Get Updates
Get notified of breaking news, exclusive insights, and must-see stories!

ಸ್ವಾಭಿಮಾನದ ಪ್ರತೀಕ ಹುದಲಿಯ ಖಾದಿ ಉದ್ಯಮ

ಒಂದು ಕಾಲದಲ್ಲಿ ಭಾರತೀಯರ ಸ್ವಾಭಿಮಾನ ಪ್ರತೀಕವೆನ್ನಿಸಿದ್ದ ಖಾದಿಯನ್ನು ಬೆಳಗಾವಿಯ ಹುದಲಿಯಲ್ಲಿ ಪರಿಚಯಿಸಿದ್ದು ಗಾಂಧಿವಾದಿ ಗಂಗಾಧರರಾವ್ ದೇಶಪಾಂಡೆ. ಇಂದು ಸಹ ಗುಣಮಟ್ಟದ ಖಾದಿ ಎಂದರೆ ಹುದಲಿಯದ್ದು ಎಂಬ ಭಾವನೆ ಗಟ್ಟಿಯಾಗಿದೆ.

ಬೆಳಗಾವಿ, ಮೇ 18: ಬೆಳಗಾವಿ ಜಿಲ್ಲೆಯ ಹುದಲಿ ಎಂಬ ಹೆಸರು ಕೇಳಿದೊಡನೆ ತಟ್ಟಂಥ ನೆನಪಾಗುವುದು ಖಾದಿ ಉದ್ಯಮ. ಒಂದು ಕಾಲದಲ್ಲಿ ಭಾರತೀಯರ ಸ್ವಾಭಿಮಾನ ಪ್ರತೀಕವೆನ್ನಿಸಿದ್ದ ಖಾದಿಯನ್ನು ಬೆಳಗಾವಿಯ ಹುದಲಿಯಲ್ಲಿ ಪರಿಚಯಿಸಿದ್ದು ಗಾಂಧಿವಾದಿ ಗಂಗಾಧರರಾವ್ ದೇಶಪಾಂಡೆ.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಹೊರಬಂದು ನಮ್ಮತನದ ಸೊಗಡನ್ನು ಉಳಿಸಿಕೊಳ್ಳುವುದಕ್ಕೆ ಖಾದಿ ಉದ್ಯಮವನ್ನು ಪ್ರೋತ್ಸಾಹಿಸುವುದು ಮತ್ತು ಅದರಿಂದಾಗಿ ಉದ್ಯೋಗ ಸೃಷ್ಟಿ ಮಾಡುವುದು ದೇಶಪಾಂಡೆಯವರ ಆದ್ಯ ಉದ್ದೇಶವಾಗಿತ್ತು.[ಏಪ್ರಿಲ್ 24 ರಿಂದ ಮೇ 23ರವರೆಗೆ 'ಖಾದಿ ಉತ್ಸವ', ಸಿಎಂ ಉದ್ಘಾಟನೆ]

ಅದಕ್ಕೆಂದೇ ಅಪ್ಪಟ ಗಾಂಧಿವಾದಿ ಹಾಗೂ ಖಾದಿಪ್ರೇಮಿ ಹುದಲಿ ಗಂಗಾಧರರಾವ್ ದೇಶಪಾಂಡೆ ಅವರ ಪರಿಶ್ರಮದ ಫಲವಾಗಿ 1923ರಲ್ಲಿ ಹುದಲಿಯಲ್ಲಿ ಖಾದಿ ಕೆಲಸ ಆರಂಭಗೊಂಡಿತು.

ಆ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ (ಸಾಬರಮತಿ), ಸರ್ದಾರ ವಲ್ಲಭಭಾಯಿ ಪಟೇಲ್ (ಬಾರ್ಡೋಲಿ), ರಾಜಾಜಿ (ತ್ರಿಚುನಗೂಡ), ಆಚಾರ್ಯ ಕೃಪಾಲಿನಿ (ಸೇವಾಪುರಿ) ರಾಜೇಂದ್ರ ಪ್ರಸಾದ (ಸದಾಕತ) ಹಾಗೂ ಗಂಗಾಧರರಾವ್ ದೇಶಪಾಂಡೆ (ಹುದಲಿ) ಅವರ ನೇತೃತ್ವದಲ್ಲಿ ದೇಶದಾದ್ಯಂತ ಆರು ಆಶ್ರಮಗಳು ಆರಂಭಗೊಂಡವು.[ಕರ್ನಾಟಕದಲ್ಲೂ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಕಡ್ಡಾಯ?]

