ನಾರಿಯರ ಸೀರೆಗೆ ಕೈಹಾಕಿ ತಗ್ಲಾಕೊಂಡಿದ್ದು ಮರೆತ್ರಾ ಸಿ ಎಂ ಇಬ್ರಾಹಿಂ?
ಬೆಂಗಳೂರು, ಆಗಸ್ಟ್ 18: ಬಿಬಿಎಂಪಿ ಚುನಾವಣೆಯ ಹೊಸ್ತಿಲಲ್ಲಿ ಮೂರು ಪ್ರಮುಖ ಪಕ್ಷದ ಮುಖಂಡರು ತಮ್ಮ ವಿರೋಧಿ ಪಾಳ್ಯದ ನಾಯಕರ ಮೇಲೆ ಏನೇನೋ ಹೇಳಿಕೆ ನೀಡುತ್ತಿದ್ದಾರೆ.
ಪ್ರಚಾರದ ಮಾತಿನ ಅಬ್ಬರದಲ್ಲಿ, ನಾರಿ, ನಾರಿಯ ಸೀರೆ, ಕೊತ್ವಾಲ್ ರಾಮಚಂದ್ರ, ದುಶ್ಯಾಸನ, ಭ್ರಷ್ಟಾಸುರ ಎಲ್ಲರನ್ನೂ ಮೂರು ಪಕ್ಷದ ಮುಖಂಡರು ಮತ್ತೆ ಕರೆ ತರುತ್ತಿದ್ದಾರೆ. ನಾಯಕರ ತೀಕ್ಷ್ಣ ಮಾತಿಗೆ ಸಭೆಯಲ್ಲಿ ಜಮಾಯಿಸಿದ್ದ ಜನ ಮುಸಿಮುಸಿ ನಗುತ್ತಿದ್ದಾರೆ. (ಬೆಂಗಳೂರು ಅಭಿವೃದ್ದಿ ಮಾಡಿದ್ದು ಯಾರು)
ಕಳೆದ ಭಾನುವಾರ (ಆ16) ಯಡಿಯೂರಪ್ಪ ಅವರನ್ನು ಬೆಂಗಳೂರಿನ ಒಂದು ಕಾಲದ ಖತರ್ನಾಕ್ ರೌಡಿ ಕೊತ್ವಾಲ್ ರಾಮಚಂದ್ರನಿಗೆ ಇಬ್ರಾಹಿಂ ಹೋಲಿಸಿದ್ದರೆ, ಇಬ್ರಾಹಿಂ ಒಬ್ಬ ದುಶ್ಯಾಸನ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿ ಸೇಡು ತೀರಿಸಿಕೊಂಡಿದ್ದಾರೆ.
ಇತ್ತ ಸೋಮವಾರ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿಯನ್ನು ಭ್ರಷ್ಟಾಸುರ ಎಂದರೆ ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ನಿದ್ರಾಸುರ ಎಂದು ಜರಿದಿದ್ದಾರೆ.
ಇದಕ್ಕೆ ಜೆಡಿಎಸ್ ಕೂಡಾ ಹೊರತಾಗಿಲ್ಲ. ವಿದ್ಯಾಪೀಠದ ಬಳಿಯ ಶಂಕರ್ ನಾಗ್ ವೃತ್ತದಲ್ಲಿ ಮಾತನಾಡುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡ್ರು, ಅವ್ರೂ ಬೇಡ, ಇವ್ರೂ ಬೇಡ ನಮಗೊಂದು ಚಾನ್ಸ್ ಕೊಡಿ ಎಂದು ಮನವಿ ಮಾಡಿದ್ದಾರೆ.
ಮೂರು ಪಕ್ಷದ ಮುಖಂಡರು ಆಡಿರುವ ಮುತ್ತಿನಂತಹ ಕೆಲವೊಂದು ಹೇಳಿಕೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಯಡಿಯೂರಪ್ಪ, ಕೊತ್ವಾಲ್ ರಾಮಚಂದ್ರ
ಬಿಬಿಎಂಪಿ ಚುನಾವಣೆ ಸಭೆಯಲ್ಲಿ ಮಾತಿನ ಭರಾಟೆಯಲ್ಲಿ ಯಡಿಯೂರಪ್ಪ, ಕೊತ್ವಾಲ್ ರಾಮಚಂದ್ರ ನಿಲ್ಲಬೇಕಾಗಿದ್ದ ಜಾಗದಲ್ಲಿ ನಿಂತಿದ್ದಾರೆ. ಬಿಜೆಪಿಯ ಮುಖಂಡರೆಲ್ಲಾ ಜೈಲಿಗೆ ಹೋಗಲು ಸಾಲುಗಟ್ಟಿ ನಿಂತಿದ್ದಾರೆಂದು ಇಬ್ರಾಹಿಂ ಲೇವಡಿ ಮಾಡಿದ್ದರು.
