ಮೋದಿಯ ಭಾರತದಲ್ಲಿ ನಾನಿರೋಲ್ಲ : ಅನಂತಮೂರ್ತಿ
ಬೆಂಗಳೂರಿನಲ್ಲಿ ಭಾನುವಾರ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅನಂತಮೂರ್ತಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಪಡೆದರೆ, ಗಾಂಧಿ, ನೆಹರು ಕಂಡಂತಹ ಭಾರತ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು ಎಂದು ಈ ಸಂಜೆ ದಿನಪತ್ರಿಕೆ ವರದಿ ಮಾಡಿದೆ.
ಗಾಂಧಿ, ನೆಹರು ತತ್ವಗಳು ಇಲ್ಲದ ದೇಶದಲ್ಲಿ ನಾನು ಬದುಕಲು ಇಚ್ಛೆ ಪಡುವುದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದರೆ ನಾನು, ಭಾರತದಲ್ಲಿ ಬದುಕಲು ಇಚ್ಛೆ ಪಡುವುದಿಲ್ಲ ಎಂದು ಅನಂತಮೂರ್ತಿ ಅವರು ಹೇಳಿದರು.
ಮಾಧ್ಯಮಗಳು ನರೇಂದ್ರ ಮೋದಿಯ ಒಂದು ಮುಖವನ್ನು ಮಾತ್ರ ಬಿಂಬಿಸಿ ಪ್ರಧಾನಿಯನ್ನಾಗಿ ಮಾಡಲು ಹೊರಟಿವೆ. ಅವರ ಇನ್ನೊಂದು ಮುಖವನ್ನು ಅನಾವರಣ ಮಾಡುತ್ತಿಲ್ಲ. ಇದು ದೊಡ್ಡ ದುರಂತ ಎಂದು ವಿಶ್ಲೇಷಿಸಿದರು.
ನರೇಂದ್ರ ಮೋದಿ ಪ್ರಧಾನಿಯಾದರೆ, ಭಾರತ ಸರ್ವ ಜನಾಂಗದ ಸುಂದರ ತೋಟವಾಗಿ ಉಳಿಯುವುದಿಲ್ಲ. ಮೋದಿ ಯಂತಹವರು ದೇಶವನ್ನು ಮುನ್ನೆಡುಸುವುದಾದದರೆ, ನನ್ನಂಥವರು ಭಾರತದಲ್ಲಿ ಬದುಕಲು ಇಷ್ಟ ಪಡುವುದೂ ಇಲ್ಲ ಎಂದು ಘೋಷಿಸಿದರು.
ಕೆಲವು ದಿನಗಳ ಹಿಂದೆ ಕಾರ್ಪೋರೇಟ್ ಕಂಪನಿಗಳು, ಶ್ರೀಮಂತರು, ಮೇಲ್ಜಾತಿಯವರು ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿ ಮಾಡಬೇಕೆಂದು ಹಂಬಲಿಸುತ್ತಿವೆ ಎಂದು ಅನಂತಮೂರ್ತಿ ದೂರಿದ್ದರು. ಸದ್ಯ ಮೋದಿ 2014ರ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಅನಂತಮೂರ್ತಿ ಅವರನ್ನು ಟೀಕಿಸಿದ್ದಾರೆ.