1923ರಲ್ಲಿ ಕುಮರಿ ಆಶ್ರಮದಲ್ಲಿ ಖಾದಿ ಬೀಜಾಂಕುರಗೊಂಡರೂ 1925ರಿಂದ ಹುದಲಿ ಗ್ರಾಮದಲ್ಲಿ ಖಾದಿ ಉತ್ಪಾದನೆಗೆ ಚಾಲನೆ ದೊರಕಿತು. ರಾಮಚಂದ್ರ ವಡವಿ, ಪುಂಡಲೀಕಜಿ ಕಾತಗಡೆ, ತಿಮ್ಮಪ್ಪ ನಾಯಕ, ಅಣ್ಣಾ ಬಸಪ್ಪ, ವಾಮನರಾವ್ ಬಿದರಿ, ಅಣ್ಣು ಗುರೂಜಿ, ಗಂಗಪ್ಪಾ ಯಮಕನಮರ್ಡಿ ಸೇರಿದಂತೆ ಅನೇಕ ಗಾಂಧಿವಾದಿಗಳು ಖಾದಿ ಪ್ರಚುರಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. [ಸಭ್ಯತೆ,ಸ್ವಾತಂತ್ರ್ಯ, ರೈತರ ಏಳಿಗೆ 'ಖಾದಿ' ಯಲ್ಲಿದೆ: ಮೋದಿ]

ಬಿತ್ತು ಬ್ರಿಟಿಷರ ಕೆಂಗಣ್ಣು

ಬಿತ್ತು ಬ್ರಿಟಿಷರ ಕೆಂಗಣ್ಣು

ಈ ಸಂದರ್ಭದಲ್ಲಿ ನಡೆದ ಕಾಯ್ದೆ ಭಂಗ ಚಳವಳಿ ಹಾಗೂ ಉಪ್ಪಿನ ಸತ್ಯಾಗ್ರಹದ ಪರಿಣಾಮ ಕುಮರಿ ಆಶ್ರಮದ ಮೇಲೆ ಬ್ರಿಟೀಷ್ ರ ಕಣ್ಣುಬಿತ್ತು. ಆಶ್ರಮ ಜಫ್ತಿ ಮಾಡಿದ ಬ್ರಿಟೀಷರು ಅನೇಕ ಮುಖಂಡರನ್ನು ಜೈಲಿಗೆ ಕಳುಹಿಸಿದರು.

ಕಾರ್ಯ ನಿಲ್ಲಲಿಲ್ಲ!

ಕಾರ್ಯ ನಿಲ್ಲಲಿಲ್ಲ!

ಈ ಘಟನೆಯ ಬಳಿಕ ಕುಮರಿ ಆಶ್ರಮದ ಖಾದಿ ಕೆಲಸವು 1934ರಿಂದ 1944 ರವರೆಗೆ ಚರಕಾ ಸಂಘದಿಂದ ಮುಂದುವರೆಸಲ್ಪಟ್ಟಿತು. ಪುಂಡಲೀಕಜಿ ಕಾತಗಡೆ ಅವರು 1944ರಲ್ಲಿ ಗ್ರಾಮ ಸೇವಾ ಸಮಿತಿ ಸ್ಥಾಪಿಸಿ ಅದರ ಮೂಲಕ ಖಾದಿ ಉತ್ಪಾದನೆಯನ್ನು ಆರಂಭಿಸಿದರು. ಹುದಲಿಯಲ್ಲಿ ಖಾದಿ ಕೆಲಸವು ಈಗಲೂ ಯಶಸ್ವಿಯಾಗಿ ನಡೆದಿದೆ.

ಗುಣಮಟ್ಟದ ಖಾದಿಗೆ ಇನ್ನೊಂದು ಹೆಸರು

ಗುಣಮಟ್ಟದ ಖಾದಿಗೆ ಇನ್ನೊಂದು ಹೆಸರು

ಸ್ವಾವಲಂಬನೆಯ ಪ್ರತೀಕವಾಗಿರುವ ಖಾದಿ ಉತ್ಪಾದನೆಯ ಉದ್ದೇಶದೊಂದಿಗೆ ಆರಂಭಗೊಂಡಿರುವ ಹುದಲಿಯ ಸಂಘವು ಗುಣಮಟ್ಟದ ಖಾದಿಯ ಜತೆಗೆ ರುಚಿಕರ ಉಪ್ಪಿನಕಾಯಿ, ಆರೋಗ್ಯ ಸ್ನೇಹಿ ಸಾಬೂನು, ಪರಿಸರ ಸ್ನೇಹಿ ಗೋಬರ್ ಗ್ಯಾಸ್ ಮತ್ತು ಅಗರಬತ್ತಿ ಉತ್ಪಾದನೆಯಲ್ಲೂ ಸೈ ಎನಿಸಿಕೊಂಡಿದೆ.

