ಜನಸೇವಕ್ ಸಮಾವೇಶದಲ್ಲಿ ಅಮಿತ್ ಶಾ ಭಾಷಣ; ಮುಖ್ಯಾಂಶಗಳು
ಬೆಳಗಾವಿ, ಜನವರಿ 17: "ಕಾಂಗ್ರೆಸ್ ಪಕ್ಷದವರಿಗೆ ನಾನು ಕೇಳುವೆ. ನಿಮ್ಮದು 10 ವರ್ಷ ಸರ್ಕಾರ ಇದ್ದಾಗ ಕರ್ನಾಟಕಕ್ಕೆ ಏನು ಕೊಡುಗೆ ನೀಡಿದಿರಿ?. ರಾಜ್ಯಕ್ಕೆ ನೀಡಿದ ಅನುದಾನ ನೀಡಿದ ಪಟ್ಟಿ ನೀಡುವಿರಾ?" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದರು.
ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಬೆಳಗಾವಿಯಲ್ಲಿ 'ಜನಸೇವಕ ಸಮಾವೇಶ'ದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. "ನಮ್ಮ ಮಿತ್ರ ಸುರೇಶ್ ಅಂಗಡಿಯರನ್ನು ಮರೆಯೋಕೆ ಆಗುತ್ತಿಲ್ಲ. ಅವರ ನಗುಮುಖದ ಮುಖವನ್ನು ಮರೆಯೋಕೆ ಆಗುತ್ತಿಲ್ಲ" ಎಂದು ದಿ. ಸುರೇಶ್ ಅಂಗಡಿ ಅವರನ್ನು ನೆನಪು ಮಾಡಿಕೊಂಡರು.
ಸಮಾವೇಶ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ವೇದಿಕೆ ಮೇಲಿದ್ದ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ರನ್ನು ವೇದಿಕೆಯಿಂದಲೇ ಕಾರ್ಯಕರ್ತರಿಗೆ ಪರಿಚಯಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
"ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲು ನಾನು ದೆಹಲಿಯಿಂದ ಬೆಳಗಾವಿಗೆ ಬಂದಿರುವೆ. ಬೆಳಗಾವಿ ಜನರಿಗೆ ಮಕರ ಸಂಕ್ರಮಣದ ಶುಭಾಶಯ ತಿಳಿಸುವೆ. ಸಂಕ್ರಮಣದಿಂದ ಎಲ್ಲರಿಗೂ ಉನ್ನತಿ ಸಿಗಲಿ" ಎಂದು ಹೇಳಿದರು.
ತಮ್ಮ ಭಾಷಣದಲ್ಲಿ ಬೆಳವಾಡಿ ಮಲ್ಲಮ್ಮರನ್ನು ಸ್ಮರಿಸಿದ ಅಮಿತ್ ಶಾ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮರನ್ನು ಮರೆಯೋಕೆ ಸಾಧ್ಯವಿಲ್ಲ ಎಂದರು. "ಮುಂಬೈ ಕರ್ನಾಟಕ ಕನ್ನಡಿಗರು, ಮರಾಠಿಗರ ಬಾಂಧವ್ಯ ಭಾರತದ ಏಕತೆಯನ್ನ ತೋರಿಸುತ್ತದೆ" ಎಂದರು.

ಅಮಿತ್ ಶಾ ಭಾಷಣದ ಮುಖ್ಯಾಂಶಗಳು
* ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಶ್ರಮ, ಒಗ್ಗಟ್ಟಿನಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರತಿಶತ 80 ರಷ್ಟು ಗ್ರಾಮ ಪಂಚಾಯಿತಿಗೆಳನ್ನು ಗೆದ್ದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನೀವೂ ಮತಗಳಿಂದ ನಮ್ಮ ಜೋಳಿಗೆ ತುಂಬಿದ್ದೀರಿ.
* 70 ವರ್ಷಗಳಿಂದ ಜೀವಂತವಾಗಿದ್ದ ಸಮಸ್ಯೆಗಳನ್ನು ಯಾರು ಮುಟ್ಟಿರಲಿಲ್ಲ. ಹಿಂದೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಸಮಸ್ಯೆ ಬಗೆಹರಿಸಿರಲಿಲ್ಲ. ಆದರೆ, ಮೋದಿ ಬಗೆಹರಿಸಿದರು. ಕಾಶ್ಮೀರ ಈಗ ಭಾರತದ ಅಂಗವಾಗಿದೆ. ಕಾಶ್ಮೀರವನ್ನು ನೆಹರು, ಮನಮೋಹನ ಸಿಂಗ್ ತನಕ ಯಾರು ಮುಟ್ಟುವ ಪ್ರಯತ್ನ ಮಾಡಿರಲಿಲ್ಲ.
* ವಿರೋಧ ಪಕ್ಷದವರು ವಿರೋಧಿಸಿದರೂ ಕೆಲವು ತಿಂಗಳಿನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿದೆ. 2014ರ ತನಕ ಏನಾಗಿತ್ತು. ದೇಶದಲ್ಲಿ ಭ್ರಷ್ಟಾಚಾರ, ದೇಶದ ಸುರಕ್ಷತೆ ಏನಾಗಿತ್ತು ಎಂದು ನಿಮಗೆ ತಿಳಿದಿದೆ.

