ಜಾರಕಿಹೊಳಿ ಸಹೋದರರ ವಿರುದ್ಧ ರಾಜಕೀಯ ದಾಳ ಉರುಳಿಸಿದ ಡಿ.ಕೆ.ಶಿ
ಬೆಳಗಾವಿ, ನವೆಂಬರ್ 23: ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ರಾಜಕೀಯಕ್ಕೆ ತಲೆ ಹಾಕಬಾರದು ಎಂದು ಜಾರಕಿಹೊಳಿ ಸಹೋದರರು ಒತ್ತಡ ಹೇರಿದ್ದರೂ ಸಹ ಡಿ.ಕೆ.ಶಿವಕುಮಾರ್ ಬೆಳಗಾವಿಯಲ್ಲಿ ರಾಜಕೀಯ ದಾಳ ಉರುಳಿಸಿದ್ದಾರೆ.
ಇಂದು ಬೆಳಗಾವಿಗೆ ಹೋಗಿದ್ದ ಡಿ.ಕೆ.ಶಿವಕುಮಾರ್ ಅವರು, ಜಾರಕಿಹೊಳಿ ಸಹೋದರರ ಸಕ್ಕರೆ ಕಾರ್ಖಾನೆಯಿಂದ ಬಾಕಿ ಕೊಡಿಸುವಂತೆ ಹೋರಾಟ ಮಾಡುತ್ತಿದ್ದ ಕಬ್ಬು ಬೆಳೆಗಾರರೊಂದಿಗೆ ಮಾತನಾಡಿದ್ದಾರೆ. ಅಷ್ಟೆ ಅಲ್ಲದೆ ಅವರೊಂದಿಗೆ ತಾವಿರುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ.
ಜಾರಕಿಹೊಳಿ ಸಹೋದರರ ವಿರದ್ಧ ನಿಂತವರಿಗೆ ಡಿ.ಕೆ.ಶಿವಕುಮಾರ್ ಅವರು ಬೆಂಬಲ ನೀಡುವ ಮೂಲಕ ಜಾರಕಿಹೊಳಿ ಸಹೋದರರ ಎದುರು ಹೋರಾಟಕ್ಕೆ ನಿಂತಿದ್ದಾರೆ. ಆದರೆ ಇದು ಚಾಣಾಕ್ಷತನದ ರಾಜಕೀಯ ಹೋರಾಟ.
ಡಿ.ಕೆ.ಶಿವಕುಮಾರ್ ಅವರು ರೈತರ ಪರ ಕಾಳಜಿಯಿಂದಲೇ ಅವರನ್ನು ಇಂದು ಭೇಟಿ ಮಾಡಿದ್ದಿರಬಹುದು ಆದರೆ ಈ ಘಟನೆಗೊಂದು ರಾಜಕೀಯ ಕೋನ ಇರುವುದನ್ನು ಕಡೆಗಣಿಸುವಂತೆಯೇ ಇಲ್ಲ. ಸುದ್ದಿಗಾರರಿಗೆ ಡಿಕೆಶಿ ನೀಡಿದ ಹೇಳಿಕೆಯೂ ಇದಕ್ಕೆ ಪೂರಕವಾಗಿಯೇ ಇದೆ.

'ದೊಡ್ಡವರ ಬಗ್ಗೆ ಮಾತನಾಡಲ್ಲ'
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ರಮೇಶ್ ಜಾರಕಿಹೊಳಿ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ 'ದೊಡ್ಡವರ ಬಗ್ಗೆ ಮಾತನಾಡಲ್ಲ' ಎಂದು ವ್ಯಂಗ್ಯ ಭರಿತ ನಿಷ್ಠುರವಾದ ಹೇಳಿಕೆ ನೀಡಿದ್ದಾರೆ. ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದಕ್ಕೆ ಇದುವೇ ಸಾಕ್ಷಿ.

ಬಳ್ಳಾರಿ ಗೆದ್ದ ಬಳಿಕ ಬೆಳಗಾವಿ ಮೇಲೆ ದೃಷ್ಠಿ
ಬಳ್ಳಾರಿಯಲ್ಲಿ ವಿರೋಧ ಪಕ್ಷದ ರಾಜಕೀಯ ವಿರೋಧಿಗಳನ್ನು ಹಣಿದಿರುವ ಡಿ.ಕೆ.ಶಿವಕುಮಾರ್ ಅವರು ಸ್ವಪಕ್ಷದ ರಾಜಕೀಯ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲೆಂದೇ ಬೆಳಗಾವಿ ರಾಜಕೀಯಕ್ಕೆ ಪುನಃ ಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ.

ಭಿನ್ನಾಭಿಪ್ರಾಯಕ್ಕೆ ಕಾರಣವೇನು?
ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಪ್ರತಿಷ್ಠೆಯ ವಿಷಯವಾಗಿದ್ದ ಬೆಳಗಾವಿ ಸಹಕಾರಿ ಬ್ಯಾಂಕ್ ಚುನಾವಣೆ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಬಲ ನೀಡಿದ್ದರು. ಇದು ಬೆಳಗಾವಿಯ ಕಾಂಗ್ರೆಸ್ ದೊರೆಗಳೆಂದು ಕರೆಸಿಕೊಳ್ಳುವ ಜಾರಕಿಹೊಳಿ ಸಹೋದರರಿಗೆ ಜೀರ್ಣವಾಗಲಿಲ್ಲ. ಹಾಗಾಗಿ ಅವರು ಅಸಮಾಧಾನಗೊಂಡು ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ಬಳಿ ಡಿ.ಕೆ.ಶಿವಕುಮಾರ್ ಬೆಳಗಾವಿ ರಾಜಕೀಯದಲ್ಲಿ ತಲೆ ಹಾಕದಂತೆ ಒತ್ತಡ ಹೇರಿದ್ದರು.

ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಏನು?
ಏನೇ ವಿವಾದಗಳು ಆದರೂ ಸಹ ಡಿ.ಕೆ.ಶಿವಕುಮಾರ್ ಶಾಂತಚಿತ್ತವಾಗಿಯೇ ಇದ್ದರು. ರಮೇರ್ಶ ಜಾರಕಿಹೊಳಿ ಅವರ ಕೈಮೇಲಾದಾಗಲೂ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಈಗ ಮತ್ತೆ ಬಳ್ಳಾರಿ ವಿಜಯದ ನಂತರ ಡಿ.ಕೆ.ಶಿವಕುಮಾರ್ ಕೈ ಹೆಚ್ಚು ಬಲವಾಗಿದ್ದು ಈಗ ಬೆಳಗಾವಿಗೆ ಮತ್ತೆ ಕಾಲಿಟ್ಟಿದ್ದಾರೆ.












Click it and Unblock the Notifications