ಬ್ಲ್ಯಾಕ್ ಮೇಲ್: ಕನ್ನಡ ಟಿವಿ ಚಾನಲ್ ಸಿಇಒ ಬಂಧನ
ಉದ್ಯಮಿಯೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಖಾಸಗಿ ಚಾನಲ್ ಸಿಇಒ ಒಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ
ಬೆಂಗಳೂರು, ಏಪ್ರಿಲ್ 15: ಉದ್ಯಮಿಯೊಬ್ಬರಿಂದ 10 ಕೋಟಿ ರೂ. ಬೇಡಿಕೆ ಇಟ್ಟು, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಖಾಸಗಿ ಚಾನಲ್ ವೊಂದರ ಸಿ ಇ ಒ ಲಕ್ಷ್ಮಿಪ್ರಸಾದ್ ವಾಜಪೇಯಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಲ್ಯಾಕ್ ಮೇಲ್ ಹಣವನ್ನು ಪಡೆಯುತ್ತಿದ್ದ ವೇಳೆ 42 ವರ್ಷ ವಯಸ್ಸಿನ ಲಕ್ಷ್ಮಿ ಪ್ರಸಾದ್ ಅವರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಕಮರ್ಶಿಯಲ್ ಸ್ಟ್ರೀಟ್ ಮತ್ತು ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲೂ ಕೇಸು ದಾಖಲಿಸಲಾಗಿತ್ತು.

ಬ್ಲ್ಯಾಕ್ ಮೇಲ್ ನಿಂದ ರೋಸಿ ಹೋಗಿದ್ದ ಉದ್ಯಮಿ ಕೋರಮಂಗಲ ಪೊಲೀಸ್ ಠಾಣೆಗೆ ದೂರುನೀಡಿದ್ದರು. ಐಪಿಸಿ ಸೆಕ್ಷನ್ 384, 385, 506 ಅಡಿಯಲ್ಲಿ ಸುಲಿಗೆ ಆರೋಪದಡಿಯಲ್ಲಿ ವಾಜಪೇಯಿ ಅವರನ್ನು ಬಂಧಿಸಲಾಗಿದೆ.
ವಾಜಪೇಯಿ ಅವರಿಗೆ ಸಹಕರಿಸಿದ ಆರೋಪದ ಮೇಲೆ ಮಿಥುನ್ ಎಂಬುವವರನ್ನೂ ಬಂಧಿಸಲಾಗಿದೆ.
ಈ ಉದ್ಯಮಿಗೆ ಮಾತ್ರವಲ್ಲ, ಈಗಾಗಲೇ ಹಲವರಿಗೆ ಲಕ್ಷ್ಮಿ ಪ್ರಸಾದ್ ಇದೇ ರೀತಿ ಬ್ಲ್ಯಾಕ್ ಮೇಲ್ ಮಾಡಿದ್ದರು ಎಂಬ ವಿಷಯವೂ ತಿಳಿದುಬಂದಿದೆ.












Click it and Unblock the Notifications