ವಾಮನ್ ಆಚಾರ್ಯ- ಮಂಡಳಿ ಬಿಟ್ಟ ಕಟ್ಟಕಡೆಯ ಬಿಜೆಪಿಯವ
ಬೆಂಗಳೂರು ಜುಲೈ 25: ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಡಾ. ವಾಮನ್ ಆಚಾರ್ಯ ಕೆಳಗಿಳಿದಿದ್ದಾರೆ. ಈ ಮೂಲಕ ನಿಗಮ -ಮಂಡಳಿ ತೊರೆದ ಬಿಜೆಪಿಯ ಕಟ್ಟಕಡೆಯ ಕಟ್ಟಾಳು ಎನಿಸಿಕೊಂಡಿದ್ದಾರೆ.
ತಮ್ಮನ್ನು ತಾವು 'ಗಾರ್ಬೇಜ್ ಮ್ಯಾನ್' ಎಂದು ಕರೆಸಿಕೊಳ್ಳುತ್ತಿದ್ದ ವಾಮನ್ ಆಚಾರ್ಯ ಅವರು ಶುಕ್ರವಾರ ಸಂಜೆ ವೇಳೆಗೆ ಕಳುಹಿಸಿದ ರಾಜೀನಾಮೆ ಪತ್ರ ತಕ್ಷಣವೇ ಸಮ್ಮತಿ ಪಡೆದುಕೊಂಡಿದೆ.
ಅರಣ್ಯ ಸಚಿವ ಬಿ ರಮಾನಾಥ್ ರೈ ಅವರ ಜೊತೆಗಿನ ವೈಮನಸ್ಯದಿಂದ ಉಸಿರುಗಟ್ಟಿನ ವಾತಾವರಣ ನಿರ್ಮಾಣವಾಗಿದ್ದರಿಂದ ನಿವೃತ್ತಿಗೂ ಎರಡು ತಿಂಗಳು ಮುಂಚೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವಾಮನ್ ಆಚಾರ್ಯ ಅವರ ಆಪ್ತ ವಲಯ ಹೇಳಿದೆ.
ವೃತ್ತಿಯಿಂದ ವೈದ್ಯರಾದ ವಾಮನ್ ಆಚಾರ್ಯ ಅವರು ಸೆಪ್ಟೆಂಬರ್ 20, 2012ರಂದು ಅಧಿಕಾರ ವಹಿಸಿಕೊಂಡಿದ್ದು 2015ರ ಸೆಪ್ಟೆಂಬರ್ 20ಕ್ಕೆ ಅಧಿಕಾರ ಅವಧಿ ಮುಕ್ತಾಯವಾಗಲಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಂಬುಗೆಯ ಆಡಳಿತ ಅಧಿಕಾರಿಯಾಗಿದ್ದ ಸಿಎನ್ ಶಿವಪ್ರಕಾಶ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದನ್ನು ವಾಮನ್ ಆಚಾರ್ಯ ವಿರೋಧಿಸಿದ್ದರು.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಯಲ್ಲಿ ರಾಸಾಯನಿಕ ಕಾರ್ಖಾನೆಗೆ ಸರ್ಕಾರ ಅನುಮತಿ ನೀಡಿದ ಪ್ರಕರಣ ಲೋಕಾಯುಕ್ತ ಸಂಸ್ಥೆ ತನಕ ತಲುಪಿತ್ತು.
ಬೆಂಗಳೂರಿನ ಜಲ, ನೆಲ, ವಾಯು, ಕೆರೆ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ಕೆಎಸ್ ಪಿಸಿಬಿ ವಿಫಲವಾಗಿದೆ ಎಂದು ಹೈಕೋರ್ಟ್ ಅನೇಕ ಬಾರಿ ಛೀಮಾರಿ ಹಾಕಿತ್ತು.
ನೋ ಹಾಂಕಿಂಗ್ ಡೇ: ನಗರ ಪೊಲೀಸ್ ಜೊತೆ ಸೇರಿ ವಾರದ ಪ್ರತಿ ಸೋಮವಾರ ನೋ ಹಾಂಕಿಂಗ್ ಡೇ(ವಾಹನದ ಹಾರ್ನ ಶಬ್ದ ಮಾಡದಂತೆ) ಜಾರಿಗೆ ತಂದಿದ್ದರು. ಕೈಗಾರಿಕೆಗಳಿಗೆ ಲೈಸನ್ಸ್ ನೀಡುವ ಪ್ರಕ್ರಿಯೆ ಆನ್ ಲೈನ್ ಮೂಲಕ ನಡೆಯುವಂತೆ ಮಾಡಿ ಪಾರದರ್ಶಕತೆ ಮೂಡಿಸಿದ್ದರು.
ವಿಆರ್ ಎಸ್: ಇದೊಂಥರ ಸ್ವಯಂ ನಿವೃತ್ತಿ ಪಡೆದ ಹಾಗೆ. ಜುಲೈ 16ರಂದೇ ನಾನು ರಾಜೀನಾಮೆ ನೀಡಿದ್ದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನನ್ನನ್ನು ಕರ್ತವ್ಯದಿಂದ ಮುಕ್ತಗೊಳಿಸುವಂತೆ ಕೋರಿಕೊಂಡೆ. ಅಧಿಕಾರಿಗಳ ವರ್ಗಾವಣೆ ಕೂಡಾ ರಾಜೀನಾಮೆ ಕಾರಣ ಎಂಬುದನ್ನು ಸಿಎಂಗೆ ಮನವರಿಕೆ ಮಾಡಿಕೊಂಡಿದ್ದೇನೆ ಎಂದು ವಾಮನ್ ಆಚಾರ್ಯ ಅವರು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಟೆರಾ ಫಾರ್ಮಾಗೆ ಪೈಪೋಟಿ ನೀಡುವ ಜೈವಿಕ ಕಾಂಪೋಸ್ಟ್ ತಯಾರಿಕಾ ಘಟಕ ಹೊಂದಿರುವ ವಾಮನ್ ಆಚಾರ್ಯ ಅವರು ನಗರದ ಕಸದ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾದರು.
ಘನ ತ್ಯಾಜ್ಯ ವಿಂಗಡಣೆ, ಕಸ ನಿರ್ವಹಣೆಗೆ ತಂತ್ರಜ್ಞಾನ ಬಳಕೆ , ಜೈವಿಕ ಗೊಬ್ಬರ ಬಳಕೆಗೆ ಪ್ರೋತ್ಸಾಹ ಹೀಗೆ ಅನೇಕ ಕ್ರಮಗಳನ್ನು ಆಚಾರ್ಯ ಜಾರಿಗೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದ ಹಾಗೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬ್ಲಾಗ್ ಲಿಂಕ್ ಇಲ್ಲಿದೆ (ಒನ್ ಇಂಡಿಯಾ ಸುದ್ದಿ)












Click it and Unblock the Notifications