ಮಣ್ಣಿನ ಮಗ ದೇವೇಗೌಡರಿಗೆ ಹುಟ್ಟುಹಬ್ಬದ ವಿಶ್
ಬೆಂಗಳೂರು, ಮೇ.19: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು 81ನೇ ವಸಂತಕ್ಕೆ ಕಾಲಿರಿಸಿದ ಸಂಭ್ರಮದಲ್ಲಿದ್ದಾರೆ. ಎಂದಿನಂತೆ ಕುಟುಂಬ ಸದಸ್ಯರು, ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಪದ್ಮನಾಭನಗರ ನಿವಾಸದಲ್ಲಿ ಶನಿವಾರ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶನಿವಾರವೇ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆ ನಡೆದಿದ್ದು ಕಾಕತಾಳೀಯವಾಗಿತ್ತು.
ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬವನ್ನು ನಾಡಿನ ವಿವಿಧೆಡೆ ಆಚರಿಸಿರುವ ವರದಿಗಳು ಬಂದಿದೆ. ಶನಿವಾರ ಬೆಳಗ್ಗೆ ಜೆ.ಪಿ.ನಗರದ ಲಕ್ಷ್ಮಿ ದೇವಸ್ಥಾನ ಮತ್ತು ಪದ್ಮನಾಭನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ದೇವೇಗೌಡರ ಕುಟುಂಬ ಪೂಜೆ ಸಲ್ಲಿಸಿದರು. ಪಿರಿಯಾಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಫೋನ್ ಕರೆ ಮಾಡಿ ಶುಭಾಶಯ ಕೋರಿದರು.
ಬಿಳಿ ಪಂಚೆ, ಜುಬ್ಬ, ಹಣೆಯ ಮೇಲೆ ಕುಂಕುಮ, ಸರಳ ಜೀವನ ಹೋರಾಟದ ರಾಜಕಾರಣಿಯಾಗಿ ಬೆಳೆದ ದೇವೇಗೌಡರಿಗೆ ಸದ್ಯಕ್ಕೆ ವಿಧಾನಸಭೆ ಚುನಾವಣೆ ಸೋಲು ಅರಗಿಸಿಕೊಳ್ಳಲು ಸ್ವಲ್ಪ ಸಮಯಬೇಕಾಗಿದೆ. ಈ ಬಾರಿ ಸರ್ಕಾರ ರಚಿಸುವ ಉತ್ಸಹದಲ್ಲಿದ್ದ ಜೆಡಿಎಸ್ ಲೆಕ್ಕಾಚಾರ ತಲೆಕೆಳಗಾಗಿದೆ. ಹೀಗಾಗಿ ಮುಂದಿನ ರಾಜಕೀಯ ನಡೆ ಬಗ್ಗೆ ದೇವೇಗೌಡರು ಚಿಂತಿತರಾಗಿದ್ದಾರೆ..ಹುಟ್ಟುಹಬ್ಬದ ಸಂಭ್ರಮ ಮುಂದಿನ ಯೋಜನೆಗಳ ಬಗ್ಗೆ ಚಿತ್ರಾವಳಿಯಲ್ಲಿ ನೋಡಿ...
ಚುನಾವಣೆ ಸೋಲು, ಕೈ ಸರ್ಕಾರ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ನಿರೀಕ್ಷಿತ ಸ್ಥಾನ ದೊರೆತಿಲ್ಲ. ಇದು ಜನತೆ ಕೊಟ್ಟ ತೀರ್ಪು ನಾವು ತಲೆಬಾಗುತ್ತೇವೆ. ಪ್ರಮುಖ ಕ್ಷೇತ್ರಗಳಲ್ಲಿ ಜೆಡಿಎಸ್ ಉತ್ತಮ ಫಲಿತಾಂಶ ಹೊರ ಹಾಕುವಲ್ಲಿ ವಿಫಲವಾಗಿರುವುದು ನಿಜ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ಆಗ್ತಾರಾ? ಎಂದರೆ ನೋ ಕಾಮೆಂಟ್ ಎಂದಿದ್ದರು.ಬರ್ಥಡೇ ವಿಶ್ ಮಾಡಿದವರು
ಪಿ.ಜಿ.ಅರ್ ಸಿಂಧ್ಯ, ಮಾಜಿ ಶಾಸಕ ಶಂಕರಲಿಂಗೇಗೌಡ, ಉದ್ಯಮಿ ಶರವಣ, ಜಮೀರ್ ಅಹಮದ್, ಬಂಡೆಪ್ಪ ಕಾಶೆಂಪುರ್, ಮಾಗಡಿ ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಶಾಸಕ ಬಾಲಕೃಷ್ಣ ಮುಂತಾದವರು ಖುದ್ದು ಭೇಟಿಯಾಗಿ ಶುಭ ಹಾರೈಸಿದರು.ಈ ನಡುವೆ ಕಾರ್ಯಕರ್ತರು ಮತ್ತು ಪುತ್ರ ಪುತ್ರ ಎಚ್ ಡಿ ರೇವಣ್ಣ ತಂದಿದ್ದ ಕೇಕುಗಳನ್ನೂ ಅವರು ಕತ್ತರಿಸಿದರು.
