ಬೆಳಗಾವಿ ಉಪ ಚುನಾವಣೆ: ಅಡ್ರೆಸ್ ಇಲ್ಲದೇ ಕಾಂಗ್ರೆಸ್ ಅಧೋಗತಿಗೆ; ಸಚಿವ ಶೆಟ್ಟರ್ ಗೇಲಿ
ಬೆಳಗಾವಿ, ಏಪ್ರಿಲ್ 3: ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಅಡ್ರೆಸ್ ಇಲ್ಲದೆ ಅಧೋಗತಿಗೆ ಹೋಗುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗೇಲಿ ಮಾಡಿದರು.
ಬೆಳಗಾವಿ ಲೋಕಸಭೆ ಉಪ ಚುನಾವಣೆ ಅಂಗವಾಗಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ದೇಶದ ಬದಲಾವಣೆ ಅಸಾಧ್ಯ. ಪ್ರಬುದ್ಧತೆಯಿಲ್ಲದ ರಾಹುಲ್ ಗಾಂಧಿಗೂ, ದಿನದ 24 ಗಂಟೆ ಜನಸೇವೆ ಮಾಡುತ್ತಿರುವ ನರೇಂದ್ರ ಮೋದಿಗೂ ಎಲ್ಲಿಯ ಹೋಲಿಕೆ. ಒಳ ಜಗಳದ ಕಾಂಗ್ರೆಸ್ಸಿಗರೇ ಟೀಕೆ ಬಿಟ್ಟು ಕೇಂದ್ರದ ಸಾಧನೆ ತಿಳಿದುಕೊಳ್ಳಿ ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ರೈತರ ಜೀವನವನ್ನು ಹಸನಾಗಿಸಲು ಕೇಂದ್ರ ಜಾರಿಗೆ ತಂದಿರುವ ಕೃಷಿ ಕಾನೂನು ಜಾರಿಗೆಗೆ ಕಾಂಗ್ರೆಸ್ ವಿರೋಧಿಸುತ್ತಿದೆ. ರೈತರನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರೈತರ ಉದ್ಧಾರ ಬಯಸದ ಕಾಂಗ್ರೆಸ್ಸಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದರು.

ಕಿತ್ತೂರು ಚೆನ್ನಮ್ಮನ, ಸಂಗೊಳ್ಳಿ ರಾಯಣ್ಣನ ನಾಡಿನ ಬೈಲಹೊಂಗಲದ ಜನತೆ ಸುರೇಶ್ ಅಂಗಡಿ ಅವರಿಗೆ 4 ಸಲ ಆಶೀರ್ವದಿಸಿದ್ದಾರೆ. ಅದೇ ರೀತಿ ಮಂಗಲ ಸುರೇಶ್ ಅಂಗಡಿ ಅವರಿಗೆ ಆಶೀರ್ವದಿಸಿ ದೇಶದ ಬದಲಾವಣೆಗಾಗಿ ಬಿಜೆಪಿಗೆ ಮತ ನೀಡಿ ಅತ್ಯಧಿಕ ಅಂತರದಿಂದ ಗೆಲುವು ತಂದುಕೊಡಬೇಕು ಎಂದು ಮನವಿ ಮಾಡಿದರು.
ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಭಾರತಕ್ಕೆ ಶಾಪವಾಗಿ ಪರಿಣಮಿಸಿದೆ ಅವರ ದುರಾಡಳಿತ ಸ್ವಾರ್ಥದಿಂದ ದೇಶ ಅಧೋಗತಿಗೆ ತಲುಪಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಬದಲಾವಣೆ ಮೂಲೆ-ಮೂಲೆಗಳಲ್ಲಿ ಕಾಣಸಿಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ಮುಂದಿಟ್ಟುಕೊಂಡು ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಧಾನಿಗಳಾಗಿ ಈಗ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟಿರುವ ಕಾಂಗ್ರೆಸ್ ನೀತಿ ದುರಾದೃಷ್ಟಕರ ಎಂದು ಟೀಕಿಸಿದರು.












Click it and Unblock the Notifications