ಬೆಳಗಾವಿ ಚುನಾವಣಾ ಕಣದಿಂದ ಸತೀಶ್ ಜಾರಕಿಹೊಳಿ ಹಿಂದಕ್ಕೆ ಸುದ್ದಿ: ಸ್ಪಷ್ಟನೆ
ಕೇಂದ್ರ ಸಚಿವ ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ ಹದಿನೇಳರಂದು ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನ ಏಪ್ರಿಲ್ 3.
ಕಾಂಗ್ರೆಸ್ಸಿನಿಂದ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿಯಿಂದ ಮಂಗಲ ಅಂಗಡಿ ನಾಮಪತ್ರ ಸಲ್ಲಿಸಿದ್ದಾರೆ. ದಿನ ಮತ್ತು ಗಳಿಗೆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದ ಸತೀಶ್, ಕರಿದಿನ ಎಂದು ಕರೆಯಲ್ಪಡುವ ಹೋಳಿ ಹುಣ್ಣಿಮೆಯ ದಿನದಂದು ನಾಮಪತ್ರ ಸಲ್ಲಿಸಿದ್ದಾರೆ.
ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಗ್ಗೆ ಸತೀಶ್ ಜಾರಕಿಹೊಳಿ ಹೆಸರು ಕೇಳಿಬರುತ್ತಿದ್ದರೂ, ರಾಷ್ಟ್ರ ರಾಜಕಾರಣದಲ್ಲಿ ಅವರಿಗೆ ಆಸಕ್ತಿ ಇಲ್ಲದೇ ಇದ್ದಿದ್ದರಿಂದ, ಅವರನ್ನು ಒತ್ತಾಯಪೂರ್ವಕವಾಗಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿತ್ತು ಎನ್ನುವುದು ಗೊತ್ತಿರುವ ವಿಚಾರ.
ಈ ನಡುವೆ, ಸಹೋದರ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ರಾಜ್ಯಾದ್ಯಾಂತ ಸುದ್ದಿಯಾಗುತ್ತಿರುವ ಈ ಸಂದರ್ಭದಲ್ಲಿ ಚುನಾವಣಾ ಕಣದಿಂದ ಸತೀಶ್ ಜಾರಕಿಹೊಳಿ ಹಿಂದಕ್ಕೆ ಸರಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿತ್ತು. ಅದಕ್ಕೆ ಸತೀಶ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಸಹೋದರರಾದ ಸತೀಶ್ ಮತ್ತು ರಮೇಶ್ ಜಾರಕಿಹೊಳಿ
ಇಬ್ಬರು ಸಹೋದರರಾದ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ರಾಜಕೀಯವಾಗಿ ಒಬ್ಬೊಬ್ಬರು ಒಂದೊಂದು ತೀರವಾಗಿದ್ದರೂ, ಸಹೋದರನ ಸಿಡಿ ಪ್ರಕರಣ ಕುಟುಂಬದ ಹೆಸರಿಗೆ ಧಕ್ಕೆ ತಂದಿತ್ತು. ಇದನ್ನು ಖುದ್ದು ಸತೀಶ್ ಕೂಡಾ ಒಪ್ಪಿಕೊಂಡಿದ್ದರು. ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರು ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, "ನಿಮಗೆ ಕೈಮುಗಿಯುತ್ತೇನೆ, ಆ ವಿಚಾರದ ಬಗ್ಗೆ ನನ್ನಲ್ಲಿ ಏನನ್ನೂ ಕೇಳಬೇಡಿ"ಎಂದಿದ್ದರು.

ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತೇನೆ ಎನ್ನುವ ಸುದ್ದಿಗೆ ಸ್ಪಷ್ಟನೆ
ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತೇನೆ ಎನ್ನುವ ಸುದ್ದಿಗೆ ಸ್ಪಷ್ಟನೆಯನ್ನು ನೀಡಿರುವ ಸತೀಶ್ ಜಾರಕಿಹೊಳಿ, "ಕಣದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.ಬೆಳಗಾವಿ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಪಾಲಾಗುವುದು ನಿಶ್ಚಿತ"ಎಂದು ಹೇಳುವ ಮೂಲಕ, ವದಂತಿ ಸುದ್ದಿಗೆ ತೆರೆ ಎಳೆದಿದ್ದಾರೆ.

ಬಿಜೆಪಿ ಅಭ್ಯರ್ಥಿಗೆ ಅನುಕಂಪದ ಮತ
"ದೆಹಲಿ ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ ಎನ್ನುವ ಮಾತು ನಿಜ, ಆದರೆ ಪಕ್ಷದ ನಿರ್ಧಾರವೇ ಇಲ್ಲಿ ಅಂತಿಮ. ಬಿಜೆಪಿ ಅಭ್ಯರ್ಥಿಗೆ ಅನುಕಂಪದ ಮತಗಳು ಸಿಗುತ್ತವೋ ಇಲ್ಲವೋ ನನಗೆ ಗೊತ್ತಿಲ್ಲ. ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ"ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟ ಪಡಿಸಿದರು.

ಪಕ್ಷದಲ್ಲಿ ಎಲ್ಲರ ಬೆಂಬಲ ನನಗೆ ಸಿಗಲಿದೆ
"ಕೆಲವು ದಶಕಗಳಿಂದ ಬಿಜೆಪಿ ಪಾಲಾಗಿರುವ ಬೆಳಗಾವಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಬಾವುಟ ಹಾರುವ ವಿಶ್ವಾಸವಿದೆ. ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇವೆ. ಪಕ್ಷದಲ್ಲಿ ಎಲ್ಲರ ಬೆಂಬಲ ನನಗೆ ಸಿಗಲಿದೆ"ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ












Click it and Unblock the Notifications