ವಿವಿಧೆಡೆ ಹುಟ್ಟುಹಬ್ಬ ಆಚರಣೆ
ಮದ್ದೂರು: ಶಾಸಕ ಡಿ.ಸಿ ತಮ್ಮಣ್ಣ ಅವರು ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆ ಬಡರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು. ಉಗ್ರನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಎಚ್.ಡಿ.ದೇವೇಗೌಡ ಅಭಿಮಾನಿಗಳ ಯುವಜನ ಸಮಾಜಸೇವಾ ವೇದಿಕೆ, ಮೇ 18 ರಂದು ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಮಾತೃಶ್ರೀ ಮನೋವಿಕಾಸ ಕೇಂದ್ರ (ಬುದ್ಧಿಮಾಂದ್ಯ ಮಕ್ಕಳ ಕೇಂದ್ರ)ದಲ್ಲಿ ಹುಟ್ಟುಹಬ್ಬ ಆಚರಿಸಿದರು.
ಬುದ್ಧಿಮಾಂದ್ಯ ಮಕ್ಕಳಿಗೆ ಒಂದು ತಿಂಗಳ ಕಾಲ ಉಚಿತ ಊಟ ಹಾಗೂ ಕೇಂದ್ರದ ಎಲ್ಲಾ ವೆಚ್ಚವನ್ನೂ ಭರಿಸಲು ವೇದಿಕೆ ನಿರ್ಧರಿಸಿದೆ. ಕಳೆದ ಬಾರಿ ದೇವೇಗೌಡದ ಹುಟ್ಟುಹಬ್ಬದ ಅಂಗವಾಗಿ ಮಲ್ಲೇಶ್ವರದಿಂದ ಹರದನಹಳ್ಳಿಗೆ ಪಾದಯಾತ್ರೆ ನಡೆಸಲಾಗಿತ್ತು
ದೇವೇಗೌಡರ ಸಂಕ್ಷಿಪ್ತ ಪರಿಚಯ
ದೇವೇಗೌಡರು ಮೇ 18 , 1933 ರಲ್ಲಿ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ದೇವೇಗೌಡ. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ.
1953 ರಿಂದ 1962 ರ ವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ಸ್ವತಂತ್ರವಾಗಿ ವಿಧಾನಸಭಾ ಚುನಾವಣೆಗೆ ನಿಂತು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಮುಂದಿನ ಮೂರು ಚುನಾವಣೆಯಲ್ಲಿ ಸತತವಾಗಿ ಹೊಳೆನರಸೀಪುರದಿಂದ ಗೆದ್ದು ಎರಡು ಅವಧಿಗೆ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.ದೇವೇಗೌಡರ ಸಂಕ್ಷಿಪ್ತ ಪರಿಚಯ
1991 ರಲ್ಲಿ ಮೊದಲ ಬಾರಿಗೆ ಹಾಸನ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರು. 1994ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕೇಂದ್ರದಲ್ಲಿ 1996 ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತವಿರದೆ ತೃತೀಯ ರಂಗದ ನಾಯಕರಾಗಿ ಆಯ್ಕೆಯಾಗಿ ಎಲ್ಲರೂ ಹುಬ್ಬೇರಿಸುವಂತೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿರಿಯ ರಾಜಕೀಯ ಮುತ್ಸದ್ದಿ, 24x7 ರಾಜಕಾರಿಣಿ ಎಚ್ ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು.