ಬಿಬಿಎಂಪಿಯಲ್ಲಿ ಮೈತ್ರಿ ಮಾತುಕತೆ : ಯಾರು, ಏನು ಹೇಳಿದರು?
ಬೆಂಗಳೂರು, ಆ.28 : ಬಿಬಿಎಂಪಿಯಲ್ಲಿ ಮೇಯರ್ ಮತ್ತು ಉಪ ಮೇಯರ್ ಪಟ್ಟಕ್ಕಾಗಿ ಗುರುವಾರ ರಾತ್ರಿಯಿಂದ ಕಾಂಗ್ರೆಸ್, ಜೆಡಿಎಸ್ ನಡುವೆ ನಡೆಯುತ್ತಿರುವ ಮೈತ್ರಿ ಮಾತುಕತೆಗೆ ಅಂತಿಮ ತೆರೆ ಬಿದ್ದಿಲ್ಲ. ಶನಿವಾರ ಕಾಂಗ್ರೆಸ್ ನಾಯಕರ ಸಭೆ ನಡೆಲಿದ್ದು, ನಂತರ ಅಂತಿಮ ತೀರ್ಮಾನ ಪ್ರಕಟವಾಗುವ ಸಾಧ್ಯತೆ ಇದೆ.
ಮೈತ್ರಿ ಮಾಡಿಕೊಳ್ಳುವ ಮೂಲಕ ಪಾಲಿಕೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಉಭಯ ಪಕ್ಷಗಳು ನಿರ್ಧರಿಸಿವೆ. ಪಕ್ಷೇತರರನ್ನು ಸೆಳೆಯಲು ಪ್ರಯತ್ನ ನಡೆಸಿವೆ. ಅತ್ತ ಬಿಬಿಎಂಪಿ ಚುನಾವಣೆಯಲ್ಲಿ 100 ಸ್ಥಾನಗಳಿಸಿರುವ ಬಿಜೆಪಿ ಒಬ್ಬರು ಪಕ್ಷೇತರರನ್ನು ಸೇರಿಸಿಕೊಂಡಿದ್ದು, ಇತರ ಮೂವರ ಜೊತೆ ಸಂಪರ್ಕದಲ್ಲಿದೆ. [ಶುಕ್ರವಾರ ಬೆಳಗ್ಗೆಯಿಂದ ಏನೇನಾಯ್ತು? ನೋಡಿ]
ಕಾಂಗ್ರೆಸ್ ಪಕ್ಷದ ಈ ಮೈತ್ರಿ ಸರ್ಕ್ಸ್ ಪ್ರಜಾಪ್ರಭುತ್ವ ವಿರೋಧಿ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಮೈತ್ರಿಗೆ ಅಪಸ್ವರ ಎದ್ದಿದ್ದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೈತ್ರಿ ಬೇಡ ಎಂಬ ಮಾತಿಗಳನ್ನಾಡುತ್ತಿದ್ದಾರೆ ಎಂಬುದು ಶುಕ್ರವಾರ ಸಂಜೆಯ ತಾಜಾ ಸುದ್ದಿ. [ಮೈತ್ರಿ ಕಸರತ್ತು, ಮ್ಯಾಜಿಕ್ ನಂಬರ್ ಏನು?]
ಈ ಮಾತುಕತೆ ಸರ್ಕಸ್ ಶನಿವಾರ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುವ ಸಾಧ್ಯತೆ ಇದೆ. ಕಾಂಗ್ರೆಸ್ ದೋಸ್ತಿಗಾಗಿ ಹೈಕಮಾಂಡ್ ಒಪ್ಪಿಗೆ ಕೇಳಿದೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಬೆಳಗ್ಗೆ 11ಗಂಟೆಗೆ ನಡೆಯಲಿರುವ ಸಭೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಮೈತ್ರಿ ಬಗ್ಗೆ ಯಾರು ಏನು ಹೇಳಿದರು ನೋಡೋಣ ಬನ್ನಿ......
ಮೈತ್ರಿ ಬಗ್ಗೆ ನನಗೆ ಮಾಹಿತಿ ಇಲ್ಲ
'ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಮೈತ್ರಿ ಪ್ರಸ್ತಾಪವೂ ನನ್ನ ಮುಂದೆ ಬಂದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. 'ಮೈತ್ರಿ ಬಗ್ಗೆ ನಿಮಗೆ ಹೇಳಿದ್ದು ಯಾರು?' ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.
'ಚಾಪೆ-ರಂಗೋಲಿ ರಾಜಕಾರಣ'
'ಹಿಂಬಾಗಿಲ ಮೂಲಕ ಕಾಂಗ್ರೆಸ್, ಜೆಡಿಎಸ್ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ತಂತ್ರ ಮಾಡುತ್ತಿವೆ. ದೇವೇಗೌಡರನ್ನು ಬೈಯುವ ಸಿದ್ದರಾಮಯ್ಯ ಅವರು ಜೆಡಿಎಸ್ನೊಂದಿಗೆ ಮೈತ್ರಿಗೆ ಮುಂದಾಗಿದ್ದಾರೆ. ಚಾಪೆ, ರಂಗೋಲಿ ರಾಜಕಾರಣ ಮಾಡಿದರೆ ಇದು ಅವರ ಕೊನೆಯ ರಾಜಕಾರಣವಾಗಲಿದೆ' ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
'ಬಿಜೆಪಿ ದುರಾಡಳಿತ ಬರುವುದು ಬೇಡ'
'ಬೆಂಗಳೂರಿನಲ್ಲಿ ಬಿಜೆಪಿ ದುರಾಡಳಿತ ಪುನರಾವರ್ತನೆ ಯಾಗಬಾರದು ಎಂಬ ಕಾರಣಕ್ಕೆ ಮೈತ್ರಿ ಮಾತುಕತೆ ನಡೆಯುತ್ತಿದೆ. ಆದರೆ, ಈ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಕಾಂಗ್ರೆಸ್ನಿಂದ ಅಧಿಕೃತವಾದ ಪ್ರಸ್ತಾವನೆಯೂ ಬಂದಿಲ್ಲ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಮುನ್ನುಡಿ
'198 ಸ್ಥಾನಗಳ ಪೈಕಿ 100 ಸ್ಥಾನಗಳನ್ನು ಗಳಿಸಿರುವ ಬಿಜೆಪಿಗೆ ಬಿಬಿಎಂಪಿ ಆಡಳಿತ ಚುಕ್ಕಾಣಿ ನಿರಾಕರಿಸಲು 76 ಸ್ಥಾನಗಳನ್ನು ಗಳಿಸಿರುವ ಸಿದ್ದರಾಮಯ್ಯನವರು ಮಾಡುತ್ತಿರುವ ಪ್ರಯತ್ನವಿದು. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಇದು ಅಮೂಲ್ಯ ಕೊಡುಗೆ' ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ಬರೆದಿದ್ದಾರೆ.
'ಕಾಂಗ್ರೆಸ್ನಿಂದ ದೋಸ್ತಿ ಪ್ರಸ್ತಾವನೆ ಬಂದಿದೆ'
'ಬಿಬಿಎಂಪಿಯಲ್ಲಿ ದೋಸ್ತಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್ನಿಂದ ಪ್ರಸ್ತಾವನೆ ಬಂದಿದೆ. ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ನಾಯಕರ ಮತ್ತು ನೂತನ ಸದಸ್ಯರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ಶಾಸಕ ಜಮೀರ್ ಅಹಮದ್ ಖಾನ್ ದೇವೇಗೌಡರ ಭೇಟಿ ಬಳಿಕ ಹೇಳಿದ್ದಾರೆ.