ರಾಜಕಾಲುವೆ ತೆರವು: ಮಾನ್ಯತಾ ಟೆಕ್ ಪಾರ್ಕ್ ಮೇಲೆ ಬಿಬಿಎಂಪಿ ಕಣ್ಣು
ಬೆಂಗಳೂರು, ಆಗಸ್ಟ್, 18: ರಾಜ ಕಾಲುವೆ ಒತ್ತುವರಿ ತೆರವು ಹಲವು ಗೊಂದಲಗಳ ನಡುವೆಯೂ ಬೆಂಗಳೂರಿನಲ್ಲಿ ಮುಂದುವರಿದೇ ಇದೆ. ಬೆಂಗಳೂರಿನ ಅತಿದೊಡ್ಡ ಟೆಕ್ ಪಾರ್ಕ್ ಗಳಲ್ಲಿ ಒಂದಾದ ಮಾನ್ಯತಾ ಟೆಕ್ ಪಾರ್ಕ್ ಸಹ ಸರ್ವೆಗೆ ಒಳಗಾಗಬೇಕಿದೆ.
ಆದ್ಯತೆ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಾನ್ಯತಾ ಟೆಕ್ ಪಾರ್ಕ್ ಗೆ ಸಂಬಂಧಿಸಿದ ಜಾಗಗಳ ಸರ್ವೆ ಮಾಡಲು ಮುಂದಾಗಿದ್ದಾರೆ. ಎಲ್ಲಿಯಾದರೂ ಒತ್ತುವರಿ ನಡೆದಿದೆಯೇ ಎಂಬುದನ್ನು ಪರಿಶೀಲನೆ ಮಾಡಲಿದ್ದಾರೆ.[ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್ಸೈಟ್ನಲ್ಲಿ ಲಭ್ಯ]
'ನಾವು ಕಾಲುವೆ ಸಂಬಂಧಿಸಿದ ಜಾಗದ ಸರ್ವೆ ಮಾಡಲಿದ್ದೇವೆ. ಮಾನ್ಯತಾ ಟೆಕ್ ಪಾರ್ಕ್ ಇಲ್ಲಿ ಒತ್ತುವರಿ ಮಾಡಿಕೊಂಡ ಅನುಮಾನಗಳು ಇದ್ದು ಪರಿಶೀಲನೆ ಮಾಡಲಾಗುತ್ತದೆ' ಎಂದು ಯಲಹಂಕ ವಲಯದ ಜಂಟಿ ಆಯುಕ್ತ ಸರ್ಫ್ ರಾಜ್ ಖಾನ್ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.[ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ]
ಕಳೆದ ವರ್ಷ ಬಿಬಿಎಂಪಿ ಮಾನ್ಯತಾ ಟೆಕ್ ಪಾರ್ಕ್ ಗೆ ಸಂಬಂಧಿಸಿದ ಸೇತುವೆಯನ್ನು ಒತ್ತುವರಿ ಹೆಸರಿನಲ್ಲಿ ಕೆಡವಿತ್ತು. ಕಾಲುವೆ ದಿಕ್ಕನ್ನು ಬದಲಿಸಿ ಟೆಕ್ ಪಾರ್ಕ್ ನಿರ್ಮಿಸಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗಿದೆ.
2015 ರ ಅಕ್ಟೊಬರ್ 7 ರಂದು 14 ವರ್ಷದ ಹುಡುಗನೊಬ್ಬ ಇದೇ ಟೆಕ್ ಪಾರ್ಕ್ ಬಳಿಯ ಕಾಲುವೆಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದು ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಟೆಕ್ ಪಾರ್ಕ್ ಮೇಲೆ ಕ್ರಿಮಿನಲ್ ಮೊಕದ್ದಮೆಯೂ ದಾಖಲಾಗಿತ್ತು.
ಸಿಎಂ ಸಿದ್ದರಾಮಯ್ಯ ಸಹ ಒತ್ತುವರಿ ತೆರವಿಗೆ ಸ್ಪಷ್ಟ ಆದೇಶ ನೀಡಿದ್ದಾರೆ. ನಾವು ಆದ್ಯತೆ ಮೇರೆಗೆ ಮಾನ್ಯತಾ ಟೆಕ್ ಪಾರ್ಕ್ ಒತ್ತುವರಿಗೆ ಸಂಬಂಧಿಸಿ ಸರ್ವೆ ಮಾಡಲಿದ್ದೇವೆ. ಒಂದು ವೇಳೆ ಕಾಲುವೆ ಒತ್ತುವರಿಯಾಗಿದ್ದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡುತ್ತೇವೆ ಎಂದು ಯಲಹಂಕ ವಲಯದ ಮುಖ್ಯ ಇಂಜಿನಿಯರ್ ಪರಮೇಶ್ವರಯ್ಯ ತಿಳಿಸಿದ್ದಾರೆ.