ಬಿಜೆಪಿಯ ದೊಡ್ಡ ದೊಡ್ಡ ನಾಯಕರೂ ಡ್ರಗ್ಸ್ ತೆಗೆದುಕೊಳ್ಳುತ್ತಾರೆ; ಬಿ.ಕೆ ಹರಿಪ್ರಸಾದ ಹೊಸ ಬಾಂಬ್
ಬೆಳಗಾವಿ, ಸೆಪ್ಟೆಂಬರ್ 14: "ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಕೇವಲ ಹೆಣ್ಣುಮಕ್ಕಳ ಹೆಸರು ಹೇಳುತ್ತಿದೆ. ಗಂಡಸರು ಯಾರೂ ಅಫೀಮು, ಗಾಂಜಾ ಸೇವಿಸಲ್ವಾ? ಕೋವಿಡ್ ನಿಯಂತ್ರಿಸಲು ಬಿಜೆಪಿ ಸರ್ಕಾರ ವೈಫಲ್ಯ ಆದ ಕಾರಣ ಸೆಲೆಬ್ರಿಟಿಗಳ ಮೇಲೆ ಮಾದಕ ವಸ್ತುಗಳ ಆರೋಪ ಮಾಡಲಾಗುತ್ತಿದೆ'' ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.
"ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾನೂನುಬಾಹಿರ ಕೆಲಸಗಳಲ್ಲಿ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುವುದು ಬಿಜೆಪಿಯವರಿಗೆ ಹವ್ಯಾಸ ಆಗಿಬಿಟ್ಟಿದೆ.''
"ಕಲಬುರಗಿಯಲ್ಲಿ 1 ಸಾವಿರ ಕೆ.ಜಿ ಗಾಂಜಾ ಸಾಗಣೆಯಲ್ಲಿ ಬಂಧಿತನಾದವನು ಯಾವ ಪಕ್ಷದವನು. ಯಾವ ಪಕ್ಷದ ನಾಯಕ, ಯಾವ ಧರ್ಮಕ್ಕೆ ಸೇರಿದವನು ಎಂಬುದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ'' ಎಂದು ಹರಿಪ್ರಸಾದ್ ಪ್ರಶ್ನಿಸಿದರು.

ಬರೀ ಜಮೀರ್ ಅಹ್ಮದ್ ಖಾನ್ ಅಷ್ಟೇ ಅಲ್ಲ. ಅಲ್ಪಸಂಖ್ಯಾತರು, ಕಮ್ಯುನಿಸ್ಟರೇ ದೇಶದ್ರೋಹಿಗಳು ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಾರೆ ಎಂದು ಕಿಡಿಕಾರಿದರು.
"1923 ರಿಂದ ಕಾಂಗ್ರೆಸ್ ಫ್ಯಾಸಿಸ್ಟ್ ಮನೋಭಾವದವರ ವಿರುದ್ಧ ಪಕ್ಷ ಸಂಘಟನೆ ಮಾಡುತ್ತಿದೆ. ನಾನು ಇಡೀ ರಾಷ್ಟ್ರದಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿಯ ದೊಡ್ಡ ಡೊಡ್ಡ ನಾಯಕರು ಅಫೀಮು ತೆದುಕೊಳ್ಳುವುದು ನನಗೆ ಗೊತ್ತಿದೆ, ಆದರೆ ಹೆಸರು ಹೇಳುವುದಿಲ್ಲ. ಆದ್ದರಿಂದ ಒಂದು ಸಮುದಾಯದವರನ್ನು ಗುರಿಯಾಗಿಸುವುದು ಸರಿಯಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ'' ಎಂದು ಹೇಳಿದರು.

ಆರ್ಎಸ್ಎಸ್ ತರಹ ನಮ್ಮ ಕಾರ್ಯಕರ್ತರನ್ನು ತಯಾರು ಮಾಡುವುದಿಲ್ಲ. ನಮಗೆ ಆ ರೀತಿಯ ಸಂಘಟನೆ ಬೇಕಾಗಿಲ್ಲ. ಕಾಂಗ್ರೆಸ್ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು ಎಂದರು.
"ಕಾಂಗ್ರೆಸ್ ಪಕ್ಷ ಲಾಠಿ ಹಿಡಿದರೆ ಬೇರೆಯವರಿಗೆ ಸಹಾಯವಾಗುತ್ತದೆ. ಆದರೆ, ಬೇರೆ ಪಕ್ಷ ಲಾಠಿ ಹಿಡಿದರೆ ಜನರಿಗೆ ಭಯ ಶುರುವಾಗುತ್ತದೆ. ಆದ್ದರಿಂದ, ಅಂತಹ ಸಂಘಟನೆಗಳೊಂದಿಗೆ ನಮಗೆ ಸಂಬಂಧವಿಲ್ಲ. ಆರ್ಎಸ್ಎಸ್ನವರಿಂದ ಕಲಿಯಲು ನಮಗೆ ಏನು ಇಲ್ಲ, ಅವರೇ ನಮ್ಮಿಂದ ಕಲಿಯಬೇಕು'' ಎಂದು ವಾಗ್ದಾಳಿ ನಡೆಸಿದರು.
"ಆರ್ಎಸ್ಎಸ್ ನವರು ಸ್ವಾತಂತ್ರ್ಯದ ವಿರುದ್ಧ ಇದ್ದವರು. ಮಹಾತ್ಮ ಗಾಂಧಿ ಲಾಠಿ ಹಿಡಿದದ್ದು ಸಹಾಯ ಮಾಡಲು. ಆರ್ಎಸ್ಎಸ್ ಯಾಕೆ ಲಾಠಿ ಹಿಡಿಯಿತು ಅನ್ನೋದು ಜಗತ್ತಿಗೆ ಗೊತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಸೇವಾದಳ ಕೆಲಸ ಮಾಡಿದೆ. ಈಗ ಕಾರ್ಯಕರ್ತರಿಗೆ ಬೌದ್ಧಿಕ ತರಬೇತಿ ನೀಡಿ, ದೇಶದ ಅಭಿವೃದ್ಧಿಗೆ ಪೂರಕವಾಗಿ ತಯಾರಿ ಮಾಡಲಾಗುತ್ತಿದೆ'' ಎಂದರು.












Click it and Unblock the Notifications