ಯಡಿಯೂರಪ್ಪ, ಮೋದಿ ಸರ್ಕಾರವೇ ನಮ್ಮ ಮೊದಲ ಟಾರ್ಗೆಟ್: ಸತೀಶ್ ಜಾರಕಿಹೊಳಿ
ಬೆಳಗಾವಿ, ಮಾರ್ಚ್ 22: ಮಾರ್ಚ್ 25ರೊಳಗೆ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರವನ್ನೇ ಮೊದಲು ಟಾರ್ಗೆಟ್ ಮಾಡಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಕೇಂದ್ರ ಕೃಷಿ ಕಾಯ್ದೆ, ಮೋದಿ ಅವರ ಏಳು ವರ್ಷದ ಆಡಳಿತ, ತೈಲ ಬೆಲೆ ಏರಿಕೆ, ಖಾಸಗೀಕರಣ, ಸ್ಥಳೀಯವಾಗಿ ಕಳೆದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಆದರೆ ಇನ್ನೂ ಸಹ ನೀಡಿಲ್ಲ. ಇವುಗಳ ಮೇಲೆ ಉಪ ಚುನಾವಣೆಗಳನ್ನು ಎದುರಿಸುತ್ತೇವೆ. ಸರ್ಕಾರವನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತದೆ ಎಂದು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವನ್ನು ಬಹಿರಂಗ ಪಡಿಸಿದರು.

ಮಾರ್ಚ್ 25 ಅಥವಾ 26ರೊಳಗಾಗಿ ಅಭ್ಯರ್ಥಿ ಆಯ್ಕೆ
ಮಠ, ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣೆ ಸಮೀಪದಲ್ಲಿ ದೇವಸ್ಥಾನ, ಮಠ ಮಂದಿರಗಳಿಗೆ ಸರ್ಕಾರ ಅನುದಾನ ನೀಡಿದರೆ, ಚುನಾವಣೆ ಮೇಲೆ ಯಾವುದೇ ರೀತಿ ಪರಿಣಾಮ ಬಿರುವುದಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲೂ ಕೊಟ್ಟಿದೆ, ಯಡಿಯೂರಪ್ಪ ಸರ್ಕಾರದಲ್ಲೂ ಕೊಟ್ಟಿದೆ. ಇದು ರಾಜಕೀಯ ಅಂತ ಹೇಳಲಿಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಅಭ್ಯರ್ಥಿ ಹೆಸರು ಘೋಷಣೆ ವಿಳಂಬ ವಿಚಾರವಾಗಿ ಮಾತನಾಡಿ, ರಾಜಕೀಯದಲ್ಲಿ ವ್ಯತ್ಯಾಸಗಳು ಇರುತ್ತವೆ. ಅವುಗಳನ್ನು ಸರಿ ಪಡಿಸಬೇಕಾಗುತ್ತದೆ. ಆದ್ದರಿಂದ ಹೆಸರು ಘೋಷಣೆ ಮಾಡಿಲ್ಲ. ಬಿಜೆಪಿ ಪಕ್ಷದವರಿಗೆ ಎಲ್ಲ ಸಿದ್ಧವಿದೆ. ಆದರೂ ಸಹ ಅವರು ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ. ಇನ್ನೂ ಸಮಯವಿದೆ. ಮಾರ್ಚ್ 25 ಅಥವಾ 26ರೊಳಗಾಗಿ ಮಾಡಲಾಗುತ್ತದೆ ಎಂದರು.

