ಖಚಿತ ಸುದ್ದಿ: ಸುಮಲತಾ ಮುಡಿಗೇರಲಿದೆ 'ಕಮಲ'
ಮಾಜಿ ಸಚಿವ, ಶಾಸಕ, ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಷ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಂತೆ ಎಂಬ ಸುದ್ದಿ ಮತ್ತೆ ಕೇಳಿ ಬಂದಿದೆ. ಆದರೆ, ಅಂಬರೀಷ್ ಜತೆಗೆ ತಾರಾಪತ್ನಿ ಸುಮಲತಾ ಅವರು ಕಮಲವನ್ನು ಮುಡಿಗೇರಿಸುವುದು ಖಚಿತ.
ಬೆಂಗಳೂರು, ಮಾರ್ಚ್ 14: ಮಾಜಿ ಸಚಿವ, ಶಾಸಕ, ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಂತೆ ಎಂಬ ಸುದ್ದಿ 2009ರಲ್ಲೂ ಕೇಳಿ ಬಂದಿತ್ತು. 2016ರಲ್ಲಿ ಮತ್ತೊಮ್ಮೆ ಬಲವಾಗಿ ಕೇಳಿ ಬಂದಿತ್ತು. ಈಗ ಒನ್ಇಂಡಿಯಾಕ್ಕೆ ಲಭ್ಯವಿರುವ ಮಾಹಿತಿಯಂತೆ ಅಂಬರೀಷ್ ಹಾಗೂ ಅವರ ಪತ್ನಿ ಸುಮಲತಾ ಅವರಿಬ್ಬರೂ ಬಿಜೆಪಿ ಸೇರುವುದು ಖಚಿತವಾಗಿದೆ.
ಬಲ್ಲಮೂಲಗಳಿಂದ ತಿಳಿದು ಬಂದ ಸಂಗತಿಯಂತೆ, 53 ವರ್ಷ ವಯಸ್ಸಿನ ನಟಿ ಸುಮಲತಾ ಅವರು ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗುತ್ತಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗುವ ಭರವಸೆ ಸಿಕ್ಕಿದೆ.[ನಟಿ ಸುಮಲತಾ ಅಂಬರೀಶ್ ಬಗ್ಗೆ ಹಬ್ಬಿರುವ ಸುದ್ದಿ ನಿಜವೇ.?]
ರೆಬೆಲೆ ಸ್ಟಾರ್ ಕಂಡೀಷನ್ : ನನ್ನ ಪತ್ನಿಗೆ ಬೆಂಗಳೂರಿನಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ ನಾನು ಬಿಜೆಪಿ ಸೇರುತ್ತೇನೆ ಎಂಬ ಕಂಡೀಷನ್ ನೊಂದಿಗೆ ಅಂಬರೀಷ್ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಅಂಬರೀಷ್ ಅವರ ಸ್ಪರ್ಧೆ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.[ದಯವಿಟ್ಟು ಕ್ಷಮಿಸಿ ಎಂದು ಕನ್ನಡಿಗರ ಮುಂದೆ ಕೈಮುಗಿದ ಅಂಬಿ]
ಬಿಜೆಪಿಗೆ ಬರುವುದಾದರೆ ನಮ್ಮ ವಿರೋಧವಿಲ್ಲ
ಅಂಬರೀಶ್ ಹಾಗೂ ಸುಮಲತಾ ಅವರು ಬಿಜೆಪಿಗೆ ಬರುವುದಾದರೆ ನಮ್ಮ ವಿರೋಧವಿಲ್ಲ. ಅಂಬರೀಷ್ ಅವರಿಂದ ರಾಜೀನಾಮೆ ಪಡೆಯುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಜತೆ ಮಾತನಾಡಿಲ್ಲ ಎಂಬ ಬೇಸರ ಅವರಿಗಿದೆ. ಆದರೆ, ಬಿಜೆಪಿಯ ರಾಜ್ಯ ಮುಖಂಡರು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ಆರ್ ಅಶೋಕ ಅವರು ಪುನರುಚ್ಚರಿಸಿದ್ದಾರೆ.
