ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಅಂಜಲಿ ನಿಂಬಾಳ್ಕರ್, ಯಾರಿಗೊಲಿಯಲಿದೆ ಸಚಿವೆ ಪಟ್ಟ?
ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆ ಖಾತ್ರಿ ಆಗುತ್ತಿದ್ದಂತೆ ಖಾತೆ ಹಂಚಿಕೆ ಕಸರತ್ತು ಬಿರುಸಿನಿಂದ ನಡೆಯುತ್ತಿದೆ. ಬಹುತೇಕ ಸಚಿವರು ನಮಗೆ ಖಾತೆ ಕೊಡಿ ಎಂದು ಹಿರಿಯ ನಾಯಕರುಗಳನ್ನು ದುಂಬಾಲು ಬಿದ್ದಿದ್ದಾರೆ.
ಸಚಿವ ಸ್ಥಾನಗಳು ಜಾತಿ ಆಧಾರದಲ್ಲಿ ಹಂಚಿಕೆ ಆಗುವುದು ಬಹುತೇಕ ಖಚಿತವಾಗಿದ್ದು, ಅಂತಿಮ ಪಟ್ಟಿಯಲ್ಲಿ ಯಾರ್ಯಾರಿರುತ್ತಾರೆ ಎಂಬುದು ಉಳಿದಿರುವ ಕುತೂಹಲ. ಆದರೆ ಮಹಿಳಾ ಕೋಟಾದಡಿ ಯಾರಿಗೆ ಸಚಿವೆ ಪಟ್ಟ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ಇಬ್ಬರು ಮಹಿಳಾ ಶಾಸಕಿಯರಿದ್ದು ಇಬ್ಬರೂ ಕಾಂಗ್ರೆಸ್ನಿಂದ ಆಯ್ಕೆ ಆಗಿ ಬಂದವರೆ ಅಲ್ಲದೆ ಇಬ್ಬರೂ ಬೆಳಗಾವಿ ಜಿಲ್ಲೆಯವರೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಬ್ಬರು ಅಂಜಲಿ ನಿಂಬಾಳ್ಕರ್. ಪ್ರಸ್ತುತ ಇಬ್ಬರೂ ಸಚಿವ ಸ್ಥಾನದ ರೇಸಿನಲ್ಲಿದ್ದು ಖಾತೆ ಯಾರಿಗೆ ಸಿಗಲಿದೆ ಎಂಬುದು ಕುತೂಹಲದ ವಿಷಯ.

ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪರಮೇಶ್ವರ್, ಡಿಕೆ ಶಿವಕುಮಾರ್ ಅವರ ಬೆಂಬಲ ಇದೆ ಎನ್ನಲಾಗಿದೆ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಚಿವ ಸ್ಥಾನಕ್ಕೆ ಜಾರಕಿಹೊಳಿ ಸಹೋದರರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಸುದ್ದಿ ಇದ್ದು, ಅಂಜಲಿ ನಿಂಬಾಳ್ಕರ್ ಪರ ಜಾರಕಿಹೊಳಿ ಸಹೋದರರು ಬ್ಯಾಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಆಯ್ಕೆ ಮಾಡಿದ್ದಾಗಿನಿಂದಲೂ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಲಕ್ಷ್ಮಿ ಅವರನ್ನು ಕೆಪಿಸಿಸಿಯ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಮಾಡಿದ ಮೇಲೆ ಅಸಮಾಧಾನ ಹೆಚ್ಚಾಯಿತು. ಹಾಗಾಗಿಯೇ ಸತೀಶ್ ಜಾರಕಿಹೊಳಿ ಅವರು ಲಕ್ಷ್ಮಿ ಅವರ ಸಚಿವ ಸ್ಥಾನಕ್ಕೆ ಅಡ್ಡಗಾಲು ಹಾಕುತಿದ್ದಾರೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿ ಅವರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಪ್ತರಾಗಿದ್ದು, ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಚಿವ ಸ್ಥಾನ ನೀಡದಂತೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನನ್ನನ್ನು ಸೋಲಿಸಲು ಎಷ್ಟೆಲ್ಲಾ ಪ್ರಯತ್ನ ಪಟ್ಟರು ಆದರೂ ನಾನು ಭಾರಿ ಅಂತದಿಂದ ಗೆದ್ದು ಬಂದೆ, ಈಗಲೂ ಅಷ್ಟೆ ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ ಇಲ್ಲದಿದ್ದರೆ ಪಕ್ಷಕ್ಕೆ ಕಾರ್ಯಕರ್ತೆಯಾಗಿ, ಕ್ಷೇತ್ರಕ್ಕೆ ಶಾಸಕಿಯಾಗಿ ಕಾರ್ಯ ಮಾಡುತ್ತೇನೆ' ಎಂದಿದ್ದಾರೆ.












Click it and Unblock the Notifications