ಬಿಬಿಎಂಪಿ ಮೇಯರ್ ಹುದ್ದೆಯ ರೇಸ್ನಲ್ಲಿರುವ ನಾಯಕರು
ಬೆಂಗಳೂರು, ಆ.27 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮೇಯರ್ ಆಯ್ಕೆ ಪ್ರಕ್ರಿಯೆಗಳು ಆರಂಭವಾಗುವ ಸಾಧ್ಯತೆ ಇದೆ.
ಮೇಯರ್ ಮತ್ತು ಉಪ ಮೇಯರ್ ಮೀಸಲಾತಿಯನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗಕ್ಕೆ ಮೇಯರ್ ಮತ್ತು ಸಾಮಾನ್ಯ ವರ್ಗದ ಮಹಿಳೆಗೆ ಉಪ ಮೇಯರ್ ಹುದ್ದೆ ನಿಗದಿಪಡಿಸಲಾಗಿದೆ. ಇದಕ್ಕಾಗಿ ಈಗ ಪೈಪೋಟಿ ಆರಂಭವಾಗಿದೆ. [ಪಾಲಿಕೆ ಸಮೀಕ್ಷೆ: ಟಿವಿ ಮಾಧ್ಯಮಗಳ ಭವಿಷ್ಯ ಸುಳ್ಳಾಗಿದ್ದೇಕೆ?]
ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಬಿಬಿಎಂಪಿಯ 198 ಸದಸ್ಯರು. ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿದಂತೆ 52 ಸದಸ್ಯರಿಗೆ ಮತದಾನ ಮಾಡುವ ಅಧಿಕಾರವಿದೆ. ಒಟ್ಟು 250 ಸದಸ್ಯರು ಮೇಯರ್ ಆಯ್ಕೆಗೆ ಮತದಾನ ಮಾಡಲಿದ್ದಾರೆ. [ಬಿಬಿಎಂಪಿ ಚುನಾವಣೆ ಫಲಿತಾಂಶ : ಗೆದ್ದ-ಸೋತ ಪ್ರಮುಖರು]
ಮೇಯರ್ ಮತ್ತು ಉಪ ಮೇಯರ್ ಪಟ್ಟದ ಆಕಾಂಕ್ಷಿಗಳು ಗೆಲುವು ಸಾಧಿಸಲು 126 ಮತಗಳು ಬೇಕಾಗಿವೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ 100 ಸದಸ್ಯರು ಗೆಲುವು ಸಾಧಿಸಿದ್ದಾರೆ. 22 ಇತರ ಸದಸ್ಯರ ಮತಗಳು ಬಿಜೆಪಿ ಬಳಿ ಇವೆ. ಮೇಯರ್ ಪಟ್ಟದ ರೇಸ್ನಲ್ಲಿ ಯಾರಿದ್ದಾರೆ? ಚಿತ್ರಗಳಲ್ಲಿ ನೋಡಿ....
ಪದ್ಮನಾಭ ರೆಡ್ಡಿ ಅವರ ಹೆಸರು ಕೇಳಿ ಬರುತ್ತಿದೆ
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಕಾಚರಕನಹಳ್ಳಿ ವಾರ್ಡ್ನಿಂದ 7,512 ಮತಗಳನ್ನು ಪಡೆದು ಜಯಗಳಿಸಿದ ಪದ್ಮನಾಭ ರೆಡ್ಡಿ ಅವರ ಹೆಸರು ಮೇಯರ್ ಪಟ್ಟಕ್ಕೆ ಕೇಳಿಬರುತ್ತಿದೆ. ಆದರೆ, ಇವರು ಜೆಡಿಎಸ್ನಿಂದ ಬಿಜೆಪಿಗೆ ಬಂದವರು. ಮೂಲ ಬಿಜೆಪಿಯವರಿಗೆ ಅವಕಾಶ ನೀಡಲಾಗುತ್ತದೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ.
