ಭೂ ಹಗರಣ: ಮಾಜಿ ಡಿಸಿಎಂ ಅಶೋಕ್ ವಿರುದ್ಧ ದೂರು
ಬೆಂಗಳೂರು, ನವೆಂಬರ್ 10: ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಬಗರ್ ಹುಕುಂ ಯೋಜನೆಯ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಮಾಜಿ ಡಿಸಿಎಂ, ಶಾಸಕ ಆರ್. ಅಶೋಕ್ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಕೆಪಿಸಿಸಿ ಸದಸ್ಯ ಎಂ.ಎ. ಸಲೀಂ ದೂರು ನೀಡಿದ್ದಾರೆ. ಆದರೆ ಇನ್ನೂ ಎಸಿಬಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ಹಾಕಿಲ್ಲ.
'1994ರಿಂದ 1997ರವರೆಗೆ ಎಂ. ಶ್ರೀನಿವಾಸ್ ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದು, 1998ರ ಬಳಿಕ ಶಾಸಕ ಅಶೋಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅರ್ಜಿ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕ ಮುಗಿದ ಬಳಿಕ ಬಂದ ಅರ್ಜಿಗಳನ್ನು ಸೇರ್ಪಡೆ ಮಾಡಲಾಗಿದೆ. ಅವೆಲ್ಲವೂ ಅಶೋಕ್ ಆಪ್ತರ ಅರ್ಜಿಗಳು' ಎಂದು ಆರೋಪಿಸಿದ್ದಾರೆ.
'ಅಶೋಕ್ ಸಮಿತಿ ಅಧ್ಯಕ್ಷರಾದ ಬಳಿಕ ವ್ಯಾಪಕ ಅಕ್ರಮ ನಡೆದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದಕ್ಕೆ ಹೆಚ್ಚಿನ ಬೆಂಬಲ ನೀಡಲಾಗಿದೆ. ಈ ಅಕ್ರಮಕ್ಕೆ ಕಂದಾಯ ಇಲಾಖೆ ಅಧಿಕಾರಿಗಳೇ ಮೂಲ ಕಾರಣಕರ್ತರು. ಈ ಸಂಬಂಧ ರಾಜ್ಯಪಾಲ, ಲೋಕಾಯುಕ್ತ, ಜಿಲ್ಲಾಧಿಕಾರಿ, ಬಿಎಂಟಿಎಫ್ ಮುಖ್ಯಸ್ಥರಿಗೆ 10 ವರ್ಷಗಳ ಹಿಂದೆಯೇ ದೂರು ಸಲ್ಲಿಸಲಾಗಿದೆ. ಅವರೂ ಅಕ್ರಮ ಬಯಲಿಗೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ' ಎಂದು ಸಲೀಂ ಹೇಳಿದ್ದಾರೆ.
ಸಾಮಾನ್ಯವಾಗಿ ಬಗರ್ ಹುಕುಂ ಜಮೀನನ್ನು ಆರ್ಥಿಕವಾಗಿ ಹಿಂದುಳಿದ ಹಾಗೂ ಬಡತನದ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಅದರೆ, ಅಶೋಕ್ ಆಪ್ತರಿಗೆ ಅಕ್ರಮವಾಗಿ ಭೂಮಿ ಮಂಜೂರಾಗಿದೆ.
2012ರಲ್ಲಿ ಗೃಹ ಸಚಿವರೂ ಆಗಿರುವ ಅಶೋಕ್ ಅವರ ಅಡಿಯಲ್ಲಿ ಬರುವ ಬೆಂಗಳೂರು ಮಹಾನಗರ ಕಾರ್ಯಪಡೆ(ಬಿಎಂಟಿಎಫ್) ಪೊಲೀಸರು ತಮ್ಮ ಇಲಾಖೆಯ ಸಚಿವ(ಅಶೋಕ್) ವಿರುದ್ಧವೇ ಎಫ್ ಐಆರ್ ದಾಖಲಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.