ಕಡಕೊಳದಲ್ಲಿ ಕರಡಿ ದಾಳಿ: ತೀವ್ರವಾಗಿ ಗಾಯಗೊಂಡ ಮಹಿಳೆ
ಬಳ್ಳಾರಿ, ಸೆಪ್ಟೆಂಬರ್ 04: ಕೂಡ್ಲಿಗಿ ತಾಲೂಕಿನ ಕಡಕೊಳ ವೀಳ್ಯದೆಲೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಮ್ಮ(65) ಎಂಬ ಮಹಿಳೆ ಮೇಲೆ ತಾಯಿ ಕರಡಿ ಮತ್ತು ಎರಡು ಮರಿ ಕರಡಿಗಳು ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿವೆ.
ಗಾಯಾಳು ವಿಮ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಲಮ್ಮ ತಮ್ಮದೇ ಆದ ಸ್ವಂತ ವೀಳ್ಯದೆಲೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ, ಹಿಂಬದಿಯಿಂದ ಬಂದ ತಾಯಿ ಕರಡಿ ಮತ್ತು ಅಂದಾಜು ಒಂದು ವರ್ಷದ ಎರಡು ಮರಿ ಕರಡಿಗಳು ಈಕೆಯ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿವೆ.
ಮೈ ತುಂಬಾ ಕಾಲುಗಳಿಂದ ಗೀರಿ, ಆಘಾತಗೊಳಿಸಿದ್ದು, ಕರಡಿ ದಾಳಿಯಿಂದ ಕಂಗೆಟ್ಟ ಮಲ್ಲಮ್ಮ, ಗಟ್ಟಿಯಾಗಿ ಕೂಗಿಕೊಂಡಾಗ, ಅಕ್ಕಪಕ್ಕದ ಕೂಲಿಗಳು ಓಡಿಬಂದು, ಕರಡಿಗಳ ಮೇಲೆ ಕಲ್ಲುತೂರಿ, ಓಡಿಸಿ, ಗಾಯಾಳುವನ್ನು ಚಿಕ್ಕಜೋಗಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ವಿಮ್ಸ್ ಆಸ್ಪತ್ರೆಗೆ ದಾಖಲಿಸಲು, ಶಿಫಾರಸ್ಸು ಮಾಡಿದ್ದಾರೆ.

ಈ ಕುರಿತು ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ಮಂಜುನಾಥ್ ಒನ್ ಇಂಡಿಯಾ ಜೊತೆ ಮಾತನಾಡಿ, ಕರಡಿ ದಾಳಿ ನಡೆದ ಸ್ಥಳದಲ್ಲಿ ಒಂದು ವರ್ಷದ ಮರಿಯನ್ನು ಹಿಡಿದಿದ್ದೇವೆ. ಮತ್ತೊಂದು ಮರಿ ಹಾಗೂ ತಾಯಿ ಕರಡಿಗಾಗಿ ಕಾಯುತ್ತಿದ್ದೇವೆ.
ಗಾಯಾಳು ಪ್ರಸ್ತುತ ವಿಮ್ಸ್ಗೆ ದಾಖಲಾಗಿದ್ದಾರೆ. ಗಾಯಾಳು ಮಹಿಳೆಯ ಕುಟುಂಬದ ಸದಸ್ಯರು ಮತ್ತು ವೈದ್ಯರ ಜೊತೆಯಲ್ಲಿ ಸಂಪರ್ಕದಲ್ಲಿದ್ದೇನೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿರುವೆ' ಎಂದು ತಿಳಿಸಿದ್ದಾರೆ.












Click it and Unblock the Notifications