ರಸ್ತೆಗುಂಡಿಗಳ ಬಗ್ಗೆ ಕೇಳಿದ್ದಕ್ಕೆ ಸಿದ್ದರಾಮಯ್ಯ ಕೊಟ್ಟ ಉತ್ತರ ಕೇಳಿದ್ರಾ?
ಬೆಂಗಳೂರು, ಅಕ್ಟೋಬರ್ 12 : 'ಏನು ಮಾಡಬೇಕು ಎಂದು ನೀವೇ ಹೇಳಿ?, ನಿಮ್ಮ ಬಳಿ ಸಲಹೆ ಏನಾದರೂ ಇದೆಯೇ?' ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಉತ್ತರವಿದು.
ರಸ್ತೆಗುಂಡಿಗಳೋ, ಮೃತ್ಯುಕೂಪಗಳೋ? ಇದು ನಮ್ಮ ಬೆಂಗಳೂರಿನ ಪಾಡು!
ಹೌದು. ಬೆಂಗಳೂರು ನಗರದಲ್ಲಿ ಬಾಯ್ತೆರೆದು ನಿಂತಿರುವ ರಸ್ತೆ ಗುಂಡಿಗಳಿಗೆ 5 ದಿನದಲ್ಲಿ ಐದು ಜನರು ಬಲಿಯಾಗಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾಧ್ಯಮಗಳು ಪ್ರಶ್ನೆ ಮಾಡಿದರೆ ಕೆಂಡ ಕಾರುತ್ತಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು? : 'ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಎರಡು ವಿಧಾನಗಳಿವೆ. ಕೋಲ್ಡ್ ಮಿಕ್ಸ್ ಮತ್ತು ಹಾಟ್ ಮಿಕ್ಸ್. ಮಳೆ ಬರುತ್ತಿರುವ ದಿನಗಳಲ್ಲಿ ನಾವು ಕೋಲ್ಡ್ ಮಿಕ್ಸ್ ಬಳಸುತ್ತೇವೆ. ಆದರೆ, ಇದು ಬಹುಕಾಲ ಬಾಳಿಕೆ ಬರುವುದಿಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಲು ಕಾರ್ಯಪಡೆ ರಚನೆ
'ಹಾಟ್ ಮಿಕ್ಸ್ಗಳನ್ನುಗಳನ್ನು ಉಪಯೋಗಿಸುವುದು ಉತ್ತಮವಾದ ವಿಧಾನ. ಆದರೆ, ಮಳೆ ಇನ್ನೂ ಬರುತ್ತಿದೆ. ತುರ್ತಾಗಿ ನಾವು ಗುಂಡಿ ಮುಚ್ಚು ಕೆಲವ ಮಾಡುತ್ತಿರುವುದರಿಂದ ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ' ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ವಿವರಣೆ ನೀಡಿದ್ದಾರೆ.
Saddened to hear that 3 people lost their lives in Bengaluru because of potholes on road. While @CMofKarnataka busy in corruption, innocent people paying with their lives for @siddaramaiah incompetency.
— B.S. Yeddyurappa (@BSYBJP) October 11, 2017
ಕೆ.ಜೆ.ಜಾರ್ಜ್ ಹೇಳಿದ್ದೇನು? : ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಅವರ ರೀತಿಯೇ ಉತ್ತರ ಕೊಟ್ಟಿದ್ದರು. 'ಬೆಂಗಳೂರಿನ ವರ್ಚಸ್ಸು ಹಾಳು ಮಾಡಲು ನಿರಂತರ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ರಸ್ತೆಗುಂಡಿಗಳ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ' ಎಂದು ಹೇಳಿದ್ದರು.
ಬೆಂಗಳೂರು ರಸ್ತೆಗುಂಡಿಯಲ್ಲಿ ಗಿಡ ನೆಟ್ಟ ಬಿಜೆಪಿ ನಾಯಕರು!
'ಎಲ್ಲಾ ಅಪಘಾತಗಳನ್ನು ರಸ್ತೆಗುಂಡಿಗಳಿಂದ ಆಯಿತು ಎಂದು ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ' ಎಂದು ಹೇಳಿದ್ದ ಜಾರ್ಜ್ ಅವರು, 'ಎಲ್ಲಾ ಅಪಘಾತಗಳಿಗೂ ರಸ್ತೆಗುಂಡಿಗಳು ಕಾರಣವಲ್ಲ' ಎಂದು ಹೇಳಿಕೆ ನೀಡಿದ್ದರು.
ಪ್ರತಿಪಕ್ಷ ಬಿಜೆಪಿ ಬೆಂಗಳೂರಿನ ರಸ್ತೆಗುಂಡಿ ವಿಚಾರದಲ್ಲಿ ನಿರಂತರ ಹೋರಾಟ ಮಾಡುತ್ತಿದೆ. ಬುಧವಾರ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಲಾಗಿತ್ತು. ಗುರುವಾರ ಬಿಜೆಪಿ ನಾಯಕರು ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿ, ರಸ್ತೆಗುಂಡಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಗುಂಡಿಗಳಲ್ಲಿ ಗಿಡ ನೆಟ್ಟು ಸಾಂಕೇತಿಕ ಪ್ರತಿಭಟನೆ ನಡೆಸಿದರು.