ಈಗಲೂ ರೈತನ ಮಗ, ಹೋಗುವಾಗಲೂ ರೈತನ ಮಗ: ದೇವೇಗೌಡ
ತಾವು ಇರುವವರೆಗೂ ಕೈಲಾದಷ್ಟು ಉತ್ತಮ ಕಾರ್ಯ ಮಾಡುವುದಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಿಳಿಸಿದರು.
ಬೆಂಗಳೂರು, ಮೇ 29: ''ನನ್ನ ಆಯುಷ್ಯ ಯಾವಾಗ ಮುಗಿಯುತ್ತದೋ ಗೊತ್ತಿಲ್ಲ. ಆದರೆ, ಇರುವವರೆಗೆ ಕೈಲಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ'' - ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ನಡೆದ 'ದೇವೇಗೌಡರ ಅಭಿನಂದನಾ ಸಮಾರಂಭ'ದಲ್ಲಿ ಮಾತನಾಡಿದ ಅವರು, ನಾನು ನಂಬಿರುವ ಕುಲದೇವರು ನನ್ನನ್ನು ಕೈ ಬಿಡುವುದಿಲ್ಲ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.[ದೇವೇಗೌಡರನ್ನು ಹಾಡಿ ಹೊಗಳಿದ ಸದಾನಂದ ಗೌಡ]
ಇದೇ ವೇಳೆ, ನಾನು ಹುಟ್ಟುವಾಗಲೂ ರೈತನ ಮಗ. ಈಗಲೂ ರೈತನಾಗಿಯೇ ಇದ್ದೇನೆ. ಹೋಗುವಾಗಲೂ ರೈತನ ಮಗನಾಗಿಯೇ ಹೋಗುತ್ತೇನೆ ಎಂದು ಅವರು ತಿಳಿಸಿದರು.
ತಮ್ಮ ಅಧಿಕಾರಾವಧಿಯ ಕೆಲ ಘಟನೆಗಳನ್ನು ನೆನಪು ಮಾಡಿಕೊಂಡ ಅವರು, ಮುಖ್ಯಮಂತ್ರಿಯಾಗಿದ್ದ ಬೆಂಗಳೂರಿನ ಕೆರೆಗಳನ್ನು ಸೈಟುಗಳಾಗಿ ಪರಿವರ್ತಿಸುವ ಪ್ರಸ್ತಾವನೆಯೊಂದು ನನ್ನ ಬಳಿಗೆ ಬಂದಿತ್ತು. ಆದರೆ, ನಾನು ಬೆಂಗಳೂರಿನ ಮುಂದಿನ ಪರಿಸ್ಥಿತಿಯನ್ನು ಊಹಿಸಿಕೊಂಡು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೆ.[ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ದೇವೇಗೌಡರಿಗೆ ಆಫರ್!]
ಆಗೆಲ್ಲಾ ನಮ್ಮ ಸರ್ಕಾರ, ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೆವು. ಆದರೂ, ಈಗ ಮಳೆ ಹೆಚ್ಚು ಸುರಿದರೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವುದನ್ನು ನೋಡಿದರೆ ಬೇಸರವಾಗುತ್ತದೆ ಎಂದು ತಿಳಿಸಿದರು.