ಚೆನ್ನೈ ವ್ಯಕ್ತಿಯ ಜೀವ ಉಳಿಸಿದ ಬೆಂಗಳೂರು ಮಹಿಳೆಯ ಹೃದಯ!
ಚೆನ್ನೈ ಗ್ಲೆನೆಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಹೃದಯ ಕಸಿಯ ಅಗತ್ಯವಿದ್ದ ರೋಗಿಯೊಬ್ಬರಿಗೆ ಮಹಿಳೆಯೊಬ್ಬರ ಹೃದಯವನ್ನು ಕಸಿಮಾಡಲಾಗಿದ್ದು, ಸತ್ತ ನಂತರವೂ ಮಹಿಳೆಯ ಹೃದಯ ಮಾತ್ರ ಉಸಿರಾಡುತ್ತಲೇ ಇದೆ!
ಬೆಂಗಳೂರು, ಏಪ್ರಿಲ್ 27: ಬೆಂಗಳೂರು ಮಹಿಳೆಯ ಹೃದಯ ಚೆನ್ನೈನ ವ್ಯಕ್ತಿಯೊಬ್ಬರ ಜೀವ ಉಳಿಸಿದೆ. ಚೆನ್ನೈ ಗ್ಲೆನೆಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಹೃದಯ ಕಸಿಯ ಅಗತ್ಯವಿದ್ದ ರೋಗಿಯೊಬ್ಬರಿಗೆ ಈ ಮಹಿಳೆಯ ಹೃದಯವನ್ನು ಕಸಿಮಾಡಲಾಗಿದ್ದು, ಸತ್ತ ನಂತರವೂ ಮಹಿಳೆಯ ಹೃದಯ ಮಾತ್ರ ಉಸಿರಾಡುತ್ತಲೇ ಇದೆ!
ಏಪ್ರಿಲ್ 23 ಮೆದುಳಿನ ರಕ್ತಸ್ರಾವದಿಂದ ಮಹಿಳೆಯೊಬ್ಬರು ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಏಪ್ರಿಲ್ 25 ರಂದು ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದ್ದರು. ತಕ್ಷಣವೇ ಮಹಿಳೆಯ ಕುಟುಂಬಸ್ಥರು ಆಕೆಯ ದೇಹದ ವಿವಿಧ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆದರ್ಶ ಮೆರೆದರು.[ಗ್ರೀನ್ ಕಾರಿಡಾರಿನಲ್ಲಿ ಹೃದಯ ರವಾನೆ, ಯಶಸ್ವಿಯಾದ ಕಸಿ]
ಆಕೆಯ ಶ್ವಾಸಕೋಶವನ್ನು ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ, ಕಣ್ಣನ್ನು ನಾರಾಯಣ ನೇತ್ರಾಲಯಕ್ಕೆ ಮತ್ತು ಚರ್ಮವನ್ನು ವಿಕ್ಟೋರಿಯಾ ಆಸ್ಪತ್ರೆಯ ಚರ್ಮ ಬ್ಯಾಂಕ್ ಗೆ ಕಳುಹಿಸಿಕೊಡಲಾಯ್ತು. ಕೆಂಗೇರಿಯ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ಆಸ್ಪತ್ರೆಯಿಂದ ಕೇವಲ 31 ನಿಮಿಷದಲ್ಲಿ ಹೃದಯವನ್ನು ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಯ್ತು. ನಂತರ ವಿಶೇಷ ವಿಮಾನದಲ್ಲಿ ಈಕೆಯ ಹೃದಯವನ್ನು ಚೆನ್ನೈನ ಗ್ಲೆನೆಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಗೆ ಕಳಿಸಿ ಕಸಿ ಮಾಡಲಾಗಿದೆ. ಹೃದಯ ಕಸಿ ಯಶಸ್ವಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.