ಕೋರ್ಟಿನಲ್ಲಿ ಎಲ್ಲಾ ಬಿಜೆಪಿಯ ಮುಖಂಡರು
ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡಿನಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಾ ಇಬ್ರಾಹಿಂ, ಬಿಜೆಪಿಯ ನಾಯಕರೆಲ್ಲಾ ರಾಜಧಾನಿಯ ಕೋರ್ಟುಗಳಲ್ಲಿ ಜನಪ್ರಿಯರಾಗಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಜರ್ ಹೋ... ಹಾಲಪ್ಪ ಹಾಜರ್ ಹೋ... ಎಂದು ಬಿಜೆಪಿ ನಾಯಕರ ಹೆಸರು ಮಾತ್ರ ಕೋರ್ಟಿನಲ್ಲಿ ಕೇಳಿಬರುತ್ತಿದೆ ಎಂದು ತಮಾಷೆಯಾಡಿದ್ದರು.
ಅಶೋಕ್ ಕೆಂಡಾಮಂಡಲ
ಇಬ್ರಾಹಿಂ ಹೇಳಿಕೆಗೆ ತೀವ್ರವಾಗಿ ಟೀಕಿಸಿದ್ದ ಅಶೋಕ್, ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ಸಿನ ದುಶ್ಯಾಸನ ಎಂದು ಕಿಡಿಕಾರಿದ್ದಾರೆ.
ಇನ್ನೂ ಮುಂದುವರಿಯುತ್ತಾ ಅಶೋಕ್
ಸ್ವಾಮಿ ಇಬ್ರಾಹಿಂ ಸಾಹೇಬ್ರೇ, ಹಿಂದೆ ಹೆಣ್ಣು ಮಕ್ಕಳ ಸೀರೆಗೆ ಕೈ ಹಾಕಿ ಕೇಸು ಹಾಕಿಸಿಕೊಂಡಿದ್ದನ್ನು ಮರೀಬೇಡಿ. ನಿಮ್ಮಂತವರ ಬಾಯಲ್ಲಿ ಯಡಿಯೂರಪ್ಪನವರ ಹೆಸರು ಬರಬಾರದು. ನೀವು ಯಡಿಯೂರಪ್ಪನವರ ಕಾಲಿನ ಬೆರಳಿನ ಉಗುರಿಗೂ ಸಮನಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇತ್ತ ದೇವೇಗೌಡ್ರು
ಚುನಾವಣಾ ಪ್ರಚಾರದಲ್ಲಿ ಮಾಜಿ ಪ್ರಧಾನಿ ಗೌಡ್ರು ಮಾತನಾಡುತ್ತಾ, ನಮಗೂ ಒಂದು ಅವಕಾಶ ಕೊಡಿ. ಅಂದು ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿ ಎಂದು ಮನವಿ ಮಾಡಿದ್ದೆ. ಅಟಲ್ ಒಬ್ಬರು ಅಪರೂಪದ ರಾಜಕಾರಣಿ. ಇವತ್ತಿನವರೆಗೂ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಶಾಸ್ವತ ಪರಿಹಾರ ಸಿಗಲಿಲ್ಲ. ನಮ್ಮ ಶಕ್ತಿಯನ್ನು ಲೇವಡಿ ಮಾಡುವವರಿಗೆ ಮತದಾರರು ತಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ ಎಂದು ದೇವೇಗೌಡ್ರು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿಯವರು ಭ್ರಷ್ಟಾಸುರರು
ಬಿಜೆಪಿಯ ಐದು ವರ್ಷದ ಅಧಿಕಾರ ಸಾಕಪ್ಪಾ ಸಾಕು ಎಂದು ಬೆಂಗಳೂರಿಗರಿಗೆ ಅನಿಸಿದೆ. ಎಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲಾ ದುಡ್ದು ಲೂಟಿ ಹೊಡಿದಿದ್ದೇ ಬಿಜೆಪಿಯ ಐದು ವರ್ಷದ ಸಾಧನೆ. ಬಿಜೆಪಿಯವರು ಭ್ರಷ್ಟಾಸುರರು, ಬೆಂಗಳೂರಿನ ಪುರಾತನ ಕಟ್ಟಡಗಳನ್ನು ಅಡವಿಟ್ಟಿದ್ದು ಬಿಜೆಪಿಯ ಸಾಧನೆ ಎಂದು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿದ್ರಾಮಯ್ಯ ನಿದ್ರಾಸುರ
ನಮ್ಮನ್ನು ಲೇವಡಿ ಮಾಡುವ ಯಾವುದೇ ನೈತಿಕ ಹಕ್ಕು ಕಾಂಗ್ರೆಸ್ಸಿಗಿಲ್ಲ. ಸಿದ್ದರಾಮಯ್ಯನವರು ನಿದ್ದೆ ಮಾಡುವುದನ್ನು ಬಿಟ್ಟು ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನು ನೋಡಿ ಅನುಸರಿಸಲಿ, ರಾಜ್ಯದ ಮುಖ್ಯಮಂತ್ರಿ ನಿದ್ರಾಸುರ ಆಗಬಾರದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.