ಗೋವಿಂದರಾಜ ನಗರದ ಉಮೇಶ್ ಶೆಟ್ಟಿ
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಗೋವಿಂದರಾಜನಗರ ವಾರ್ಡ್ನಲ್ಲಿ ಗೆಲುವು ಸಾಧಿಸಿದ ಕೆ.ಉಮೇಶ್ ಶೆಟ್ಟಿ ಅವರ ಹೆಸರು ಮೇಯರ್ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಅನಂತ್ ಕುಮಾರ್, ಆರ್.ಅಶೋಕ್, ಮತ್ತು ವಿ.ಸೋಮಣ್ಣ ಅವರ ಜೊತೆಗೂ ಉಮೇಶ್ ಶೆಟ್ಟಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 7865 ಮತಗಳನ್ನು ಪಡೆದು ಉಮೇಶ್ ಶೆಟ್ಟಿ ಜಯಗಳಿಸಿದ್ದಾರೆ.
ಎಲ್. ಶ್ರೀನಿವಾಸ್ ಹೆಸರು ಕೇಳಿಬರುತ್ತಿದೆ
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕುಮಾರಸ್ವಾಮಿ ಲೇಔಟ್ ವಾರ್ಡ್ನಿಂದ ಆಯ್ಕೆಯಾಗಿರುವ ಎಲ್.ಶ್ರೀನಿವಾಸ್ ಅವರ ಹೆಸರು ಮೇಯರ್ ಪಟ್ಟಕ್ಕೆ ಕೇಳಿಬರುತ್ತಿದೆ. 9670 ಮತಗಳನ್ನು ಪಡೆದು ಶ್ರೀನಿವಾಸ್ ಆಯ್ಕೆಯಾಗಿದ್ದರು. 2010ರ ಚುನಾವಣೆಯಲ್ಲಿಯೂ ಶ್ರೀನಿವಾಸ್ ಇದೇ ಕ್ಷೇತ್ರದಿಂದ ಗೆದ್ದಿದ್ದರು. ಚುನಾವಣೆ ಉಸ್ತುವಾರಿ ವಹಿಸಿದ್ದ ಆರ್.ಅಶೋಕ್ ಕ್ಷೇತ್ರದವರು. ಆದ್ದರಿಂದ ಮೇಯರ್ ಪಟ್ಟ ಒಲಿಯಬಹುದಾಗಿದೆ.
ಎನ್.ನಾಗರಾಜು ಹೆಸರು ಪಟ್ಟಿಯಲ್ಲಿದೆ
ಜಯನಗರ ವಿಧಾನಸಭಾ ಕ್ಷೇತ್ರದ ಭೈರಸಂದ್ರ ವಾರ್ಡ್ನಲ್ಲಿ 6985 ಮತಗಳನ್ನು ಪಡೆದು ಜಯಗಳಿಸಿರುವ ಎನ್.ನಾಗರಾಜು ಅವರ ಹೆಸರು ಕೇಳಿಬರುತ್ತಿದೆ. ಹಿರಿಯ ಸದಸ್ಯರಾದ ನಾಗರಾಜು ಅವರು ಈ ಹಿಂದೆ ಆಡಳಿತ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 2010ರ ಚುನಾವಣೆಯಲ್ಲಿಯೂ ನಾಗರಾಜು ಅವರು ಈ ಕ್ಷೇತ್ರದಿಂದ ಜಯಗಳಿಸಿದ್ದರು.
ಕಾಡು ಮಲ್ಲೇಶ್ವರ ವಾರ್ಡ್ನ ಮಂಜುನಾಥ ರಾಜು
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಕಾಡು ಮಲ್ಲೇಶ್ವರ ವಾರ್ಡ್ನಿಂದ 8953 ಮತಗಳನ್ನು ಪಡೆದು ಜಯಗಳಿಸಿರುವ ಮಂಜುನಾಥ ರಾಜು ಅವರ ಹೆಸರು ಮುಂಚೂಣಿಯಲ್ಲಿದೆ. ಕಳೆದ ಬಾರಿ ಸಹ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಇವರು ಸ್ಥಾಯಿ ಸಮಿತಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ.