ದೇವೇಗೌಡರ 84ನೇ ಹುಟ್ಟುಹಬ್ಬ: ಈ ಬಾರಿ ಅತಿ ವಿಶಿಷ್ಟ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಹುಟ್ಟುಹಬ್ಬವನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆ ಬಗ್ಗೆ ದೇವೇಗೌಡರ ಜತೆ ಚಿಂತನಗೋಷ್ಠಿ ಆಯೋಜಿಸಲಾಗಿದೆ.
ಬೆಂಗಳೂರು, ಮೇ 12: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಹುಟ್ಟುಹಬ್ಬವನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆ ಬಗ್ಗೆ ದೇವೇಗೌಡರ ಜತೆ ಚಿಂತನಗೋಷ್ಠಿ ಆಯೋಜಿಸಲಾಗಿದೆ. ಈ ಮೂಲಕ ಒಂದು ಅಪರೂಪದ ಹಾಗೂ ಉಪಯುಕ್ತ ಚರ್ಚೆಯ ಸರಣಿಗೆ ಇದು ಮುನ್ನುಡಿ ಬರೆಯಲಿದೆ.
ಸಮಾವಾದದ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ದೇವೇಗೌಡರು, ಮಣ್ಣಿನ ಮಗ ಎನಿಸಿಕೊಂಡವರು. ಅಪಾರ ರಾಜಕೀಯ ಅನುಭವ, ನಿಪುಣತೆ ಮೂಲಕ 24/7 ರಾಜಕಾರಣಿಯಾಗಿರುವ ದೇವೇಗೌಡರಿಗೆ ಮೇ 18ರಂದು 84ನೇ ಹುಟ್ಟುಹಬ್ಬದ ಸಂಭ್ರಮ. [ದೇವೇಗೌಡರ ಸಂಕ್ಷಿಪ್ತ ಪರಿಚಯ]
ಯಾವುದರ ಬಗ್ಗೆ ಚರ್ಚೆ?: ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆಯ ಕುರಿತು ವಿಚಾರಗೋಷ್ಟಿಯನ್ನು ಮುನ್ನೋಟ, ಐಟಿ ಕನ್ನಡಿಗರ ಕೂಟದ ಸಹಯೋಗದಲ್ಲಿ ಮೇ 18, ಗುರುವಾರ ಸಂಜೆ 4 ರಿಂದ 6 ಗಂಟೆಯ ನಡುವೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದೆ.
ಯಾರು ಪಾಲ್ಗೊಳ್ಳುತ್ತಾರೆ?: ಮಾಜಿ ಪ್ರಧಾನಿಗಳು, ಕರ್ನಾಟಕದ ಹಿರಿಯ ರಾಜಕಾರಣಿಯೂ ಆಗಿರುವ ಎಚ್.ಡಿ.ದೇವೇಗೌಡರ ಹುಟ್ಟು ಹಬ್ಬದಂದು ನಡೆಯುವ ಈ ಚರ್ಚೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ, ಹಿರಿಯ ಪತ್ರಕರ್ತರಾದ ಎನ್.ಎ.ಎಮ್ ಇಸ್ಮಾಯಿಲ್, ಜೆಡಿಎಸ್ ನಾಯಕರಾದ ವೈ.ಎಸ್.ವಿ.ದತ್ತ ಅವರೂ ಹಾಗೂ ಕಾಂಗ್ರೆಸ್ ನಾಯಕರಾದ ಬಿ.ಎಲ್.ಶಂಕರ್ ಪಾಲ್ಗೊಳ್ಳಲಿದ್ದಾರೆ. ಐಟಿ ಕನ್ನಡಿಗರ ಒಕ್ಕೂಟ ಹಾಗೂ ಮುನ್ನೋಟ ಮಳಿಗೆಯ ಪರವಾಗಿ ಲೇಖಕ ವಸಂತ್ ಶೆಟ್ಟಿ ಅವರು ಪ್ರಸ್ತಾವನೆ ಮಂಡಿಸಲಿದ್ದಾರೆ.
ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯ: ಕಾವೇರಿ, ಕೃಷ್ಣಾ, ಮಹದಾಯಿ ನದಿ ನೀರಿನ ಹಂಚಿಕೆಯಿರಬಹುದು, ರೈಲು, ರಸ್ತೆ ಸಂಪರ್ಕದಲ್ಲಿರಬಹುದು, ಸ್ಥಳೀಯರಿಗೆ ಉದ್ಯೋಗವಕಾಶಗಳಲ್ಲಿರಬಹುದು, ಕನ್ನಡದಲ್ಲೇ ನಾಗರೀಕ ಮತ್ತು ಗ್ರಾಹಕ ಸೇವೆಗಳನ್ನು ಪಡೆಯುವುದರಲ್ಲಿರಬಹುದು, ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ದಕ್ಕಬೇಕಾದ ಯೋಜನೆ, ಅನುದಾನಗಳಿರಬಹುದು, ಹೀಗೆ ಎಲ್ಲ ರಂಗಗಳಲ್ಲೂ ಕರ್ನಾಟಕಕ್ಕೆ, ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯಗಳಾಗುತ್ತಲಿವೆ.
ಕರ್ನಾಟಕ ಕೇಂದ್ರಿತ ರಾಜಕೀಯ ಚಿಂತನೆಯ ಅಗತ್ಯದ ಬಗ್ಗೆ ಕನ್ನಡ ಸಮಾಜದಲ್ಲಿ ಇಂದು ಎಂದಿಗಿಂತಲೂ ಹೆಚ್ಚಿನ ಚರ್ಚೆ, ಜಾಗೃತಿ ಏರ್ಪಡುತ್ತಿದೆ. ಈ ಬಗ್ಗೆ ಕನ್ನಡ ಸಮಾಜದಲ್ಲಿ, ಅದರಲ್ಲೂ ರಾಜಕೀಯ ವಲಯದಲ್ಲಿ ಇನ್ನಷ್ಟು ವ್ಯಾಪಕವಾದ ಚರ್ಚೆ, ವಿಚಾರ ವಿನಿಮಯ ರೂಪಿಸುವ ತುರ್ತು ಅಗತ್ಯ ನಮ್ಮ ಮುಂದಿದೆ.