ಬಿಜೆಪಿ ಸೇರಲು ಹಣದ ಆಫರ್; ಶ್ರೀಮಂತ ಪಾಟೀಲ ಯೂ ಟರ್ನ್!
ಬೆಳಗಾವಿ, ಸೆಪ್ಟೆಂಬರ್ 13; "ಬಿಜೆಪಿ ಸೇರಲು ಹಣದ ಆಮಿಷ ವೊಡ್ಡಿದ್ದರು" ಎಂಬ ಕಾಗವಾಡದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಹೇಳಿಕೆ ವಿವಾದ ಹುಟ್ಟು ಹಾಕಿದೆ. ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ. ಶಾಸಕರು ತಮ್ಮ ಹೇಳಿಕೆಯಲ್ಲಿ ಯೂ ಟರ್ನ್ ಪಡೆದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ್ದ ಶ್ರೀಮಂತ ಪಾಟೀಲ, "ಕಾಂಗ್ರೆಸ್ನಿಂದ ಬರುವುದಕ್ಕೆ ಬಿಜೆಪಿಯವರು ಹಣದ ಆಫರ್ ಕೊಟ್ಟಿದ್ದು ನಿಜ. ಹಣ ಪಡೆಯದೇ ಬಿಜೆಪಿ ಸೇರಿದ್ದೇನೆ" ಎಂದು ಹೇಳಿದ್ದಾರೆ.
"ಎಷ್ಟು ಹಣ ಬೇಕು ಎಂದು ಕೇಳಿದ್ದರು. ಒಂದು ಪೈಸೆಯನ್ನೂ ಪಡೆಯುವುದಿಲ್ಲ. ಸರ್ಕಾರ ಬಂದ ನಂತರ ಒಳ್ಳೆಯ ಸ್ಥಾನಮಾನ ಕೊಡಿ, ಚೆನ್ನಾಗಿ ನಿರ್ವಹಣೆ ಮಾಡಿ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದೆ" ಎಂದು ಶಾಸಕ ಶ್ರೀಮಂತ ಪಾಟೀಲ ಸ್ಪಷ್ಟಪಡಿಸಿದ್ದಾರೆ.
"ಹಣ ಪಡೆಯದೇ ಬಿಜೆಪಿ ಸೇರಿದ್ದೇನೆ. ಯಾವ ಕಾರಣದಿಂದ ಸಚಿವ ಸಂಪುಟದಲ್ಲಿ ಸ್ಥಾನ ಕೊಟ್ಟಿಲ್ಲವೋ ಗೊತ್ತಿಲ್ಲ. ಮುಂದಿನ ತಿಂಗಳಿನಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆದಾಗ ಖಂಡಿತವಾಗಿಯೂ ಅವಕಾಶ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ" ಎಂದು ಶ್ರೀಮಂತ ಪಾಟೀಲ ತಿಳಿಸಿದ್ದಾರೆ.
|
ಎಸಿಬಿ ತನಿಖೆಗೆ ಆಗ್ರಹ
ಕಾಗವಾಡದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಹೇಳಿಕೆ ಬಗ್ಗೆ ಟ್ವೀಟ್ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ಬಿಜೆಪಿಯವರು ಆಪರೇಷನ್ ಕಮಲದಲ್ಲಿ ಮಾಜಿ ಸಚಿವರಾದ ಶ್ರೀ ಶ್ರೀಮಂತ್ ಪಾಟೀಲ್ ಅವರಿಗೆ ಹಣದ ಆಮಿಷವೊಡ್ಡಿದ್ದರು ಎಂದು ನಿಜ ಹೇಳಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಇವರಿಗೆ ಹಣದ ಆಮಿಷವೊಡ್ಡಿದವರ ವಿರುದ್ಧ ಎಸಿಬಿ ಈ ಕೂಡಲೇ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.

ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ
ಮಾಜಿ ಸಚಿವ, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಶ್ರೀಮಂತ ಪಾಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
"ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಬಿಜೆಪಿ ಸೇರಲು ಬಿಜೆಪಿಯವರು ಹಣದ ಆಫರ್ ನೀಡಿದ ಬಗ್ಗೆ ಸ್ವತಃ ಒಪ್ಪಿಕೊಂಡಿದ್ದಾರೆ. 17 ಶಾಸಕರನ್ನು ಬಿಜೆಪಿ ಅಕ್ರಮ ದುಡ್ಡಿನಿಂದ ಖರೀದಿಸಿದೆ ಎಂಬುದು ಕೊನೆಗೂ ನಿಜವಾಗಿದೆ. ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ಅಕ್ರಮ ಸಂತಾನ. ಹಾಗಾದರೆ ಶಾಸಕರ ಖರೀದಿಗೆ ಬಳಕೆಯಾದ ಹಣದ ಮೂಲ ಯಾವುದು?" ಎಂದು ಪ್ರಶ್ನಿಸಿದ್ದಾರೆ.
"ಆಪರೇಷನ್ ಕಮಲ ಎಂಬ ಅನಿಷ್ಟ ಸಂತತಿಯ ಸೃಷ್ಟಿಕರ್ತರಾದ ಬಿಜೆಪಿಯವರು 17 ಶಾಸಕರ ಖರೀದಿಗೆ ಕೋಟಿ ಕೋಟಿ ಸುರಿದಿರುವುದು ಸತ್ಯ.'ನಾ ಕಾವೂಂಗಾ.,ನಾ ಕಾನೇ ದೂಂಗಾ' ಎಂದು ಪೋಸ್ ಕೊಡುವ ಮೋದಿಯವರೆ,ಕರ್ನಾಟಕದಲ್ಲಿ 17 ಶಾಸಕರ ಖರೀದಿಗೆ ಸುರಿದ ಅಕ್ರಮ ಹಣ ಯಾರು ತಿಂದು ವಿಸರ್ಜನೆ ಮಾಡಿದ ಹಣ ಎಂದು ಹೇಳುವಿರಾ? ಈ ಅಕ್ರಮ ಹಣದ ಮೂಲದ ಬಗ್ಗೆ ತನಿಖೆ ನಡೆಸುವಿರಾ?" ಎಂದು ಸವಾಲು ಹಾಕಿದ್ದಾರೆ.
"ಸಂವಿಧಾನಬದ್ಧವಾಗಿ ಚುನಾಯಿತವಾದ ಸರ್ಕಾರವನ್ನು ಸಂವಿಧಾನಬಾಹಿರವಾಗಿ ಕೆಡವುವ ಹೀನ ಸಂಸ್ಕೃತಿ ಬಿಜೆಪಿಯವರದ್ದು. ಪಕ್ಷಾಂತರ ನಿಷೇಧ ಕಾಯ್ದೆಗೆ ಮಸಿ ಬಳಿದ ಬಿಜೆಪಿ ದುಷ್ಟರ ಕೂಟವಿದ್ದಂತೆ. ರಾಜ್ಯದಲ್ಲಿ 17 ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರಕ್ಕೆ ಅಧಿಕಾರದಲ್ಲಿಳಿಯುವ ಯಾವುದೇ ನೈತಿಕತೆಯಿಲ್ಲ. ಬಿಜೆಪಿಯವರ ಭ್ರಷ್ಟರ ಸರ್ಕಾರವಿದು" ಎಂದು ಟೀಕಿಸಿದ್ದಾರೆ.
|
ಶಾಸಕ ಶ್ರೀಮಂತ ಪಾಟೀಲ್ ಹೇಳಿಕೆ
"ನಾನು ಹಣ ಪಡೆದುಕೊಂಡು ಬಿಜೆಪಿ ಸೇರಿಲ್ಲ. ಎಷ್ಟು ಹಣ ಬೇಕು ಎಂದು ಕೇಳಿದ್ದರು. ಆದರೆ ನಾನು ಹಣ ಬೇಡ ಜನರ ಸೇವೆ ಮಾಡಲು ಸಚಿವ ಸ್ಥಾನ ನೀಡಿ ಎಂದು ಕೇಳಿದ್ದೆ" ಎಂದು ಕಾಗವಾಡದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದಾರೆ.

ಅಧಿವೇಶನದಲ್ಲಿ ಚರ್ಚೆ?
ಕರ್ನಾಟಕ ವಿಧಾನಸಭೆ ಅಧಿವೇಶನ ಸೋಮವಾರ ಆರಂಭವಾಗಲಿದೆ. ಅಧಿವೇಶನದಲ್ಲಿ ಶಾಸಕ ಶ್ರೀಮಂತ ಪಾಟೀಲ್ ಹೇಳಿಕೆಯನ್ನು ಕಾಂಗ್ರೆಸ್ ಪ್ರಸ್ತಾಪಿಸುವ ಸಾಧ್ಯತೆ ಇದೆ. ಈ ವಿಚಾರವಾಗಿ ಚರ್ಚೆ ನಡೆಸಲು ಅವಕಾಶ ನೀಡುವಂತೆ ಪಟ್ಟು ಹಿಡಿಯುವ ನಿರೀಕ್ಷೆ ಇದೆ.












Click it and Unblock the Notifications