ಪಾಕಿಸ್ತಾನಕ್ಕೆ ತಕ್ಕ ಉತ್ತರ
* 2014 ರಿಂದ 2019ರ ರವರೆಗೆ ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸಿತು. ಅವರಿಗೆ ನೆನಪಿರಲಿಲ್ಲ ಕಾಂಗ್ರೆಸ್ ಸರ್ಕಾರ ಇದೆ ಎಂದು ಭಾವಿಸಿದ್ದರು. ಆದರೆ, ನಾವೂ ಪಾಕಿಸ್ತಾನದ ಮನೆಗಳಿಗೆ ನುಗ್ಗಿ ಸೈಜಿರ್ಕಲ್ ಸ್ಟ್ರೈಕ್ ಮಾಡಿ ಪ್ರತ್ಯುತ್ತರ ನೀಡಿದೆವು.
* ಮನೆ ಮನೆಗಳಿಗೆ ವಿದ್ಯುತ್, ಪ್ರತಿಯೊಬ್ಬರಿಗೂ ಸೂರು ಕೊಡುವ ಯೋಜನೆಯನ್ನು ಮೋದಿ ಸರ್ಕಾರ ಮಾಡಿದೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಬಡವರಿಗೆ ಗ್ಯಾಸ್, ಮನೆ, ವಿದ್ಯುತ್ ಏಕೆ ಸಿಗಲಿಲ್ಲ?. ಕಾಂಗ್ರೆಸ್ಗೆ ಗರೀಬ್ ಹಟಾವೋ ಬೇಕಿರಲಿಲ್ಲ. ಅವರಿಗೆ ಬಡವರನ್ನು ಹಟಾವೋ ಮಾಡುವುದು ಬೇಕಾಗಿತ್ತು.

ಕೋವಿಡ್ ಪರಿಸ್ಥಿತಿ ನಿಭಾಯಿಸಿದ್ದಾರೆ
* ಆತ್ಮನಿರ್ಭರ ಯೋಜನೆ ಮೂಲಕ ಮೋದಿಯವರು ಸ್ವದೇಶಿ ವಸ್ತುಗಳಿಗೆ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೂ ಬ್ರಾಂಡ್ ಬ್ಯಾಂಡ್ ಸೇವೆ ಸಿಗಲಿದೆ.
* ನರೇಂದ್ರ ಮೋದಿಯವರು ಸರ್ಮರ್ಥವಾಗಿ ಕೋವಿಡ್ ಪರಿಸ್ಥಿತಿ ನಿಭಾಯಿಸಿದ್ದಾರೆ. ವಾಕ್ಸಿನ್ ಬಗ್ಗೆಯೂ ವಿರೋಧ ಪಕ್ಷದವರು ವಿರೋಧ ಮಾಡುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ತಯಾರಾದ 2 ಲಸಿಕೆಗಳು ಸುರಕ್ಷಿತವಾಗಿವೆ. ಎಲ್ಲರೂ ಶಿಸ್ತುಬದ್ಧವಾಗಿ ಲಸಿಕೆ ಪಡೆಯಿರಿ. ದೇಶ ಶೀಘ್ರವೇ ಕೋವಿಡ್ನಿಂದ ಮುಕ್ತವಾಗಲಿದೆ.

ಚುನಾವಣೆಯಲ್ಲಿ ಬೆಂಬಲ ಕೊಡಿ
* ಕೋವಿಡ್ ಕಾಲದಲ್ಲಿಯೂ ಕರ್ನಾಟಕ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಕೋವಿಡ್ ಸಮಯದಲ್ಲಿ ಯಡಿಯೂರಪ್ಪ ಆಟೋ ಚಾಲಕರಿಗೆ, ರೈತರಿಗೆ ಸಹಾಯ ಧನ ನೀಡಿ ನೆರವಿಗೆ ಬಂದಿದ್ದಾರೆ.
* ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಡಬಲ್ ಇಂಜಿನ್ ತರಹ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರು ಮುಂದಿನ ದಿನಗಳಲ್ಲಿ ಬರೋ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶೇಕಡಾ 75ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಬೇಕಾಗಿದೆ.












Click it and Unblock the Notifications