ಕನ್ನಡಿಗರ ಕ್ಷಮೆಕೋರಿ ಸತ್ಯರಾಜ್ ಆಡಿರುವ ಮಾತುಗಳಿವು!
ಅಂದು ಕನ್ನಡಿಗರ ವಿರುದ್ಧ, ವಾಟಾಳ್ ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ನಿಜ. ಅವು ಕನ್ನಡಿಗರನ್ನು ನೋಯಿಸಿವೆ ಎಂಬುದು ನನಗೀಗ ಅರಿವಾಗುತ್ತಿದೆ. ಕನ್ನಡಿಗರ ಭಾವನೆಗೆ ಧಕ್ಕೆ ತಂದ ಆ ಮಾತುಗಳಿಗಾಗಿ ನಾನು ಕನ್ನಡಿಗರ ಕ್ಷಮೆ ಕೋರುತ್ತೇನೆ.
ಬೆಂಗಳೂರು, ಏಪ್ರಿಲ್ 21 : "ಒಂಬತ್ತು ವರ್ಷಗಳ ಹಿಂದೆ ಕಾವೇರಿ ಗಲಭೆಗಳಾಗಿದ್ದಾಗ ನಾನು ಕನ್ನಡಿಗರ ವಿರುದ್ಧ ಹೇಳಿಕೆ ನೀಡಿದ್ದೆ. ನನ್ನ ಮಾತುಗಳು ಕನ್ನಡಿಗರನ್ನು ನೋಯಿಸಿದ್ದವೆಂದು ನನಗೀಗ ಅರ್ಥವಾಗಿದೆ. ಅದಕ್ಕಾಗಿ ನಾನು ಕನ್ನಡಿಗರ ಕ್ಷಮೆ ಕೋರುತ್ತೇನೆ."
ಇವು ತಮಿಳು ನಟ ಸತ್ಯರಾಜ್ ಕನ್ನಡಿಗರ ಕ್ಷಮೆ ಕೋರಿ ಆಡಿದ ಮಾತುಗಳು. ಕನ್ನಡಿಗರ ರಾಜಮೌಳಿ ಎಸ್ಎಸ್ ನಿರ್ದೇಶನದ ಬಾಹುಬಲಿ 2 ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ 'ಕಟ್ಟಪ್ಪ' ಪಾತ್ರದಲ್ಲಿ ನಟಿಸಿರುವ ಸತ್ಯರಾಜ್ ಅಂದು ಆಡಿದ ಮಾತುಗಳಿಗೆ ಕರ್ನಾಟಕದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು.
9 ವರ್ಷಗಳ ಹಿಂದೆ ಸತ್ಯರಾಜ್ ಅವರು, ಕರ್ನಾಟಕದ ಹಿರಿಯ ರಾಜಕಾರಣಿ, ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಅವರ ಕುರಿತು ಕೀಳಾಗಿ ಮಾತನಾಡಿದ್ದರು. ವಾಟಾಳ್ ಒಬ್ಬ ಕಾಮಿಡಿಯನ್ ಎಂದೆಲ್ಲ ಹೀಯಾಳಿಸಿದ್ದರು.[ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಕಟ್ಟಪ್ಪ]
ಇದರ ವಿರುದ್ಧ ಸಿಡಿದೆದ್ದಿದ್ದ ಕನ್ನಡಿಗರು, ಬಾಹುಬಲಿ 2 ಕರ್ನಾಟಕದಲ್ಲಿ ಬಿಡುಗಡೆಯಾಗಬೇಕಾದರೆ ಸತ್ಯರಾಜ್ ಅವರು ಕನ್ನಡಿಗರ ಮತ್ತು ವಾಟಾಳ್ ನಾಗರಾಜ್ ಅವರ ಕ್ಷಮೆ ಕೋರಲೇಬೇಕು ಎಂದು ಪಟ್ಟುಹಿಡಿದಿದ್ದರು. ಕ್ಷಮೆ ಕೋರದೆ ಹೋದರೆ ಬಾಹುಬಲಿ 2 ಬಿಡುಗಡೆಯಾಗಬೇಕಾದ ಏಪ್ರಿಲ್ 28ರಂದು ಬೆಂಗಳೂರು ಬಂದ್ ಆಚರಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಸತ್ಯರಾಜ್ ಅವರು ನೀಡಲಾಗಿರುವ ಪತ್ರಿಕಾ ಹೇಳಿಕೆಯಲ್ಲಿರುವ ವಿವರಗಳು ಹೀಗಿವೆ. ತಮಿಳಿನಲ್ಲಿರುವ ಆ ಪತ್ರಿಕಾ ಹೇಳಿಕೆಯನ್ನು ಅವರು ಓದಿ ಹೇಳಿ, ಕನ್ನಡಿಗರ ಕ್ಷಮೆ ಕೋರಿದರು. ಬಾಹುಬಲಿ 2 ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು. [#JusticeForSathyaraj ಹ್ಯಾಷ್ ಟ್ಯಾಗ್ ನಲ್ಲಿ ಕನ್ನಡಿಗರನ್ನು ಕೆಣಕಿದ ಟ್ವಿಟ್ಟಿಗರು]

9 ವರ್ಷದ ಹಿಂದೆ ಆಡಿದ ಆಕ್ರೋಶದ ನುಡಿಗಳಿವು
"ಒಂಬತ್ತು ವರ್ಷಗಳ ಹಿಂದೆ ಕಾವೇರಿ ನೀರು ಹಂಚಿಕೆ ಕುರಿತಂತೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಗಲಭೆಗಳಾಗಿದ್ದಾಗ ಕರ್ನಾಟಕದಲ್ಲಿ ತಮಿಳರ ಮೇಲೆ ಹಲ್ಲೆಗಳಾಗಿದ್ದವು. ಆ ಸಮಯದಲ್ಲಿ ನಾನು ಆಡಿದಂಥ ಆಕ್ರೋಶದ ನುಡಿಗಳವು."

