ಬೆಳಗಾವಿಯಲ್ಲಿ ಜಮೀನಿನ ಕೊಳವೆ ಬಾವಿಗೆ ಬಿದ್ದು ರೈತ ಸಾವು
ಬೆಳಗಾವಿ, ಮೇ 12: ಕೊಳವೆ ಬಾವಿಯೊಂದರಲ್ಲಿ ಬಿದ್ದು ರೈತ ಸಾವನ್ನಪ್ಪಿರುವ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. ಸುಲ್ತಾನಪುರ ಗ್ರಾಮದ ಲಕ್ಕಪ್ಪ ಸಂಗಪ್ಪ ದೊಡಮನಿ (38) ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟ ರೈತ.
ಕೊಳವೆ ಬಾವಿಗೆ ರೈತ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ದೇಹವನ್ನು ಮೇಲೆತ್ತುವ ಕಾರ್ಯಾಚರಣೆಯನ್ನು ಆರಂಭಿಸಿದರು. ಕೊಳವೆ ಬಾವಿಯಲ್ಲಿ ಸಿಲುಕಿದ್ದ ಲಕ್ಕಪ್ಪ ಅವರ ದೇಹವನ್ನು ಕ್ಯಾಮೆರಾದಿಂದ ಗುರುತಿಸಿ ಜೆಸಿಬಿ ಮೂಲಕ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿದರು. ಬಳಿಕ ಶವವನ್ನು ಹೊರ ತೆಗೆದು ರಾಯಬಾಗ ತಾಲೂಕಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

ಲಕ್ಕಪ್ಪ ಕಳೆದ ವಾರವಷ್ಟೇ ಜಮೀನಿನಲ್ಲಿ ಕೊಳವೆ ಬಾವಿ ಕೊರಿಸಿದ್ದ. ಕೊಳವೆ ಬಾವಿಯಲ್ಲಿ ಕಡಿಮೆ ನೀರು ಬಂದಿದ್ದರಿಂದ ಮನನೊಂದ ಆತ್ಮಹತ್ಯೆಗೆ ಯತ್ನ ಮಾಡಿಕೊಂಡಿರಬಹದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯ ಮಾಹಿತಿ ತಿಳಿದು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯ ಬಗ್ಗೆ ತನಿಖೆ ನಡೆದಿದ್ದು, ಇದು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬುದು ತನಿಖೆಯ ಬಳಿಕ ಸ್ಪಷ್ಟವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ.












Click it and Unblock the Notifications