ನಾಳೆ ದೆಹಲಿಗೆ ತೆರಳುತ್ತೇನೆ
ಉಪ ಚುನಾವಣೆಗೆ ಅಭ್ಯರ್ಥಿ ಹೆಸರು ಘೋಷಣೆ ಬಳಿಕ ಗೆಲುವಿಗೆ ತಂತ್ರಗಳನ್ನು ಮಾಡಲಾಗುತ್ತದೆ. ಚುನಾವಣಾ ಪ್ರಚಾರಕ್ಕೆ ಕೇಂದ್ರ ನಾಯಕರು ಯಾರೂ ಸಹ ಬರುವುದಿಲ್ಲ. ರಾಜ್ಯ ನಾಯಕರು ಮಾತ್ರ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನನ್ನ ಹೆಸರು ಕೇಳಿ ಬಂದಿದೆ. ಕೇಂದ್ರಕ್ಕೆ ಮೂವರು ಹೆಸರುಗಳನ್ನು ಕಳಿಸಲಾಗಿದೆ. ದೆಹಲಿಯಿಂದ ಬುಲಾವ್ ಬಂದಿದ್ದು, ನಾಳೆ ಬೆಂಗಳೂರಿಗೆ ಹೋಗಿ, ಅಲ್ಲಿಂದ ದೆಹಲಿಗೆ ತೆರಳಲಿದ್ದೇನೆ. ಚುನಾವಣೆಗೆ ಸ್ಪರ್ಧಿಸಲು ನನ್ನ ಆಸಕ್ತಿಗಿಂತ, ಹೈಕಮಾಂಡ್ ನಿರ್ಧಾರ ಮುಖ್ಯವಾಗಿರುತ್ತದೆ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳಲಿದೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.

ಸಿಡಿ ಪ್ರಕರಣ, ಕಾದು ನೋಡಬೇಕು
ಸಿಡಿ ಪ್ರಕರಣ ಉಪ ಚುನಾವಣೆಗೆ ಪ್ಲಸ್ ಆಗುವುದಿಲ್ಲ, ಮೈನಸ್ ಕೂಡಾ ಆಗುವುದಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಏನು ಕೆಲಸಗಳಾಗಿವೆ. ಬಿಜೆಪಿ ಏನು ಕೆಲಸಗಳನ್ನು ಮಾಡಿದ್ದಾರೆ ಎನ್ನುವುದರ ಮೇಲೆ ಚುನಾವಣೆ ನಡೆಯಲಿದೆ. ಜನರು ಸಹ ಜಾಗೃತರಾಗಿದ್ದು, ಕೆಲಸಗಳನ್ನು ನೋಡಿ ಮತಗಳನ್ನು ನೀಡುತ್ತಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಯುವತಿ ಬಂದರೆ ತನಿಖೆಗೆ ಅನುಕೂಲ
ಸಿಡಿ ಪ್ರಕರಣ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಯುವತಿ ಹಾಗೂ ಆರೋಪಿಗಳನ್ನು ಹುಡುಕುತ್ತಿದ್ದಾರೆ. ಆದರೆ ಎಲ್ಲಿದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಇಂದಿಲ್ಲ, ನಾಳೆ ಪತ್ತೆ ಹಚ್ಚಲಿದ್ದಾರೆ. ಯುವತಿ ಬರಬೇಕು, ಅಂದಾಗ ತನಿಖೆಗೆ ಅನುಕೂಲ ಆಗುತ್ತದೆ. ಪೊಲೀಸರು ಬೇರೆ ಬೇರೆ ರಾಜ್ಯಗಳಿಗೆ ಹೋಗಿಯೂ ಸಹ ಹುಡುಕುತ್ತಿದ್ದಾರೆ. ವೇಟ್ ಮಾಡ್ಬೇಕು, ಒತ್ತಾಯ ಮಾಡುವುದಕ್ಕೆ ಆಗೋಲ್ಲ ಎಂದರು.
ರಮೇಶ್ ಜಾರಕಿಹೊಳಿ ಅವರೊಂದಿಗೆ ಈವರೆಗೂ ಮಾತನಾಡಿಲ್ಲ. ನಾಳೆ ಬೆಂಗಳೂರಿಗೆ ಹೋಗುತ್ತೇನೆ. ಅವಕಾಶ ಸಿಕ್ಕರೆ ಮಾತನಾಡುತ್ತೇನೆ ಎಂದು ಹೇಳಿದರು.












Click it and Unblock the Notifications