ರಾಷ್ಟ್ರಪಿತನ ಪಾದಸ್ಪರ್ಶ

ರಾಷ್ಟ್ರಪಿತನ ಪಾದಸ್ಪರ್ಶ

85 ವರ್ಷದ ಗಂಗಪ್ಪ ಮಾಳಗಿ ಅವರು ಗಾಂಧೀಜಿ ಹುದಲಿ ಗ್ರಾಮಕ್ಕೆ ಭೇಟಿ ನೀಡಿದಾಗಿನ ಸಂಭ್ರಮವನ್ನು ಇಂದಿಗೂ ಮೆಲುಕು ಹಾಕುತ್ತಾರೆ. 'ಸಮೀಪದ ಸುಣಧಾಳ ರೈಲು ನಿಲ್ದಾಣದಲ್ಲಿ ಬಂದಿಳಿದ ಗಾಂಧೀಜಿ ಹುದಲಿ ಗ್ರಾಮದ ಕಡೆ ಬಂಡಿಯಲ್ಲಿ ಬರುವಾಗ ಇಡೀ ಊರಿಗೆ ಊರೇ ಅವರ ಸ್ವಾಗತಕ್ಕೆ ಕಾದು ನಿಂತಿತ್ತು. ಗಾಂಧೀಜಿ ಹಾಗೂ ಅವರ ಜತೆಗೆ ಆಗಮಿಸಿದ್ದ ಸುಮಾರು 200 ಜನರ ವಸತಿಗಾಗಿ ತಾತ್ಕಾಲಿಕವಾಗಿ ಜೋಳದ ದಂಟು ಹಾಗೂ ಹುಲ್ಲಿನ ಮನೆಗಳನ್ನು ನಿರ್ಮಿಸಲಾಗಿತ್ತು. ನೂಲುವುದಕ್ಕೆ ಹಂಚಿ ನೀಡಲು ಹೋದಾಗ ಗಾಂಧೀಜಿ ಅವರು ನನ್ನ ಬೆನ್ನು ಚಪ್ಪರಿಸಿದ್ದು ಈಗಲೂ ನೆನಪಿದೆ'

ಗಾಂಧಿಯವರೊಂದಿಗೆ ಕಾಲಕಳೆದ ಸೌಭಾಗ್ಯ

ಗಾಂಧಿಯವರೊಂದಿಗೆ ಕಾಲಕಳೆದ ಸೌಭಾಗ್ಯ

ಹುದಲಿ ಗ್ರಾಮದ ಪ್ರತಿ ಕುಟುಂಬದ ಹಿರಿಯರು ಗಾಂಧೀಜಿಯವರ ಜತೆ ಏಳೂ ದಿನಗಳನ್ನು ಕಳೆದಿರುವುದರಿಂದ ಹುದಲಿಯ ಮನೆ ಮನೆಗಳಲ್ಲಿ ಖಾದಿ ಬಗ್ಗೆ ಈಗಲೂ ಅಭಿಮಾನ ಹುದುಗಿದೆ. ಪ್ರತಿ ದಿನ ಬೆಳಿಗ್ಗೆ ಹುದಲಿ ಖಾದಿ ಗ್ರಾಮೋದ್ಯೋಗಕ್ಕೆ ಬರುವ 85 ವರ್ಷದ ಬಸಮ್ಮ ಶಂಕ್ರಪ್ಪ ಬನದವರ ಈಗಲೂ ಚರಕಾದಲ್ಲಿ ಖಾದಿ ನೂಲುವ ಮೂಲಕ ದಿನಕ್ಕೆ ಕನಿಷ್ಠ 160 ರೂಪಾಯಿ ಗಳಿಸುತ್ತಾರೆ ! ಇದು ಗಾಂಧಿಗ್ರಾಮ ಎಂದು ಕರೆಯಲ್ಪಡುವ ಹುದಲಿ ಜನರ ಖಾದಿ ಪ್ರೇಮಕ್ಕೆ ಸಾಕ್ಷಿ.(ಲೇಖನ ಮತ್ತು ಚಿತ್ರ ಕೃಪೆ: ಕರ್ನಾಟಕ ವಾರ್ತೆ)

{promotion-urls}

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+