ಮಹಾರಾಷ್ಟ್ರದಲ್ಲಿ ಕೀರ್ತಿ ಪತಾಕೆ ಹಾರಿಸಿದ ಬೆಳಗಾವಿಯ ಹೆಮ್ಮೆಯ ಎಮ್ಮೆ
ಬೆಳಗಾವಿ, ಡಿಸೆಂಬರ್ 14: ಮಂಗಳವಾರ ಡಿಸೆಂಬರ್ 12ರಂದು ಮಹಾರಾಷ್ಟ್ರ ಕೊಲ್ಹಾಪುರ ಜಿಲ್ಲೆಯ ಗಡಿಂಗ್ಲಜ್ ನಗರದಲ್ಲಿ ನಡೆದ ಎಮ್ಮೆಗಳ ಓಟದ ಸ್ಪರ್ದೆಯಲ್ಲಿ, ಕನ್ನಡ ನೆಲದ ಹುಲ್ಲು ಮೇಯ್ದು, ಹಿಡಕಲ್ ಡ್ಯಾಮಿನ ನೀರು ಕುಡಿದು ಸಧೃಡವಾಗಿ ಬೆಳೆದಿದ್ದ ಬೆಳಗಾವಿಯ ಎಮ್ಮೆ ಹೈ ಸ್ಪೀಡ್ ರನ್ ಮಾಡಿ ಮಹಾರಾಷ್ಟ್ರದ ಎಮ್ಮೆಗಳನ್ನು ಸೋಲಿಸಿ ನಂಬರ್ ಒನ್ ಸ್ಥಾನ ಪಡೆದಿದೆ.
ಗಡಿಂಗ್ಲಜ್ ನಗರದಲ್ಲಿ ನಡೆದ ಎಮ್ಮೆಗಳ ಓಟದಲ್ಲಿ ಕೊಲ್ಹಾಪುರ, ಸಾಂಗ್ಲಿ, ಮಿರಜ, ಸತಾರಾ ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಿಂದ ನೂರಾರು ಎಮ್ಮೆಗಳು ಭಾಗವಹಿಸಿದ್ದವು ಇದನ್ನು ನೋಡಲು ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಸಾವಿರಾರು ಜನ ಸೇರಿಕೊಂಡಿದ್ದರು.
ನೂರಾರು ಎಮ್ಮೆಗಳ ಸಾಲಿನಲ್ಲಿ ಬೆಳಗಾವಿಯ ಗಂಡು ಮೆಟ್ಟಿನ ನೆಲದ ಎಮ್ಮೆಯೂ ನಿಂತುಕೊಂಡಿತ್ತು ಆಯೋಜಕರು ಕೆಂಪು ರೂಮಾಲು ತೋರಿಸುವದಷ್ಟೆ ತಡ ಬೆಳಗಾವಿಯ ಈ ಎಮ್ಮೆ ಮಹಾರಾಷ್ಟ್ರದ ಎಮ್ಮೆಗಳನ್ನು ಹಿಂದಕ್ಕೆ ಹಾಕಿ ನಿಗದಿತ ಸಮಯಕ್ಕಿಂತ ಮೊದಲೇ ಗುರಿ ಮುಟ್ಟಿ ಮಹಾರಾಷ್ಡ್ರದ ನೆಲದಲ್ಲಿ ಕರ್ನಾಟಕದ ವಿಜಯದ ಪತಾಕೆ ಹಾರಿಸಿತು.
ಬೆಳಗಾವಿಯ ವಡಗಾಂವ ವಿಷ್ಣು ಗಲ್ಲಿಯ ನಿಖಿಲ್ ಪಾಂಡುರಂಗ ದೇಸಾಯಿ ಅವರು ಸಾಕಿ ಬೆಳೆಸಿದ ಎಮ್ಮೆ ಇದಾಗಿದ್ದು ಮಹಾರಾಷ್ಟ್ರದಲ್ಲಿ ನಡೆದ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ಅರ್ಜುನ್ ಶ್ರೀ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಸ್ಪರ್ದೆಯಲ್ಲಿ ಸಾಧನೆ ಮಾಡಿದ ಎಮ್ಮೆಗೆ ಏಳು ಚೀಲ ಶೇಂಗಾ ಹಿಂಡಿ ಎಮ್ಮೆ ಸಾಕಿದ ಮಾಲೀಕ ನಿಖಿಲ್ಗೆ ಏಳು ಸಾವಿರ ರೂಪಾಯಿ ಮತ್ತು ಪಾರಿತೋಷಕ ನೀಡಿ ಗೌರವಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಸಾಧನೆ ಮಾಡಿದ ಬೆಳಗಾವಿಯ ಎಮ್ಮೆಗೆ ಬೆಳಗಾವಿ ನಗರದಲ್ಲಿ ಸತ್ಕಾರ ಸನ್ಮಾನ ನಡೆಯುತ್ತಿರುವದು ವಿಶೇಷ..ನಮ್ಮ ಎಮ್ಮೆ ..ನಮ್ಮ ಹೆಮ್ಮೆ...