ಸದ್ಯದಲ್ಲೇ ಅತ್ಯಾಧುನಿಕ ಮಾಧ್ಯಮ ಕೇಂದ್ರ ಸ್ಥಾಪನೆ
ಬೆಂಗಳೂರು, ಮೇ 8: ವಾರ್ತಾ ಇಲಾಖೆಯಿಂದ ಐದು ಕೋಟಿ ರೂ ವೆಚ್ಚದಲ್ಲಿ ಮಾಹಿತಿ ಕೋಶ, ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಅತ್ಯುತ್ತಮವಾದ ಮಾಧ್ಯಮ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ, ವಾರ್ತಾ ಮತ್ತು ಹಜ್ ಖಾತೆ ಸಚಿವ ಆರ್. ರೋಷನ್ ಬೇಗ್ ತಿಳಿಸಿದ್ದಾರೆ.
ರಾಜ್ಯ ವಾರ್ತಾ ಇಲಾಖೆಯ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಮೂರು ದಿನಗಳ ಪುನರ್ಮನನ ಕಾರ್ಯಾಗಾರದಲ್ಲಿ ಇಲಾಖೆಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮಾಧ್ಯಮ ಕೇಂದ್ರ ಸ್ಥಾಪನೆಗೆ ಪೂರ್ವ ಸಿದ್ಧತೆಗಳು ಆರಂಭವಾಗಿದ್ದು, ತಾವು ಈಗಾಗಲೇ ನವದೆಹಲಿಯಲ್ಲಿರುವ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋದ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದರು.
ಇಲಾಖೆಯು ಆಧುನಿಕ ತಂತ್ರಜ್ಞಾನ, ಮಾಧ್ಯಮಗಳನ್ನು ತನ್ನ ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನೂ ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ಅವರು ಹೇಳಿದರು.[ಬೆಂಗಳೂರಿಗರಿಗೆ ಕಾದಿದೆ ನೀರಿನ ದರ ಏರಿಕೆ ಶಾಕ್]
ಇಲಾಖೆಯ ಅಧಿಕಾರಿಗಳು ಸಾಮಾಜಿಕ ಬದ್ಧತೆಯಿಂದ, ಜನರ ಹಿತ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಕಾರ್ಯಕ್ರಮಗಳ ಮಾಹಿತಿ, ಬಿಡುಗಡೆಯಾದ ಅನುದಾನಗಳ ವಿವರಗಳು ಸಾರ್ವಜನಿಕರಿಗೆ ಒದಗಿಸುವ ಮೂಲಕ ಯೋಜನೆಗಳು ಜನರನ್ನು ತಲುಪುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಉದ್ಘಾಟಿಸಿ ಮಾತನಾಡಿ, ವಾರ್ತಾಧಿಕಾರಿಗಳು ಕೇವಲ ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲ, ಪತ್ರಕರ್ತರೂ ಹೌದು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ವಾರ್ತಾಧಿಕಾರಿಗಳು ಚೆನ್ನಾಗಿ ಬರೆಯುವುದು, ತ್ವರಿತ ಸುದ್ದಿ ರವಾನೆ ಹಾಗೂ ತಪ್ಪುಗಳಾಗದಂತೆ ಎಚ್ಚರ ವಹಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಡಿ.ವಿ. ರಾಜಶೇಖರ್, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣನವರ, ಡೆಕ್ಕನ್ ಕ್ರಾನಿಕಲ್ ಪತ್ರಿಕೆಯ ಸುದ್ದಿ ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗಡೆ, ಸುವರ್ಣ ವಾಹಿನಿಯ ವಿಜಯಲಕ್ಷ್ಮಿ ಶಿಬರೂರು ‘ವಾರ್ತಾ ಇಲಾಖೆಯಿಂದ ಮಾಧ್ಯಮಗಳ ನಿರೀಕ್ಷೆ ಏನು?' ಎಂಬ ವಿಷಯದ ಬಗ್ಗೆ ತಮ್ಮ ವಿಚಾರ ಮಂಡಿಸಿದರು.
ಈ ಕಾರ್ಯಾಗಾರ ಮೇ.8 ಶುಕ್ರವಾರದ ವರೆಗೆ ನಡೆಯಲಿದ್ದು ವಿವಿಧ ವಿಷಯ ತಜ್ಞರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.