ಮಂಡ್ಯ, ಮೈಸೂರಲ್ಲಿ ಪಕ್ಷದ ಬಲವರ್ಧನೆ
ಹಳೆ ಮೈಸೂರು, ಮಂಡ್ಯ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಪ್ರಭಾವಿ ಮುಖಂಡರು ಬೇಕಿದ್ದು,ಈಗಾಗಲೇ ಎಸ್ಸೆಂ ಕೃಷ್ಣ ಅವರು ಬಿಜೆಪಿ ಸೇರುತ್ತಿದ್ದಾರೆ. ಅಂಬರೀಷ್ ಅವರ ಜನಪ್ರಿಯತೆ, ಅನುಭವದ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಇನ್ನು ಮಾಜಿ ಸಚಿವ ವಿ ಶ್ರೀನಿವಾಸಪ್ರಸಾದ್ ಅವರು ಬಿಜೆಪಿ ಟಿಕೆಟ್ ಪಡೆದು ನಂಜನಗೂಡಿನಿಂದ ಸ್ಪರ್ಧೆಗಿಳಿದಿದ್ದಾರೆ.ಈ ಮೂಲಕ ಒಕ್ಕಲಿಗ ಹಾಗೂ ದಲಿತ ಮತಗಳನ್ನು ಸೆಳೆಯಲು ಬಿಜೆಪಿ ಸಿದ್ಧತೆ ನಡೆಸಿದೆ.
ಸುಮಲತಾ ಸ್ಪರ್ಧೆ ಖಚಿತವೆ?
ಸುಮಲತಾ ಅಂಬರೀಶ್ ಅವರು ಯಶವಂತಪುರದಲ್ಲಿ ಸ್ಪರ್ಧಿಸುವ ಬಗ್ಗೆ ಕಳೆದ ಚುನಾವಣೆ ವೇಳೆಯಲ್ಲೇ ಸುದ್ದಿಯಾಗಿತ್ತು. ಈ ಬಗ್ಗೆ ಪಕ್ಷದಲ್ಲಿ ಇನ್ನೂ ಚರ್ಚೆಯಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಆಗ ಆರ್ ಅಶೋಕ ಹೇಳಿದ್ದರು. ಈಗ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದೆ. ಹಿಂದೊಮ್ಮೆ ಸುಮಲತಾ ಅವರಿಗೆ ಎಂಎಲ್ಸಿ ಸ್ಥಾನ ಸಿಗುತ್ತದೆ ಎಂಬ ಸುದ್ದಿಯೂ ಹಬ್ಬಿತ್ತು.
ಸುಮಲತಾ ಟ್ವೀಟ್ ಗಳ ಸುತ್ತಾ
ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಸಕ್ರಿಯರಾಗಿರುವ ಸುಮಲತಾ ಅವರು, ಬಿಜೆಪಿ ವಿರೋಧಿ, ಮೋದಿ ವಿರೋಧಿ ಟ್ವೀಟ್ ಮಾಡಿದ್ದನ್ನು ಮರೆಯುವಂತಿಲ್ಲ. ಅಪನಗದೀಕರಣದ ವಿರುದ್ಧ ದನಿ ಎತ್ತಿ,ಟ್ವೀಟ್ ಮಾಡಿದ್ದರು. ಬಿಜೆಪಿ ನಾಯಕರು ಕೂಡಾ ವಾದಿಸಿದ್ದರು. ಈಗ ಸುಮಲತಾ ಅವರ ಟೈಮ್ ಲೈನ್ ನಿಂದ ಎಲ್ಲವೂ ಮಾಯವಾಗಿದೆ. ಕೆಲ ದಿನಗಳಿಂದ ಬಿಜೆಪಿ-ಮೋದಿ ಪರ ಸಂದೇಶಗಳು ಬರುತ್ತಲಿವೆ.
ಇನ್ನಷ್ಟು ಮಂದಿ ಸೇರಲಿದ್ದಾರೆ
ಲಭ್ಯ ಮಾಹಿತಿ ಪ್ರಕಾರ ಅಂಬರೀಷ್ ಹಾಗೂ ಸುಮಲತಾ ಅವರು ಬಿಜೆಪಿ ಸೇರುವುದನ್ನು ಅನೇಕ ಮಂದಿ ಕಾಯುತ್ತಿದ್ದಾರೆ. ನಂತರ, ಎ ರವಿ, ತುಳಸಿ ಮುನಿರಾಜು, ರಾಮಚಂದ್ರ, ಚೆಲುವರಾಯಸ್ವಾಮಿ ಅವರು ಕೂಡಾ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಒಟ್ಟಾರೆ, ನವೆಂಬರ್ ತನಕ ಯಾವುದೇ ಸ್ಪಷ್ಟ ಚಿತ್ರಣ ಸಿಗುವುದಿಲ್ಲ. ಬಿಜೆಪಿಯ ಕೇಂದ್ರ ನಾಯಕರು ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ. ಗುಜರಾತ್, ತೆಲಂಗಾಣ ನಂತರ ಕರ್ನಾಟಕದ ಚುನಾವಣೆ ಬಗ್ಗೆ ಬಿಜೆಪಿ ತಂತ್ರ ರೂಪಿಸಲಿದೆ.