ಬಿಜೆಪಿ ಕೆಣಕುವ ನಿರ್ಧಾರ ಕಾಂಗ್ರೆಸ್ ತಳೆಯುತ್ತಿದೆಯೇ?
ಬಿಜೆಪಿ ವಿರೋಧಿಸುವಂತಹ ನಿರ್ಧಾರಗಳನ್ನೇ ರಾಜ್ಯದ ಕಾಂಗ್ರೆಸ್ ಸರ್ಕಾರ ಕೈಗೊಳ್ಳುತ್ತಿದೆ ಏಕೆ? ಗೋಹತ್ಯೆ ವಿಧೇಯಕ ವಾಪಸ್ ಪಡೆದಿದ್ದು, ಮಠಗಳ ಮೇಲೆ ನಿಯಂತ್ರಣ ಸಾಧಿಸಿದ್ದು ಹಾಗೂ ಈಗ ಟಿಪ್ಪು ಸುಲ್ತಾನ್ ಹುಟ್ಟುಹಬ್ಬ ಆಚರಿಸಲು ಕೈಗೊಂಡಿರುವ ನಿರ್ಧಾರಗಳೆಲ್ಲವೂ ಈ ಶಂಕೆಯನ್ನು ಹುಟ್ಟುಹಾಕಿವೆ.
ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಹುಟ್ಟುಹಬ್ಬ ಆಚರಿಸಲು ನಿರ್ಧಾರ ಕೈಗೊಳ್ಳುತ್ತಿರುವಂತೆಯೇ ಅತ್ತ ಬಿಜೆಪಿ ಪ್ರತಿಭಟನೆಗಿಳಿದಿದೆ. ಟಿಪ್ಪು ಓರ್ವ ಕೂರಿ ಹಾಗೂ ಮತಾಂತರಿ ಎಂದು ಆರೋಪಿಸುತ್ತಿದೆ. ಆದರೆ, ತಮ್ಮ ನಿರ್ಧಾರದ ಪರ ಸಮರ್ಥನೆಗಿಳಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಕುರಿತು ತಪ್ಪು ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. [ಅಲ್ಪಸಂಖ್ಯಾತರ ವಿವಿಗೆ ಟಿಪ್ಪು ಹೆಸರು ಬೇಡ]
ಸಿದ್ದರಾಮಯ್ಯ ವಾದವೇನು? : ಟಿಪ್ಪು ಸುಲ್ತಾನ್ ದೇವಸ್ಥಾನಗಳ ನಿರ್ಮಾಣಕ್ಕಾಗಿ ನಿಧಿ ನೀಡಿದ್ದ. ಬ್ರಿಟಿಷರ ವಿರುದ್ಧ ಹೋರಾಡುವಾಗ ತನ್ನಿಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒಪ್ಪಿಸಿದ್ದ. ಆದ್ದರಿಂದ ಆತನನ್ನು ಗೌರವಿಸಲಾಗುವುದು ಮತ್ತು ಆತನ ಹುಟ್ಟುಹಬ್ಬವನ್ನು ರಾಜ್ಯದ ಕಾರ್ಯಕ್ರಮವಾಗಿ ಆಚರಿಸಲಾಗುವುದು ಎಂದು ಸಿದ್ದರಾಮಯ್ಯ ತಮ್ಮ ನಿರ್ಧಾರಕ್ಕೆ ಕಾರಣ ನೀಡಿದ್ದಾರೆ. [ಟಿಪ್ಪು ವಿವಿ ಉಗ್ರರ ಅಡಗುತಾಣವಾಗುವ ಭಯವಿದೆ]
ಟಿಪ್ಪು ಸುಲ್ತಾನ್ ಕ್ರೂರ ಮತಾಂತರಿ : ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾದವನ್ನು ಒಪ್ಪಲು ಬಿಜೆಪಿ ತಯಾರಿಲ್ಲ. ಟಿಪ್ಪು ಸುಲ್ತಾನ್ ಮತಾಂತರಗಳನ್ನು ಮಾಡುತ್ತಿದ್ದ ಓರ್ವ ಕ್ರೂರ ವ್ಯಕ್ತಿಯಾಗಿದ್ದ. ಜನರ ಭಾವನೆಗಳೊಂದಿಗೆ ಆಟವಾಡಿ ಹಿಂದೂಗಳನ್ನು ಬಲವಂತದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದ್ದ. ಆದ್ದರಿಂದ ನಾವು ಈ ನಿರ್ಧಾರವನ್ನು ವಿರೋಧಿಸುತ್ತೇವೆ ಎಂದು ಬಿಜೆಪಿ ವಾದಿಸಿದೆ. [ಟಿಪ್ಪು ಸುಲ್ತಾನಿ ವಿವಿ ರಾಜ್ಯದಲ್ಲಿ ಸ್ಥಾಪಿಸುವಂತಿಲ್ಲ]
ಬಿಜೆಪಿ ಅಧಿವೇಶನದಲ್ಲಿ ಗೋಹತ್ಯೆ ಪ್ರತಿಬಂಧಕ ವಿಧೇಯಕ ವಾಪಸ್ ಪಡೆಯುವುದನ್ನು ವಿರೋಧಿಸಿ ಪ್ರತಿಭಟಿಸಿತ್ತು. ಮಠಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಕಾನೂನು ತಿದ್ದುಪಡಿ ತರಲು ಸರ್ಕಾರ ಹೊರಟಾಗ ಬಿಜೆಪಿ ಒಮ್ಮೆಲೇ ಅಚ್ಚರಿಗೊಂಡಿತ್ತು. ಆಗ ಮಠವೇ ಇಚ್ಛೆಪಟ್ಟರೆ ಮಾತ್ರ ಮಠಗಳನ್ನು ವಶಪಡಿಸಿಕೊಳ್ಳುವುದಾಗಿ ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಿತ್ತು.