟನಾ ನಿರತರಿಂದ ಜಯಶ್ರೀ ಗುರಣ್ಣವರ್ ಹಣ ಸಂಗ್ರಹಿಸಿದರು. 180 ರೂಪಾಯಿ ಸಂಗ್ರಹವಾದ ಪರಿಹಾರ ಹಣವನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮೂಲಕ ಪಾಕೇಟ್ ನಲ್ಲಿ ರವಾನಿಸಿದರು.
ಸವದಿ ಕುರಿತು 'ವಿಷ ನೀಡಿದರೂ ಅಮೃತವಾಗಲಿ' ಎಂದಿದ್ಯಾಕೆ ಕುಮಟಳ್ಳಿ?
ಇದೇ ಸಂದರ್ಭ, "ರಾಜ್ಯ ಸರ್ಕಾರ 1200 ಕೋಟಿ ರೂಪಾಯಿ ಮಧ್ಯಂತರ ಪರಿಹಾರ ಹಣ ನೀಡಿದೆ. ಆದರೆ ಇದು ಯಾವುದಕ್ಕೂ ಸಾಲುವುದಿಲ್ಲ. ಬೆಳೆ ಹಾನಿ ಬಗ್ಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಎನ್ ಡಿಆರ್ ಎಫ್ ನಿಯಮಗಳು ರೈತರಿಗೆ ಅನುಕೂಲಕರವಾಗಿಲ್ಲ. ಹೆಕ್ಟೇರ್ ಮೂಲಕ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತದೆ, ಅದನ್ನು ತೆಗೆದುಹಾಗಿ ಎಕರೆ ಮೇಲೆ ಬೆಳೆ ಹಾನಿ ಪರಿಹಾರ ನೀಡಬೇಕು" ಎಂದು ರೈತರು ಒತ್ತಾಯಿಸಿದರು.