ತಮಿಳರ ಮೇಲೆ ಹಲ್ಲೆಗಳಾಗಿದ್ದವು
"ಕಾವೇರಿ ನೀರು ಕೇಳುತ್ತಿದ್ದ ತಮಿಳರ ವಿರುದ್ಧ ಕನ್ನಡ ನಾಡಿನ ನಟರು ಕೂಡ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಳನ್ನು ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ತಮಿಳುನಾಡಿನ ನಟರು ಕೂಡ ಪ್ರತಿಭಟನೆ ನಡೆಸಿ ತಮ್ಮ ಅನಿಸಿಕೆಗಳನ್ನು ಹೊರಹಾಕಿದ್ದರು. ಆಗ ನಾನು ಕೂಡ ತಮಿಳರ ಪರವಾಗಿ ಮಾತನಾಡಿದ್ದೆ."

ನಾನು ಕನ್ನಡಿಗರ ಕ್ಷಮೆ ಕೋರುತ್ತೇನೆ
"ಅಂದು ನಾನು ಕನ್ನಡಿಗರ ವಿರುದ್ಧ, ವಾಟಾಳ್ ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ನಿಜ. ಅವು ಕನ್ನಡಿಗರನ್ನು ನೋಯಿಸಿವೆ ಎಂಬುದು ನನಗೀಗ ಅರಿವಾಗುತ್ತಿದೆ. ಕನ್ನಡಿಗರ ಭಾವನೆಗೆ ಧಕ್ಕೆ ತಂದ ಆ ಮಾತುಗಳಿಗಾಗಿ ನಾನು ಕನ್ನಡಿಗರ ಕ್ಷಮೆ ಕೋರುತ್ತೇನೆ."

ನಾನು ಕನ್ನಡಿಗರು ಕರ್ನಾಟಕದ ವಿರೋಧಿಯಲ್ಲ
"ನಾನು ಕನ್ನಡಿಗರು ಅಥವಾ ಕರ್ನಾಟಕದ ವಿರೋಧಿಯಲ್ಲ. ಇದಕ್ಕೆ ತಕ್ಕ ಉದಾಹರಣೆಯೆಂದರೆ, ನನ್ನ ಜೊತೆ ನನ್ನ ಸಹಾಯಕನಾಗಿ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿರುವ ಶೇಖರ್ ಒಬ್ಬ ಕನ್ನಡಿಗ. ನಾನು ಕನ್ನಡಿಗರ ವಿರೋಧಿಯಾಗಿದ್ದರೆ ಆತ ನನ್ನ ಜೊತೆ ಇರುತ್ತಿರಲಿಲ್ಲ."

ನನ್ನಿಂದ ಬಾಹುಬಲಿ 2 ಚಿತ್ರಕ್ಕೆ ಅಡ್ಡಿಯಾಗಬಾರದು
"ಬಾಹುಬಲಿಯಂಥ ದೊಡ್ಡ ಪ್ರಮಾಣದ ಚಿತ್ರದಲ್ಲಿ ನಟಿಸುತ್ತಿರುವ ಅತ್ಯಂತ ಸಣ್ಣ ಪ್ರಮಾಣದ ನಟ ನಾನು. 9 ವರ್ಷಗಳ ಹಿಂದೆ ನಾನು ಆಡಿದ ಮಾತುಗಳಿಂದಾಗಿ ಬಾಹುಬಲಿ 2 ಚಿತ್ರ ಬಿಡುಗಡೆಗೆ ಅಡ್ಡಿಯಾಗಬಾರದು. ತಮಿಳುನಾಡಿನ ಜನರು ಕೂಡ ಇದನ್ನು ಅರ್ಥಮಾಡಿಕೊಳ್ಳಬೇಕು."

ಚಿತ್ರ ನಿರ್ಮಾಪಕರಿಗೆ ಸತ್ಯರಾಜ್ ಕೋರಿಕೆ
"ನನ್ನ ಭಾಗವಹಿಸುವಿಕೆಯಿಂದಾಗಿ ತೊಂದರೆಯಾಗುವಂತಿದ್ದರೆ ಯಾವುದೇ ಪಾತ್ರಕ್ಕೆ ನನ್ನ ಪರಿಗಣಿಸಬಾರದು" ಎಂದೂ 'ವಾಲ್ಟರ್ ವೆಟ್ರಿವೇಲನ್' ಖ್ಯಾತಿಯ ಸತ್ಯರಾಜ್ ಅವರು ತಮಿಳು ಚಿತ್ರನಿರ್ಮಾಪಕರನ್ನು ಕೋರಿಕೊಂಡಿದ್ದಾರೆ.












Click it and Unblock the Notifications