ಕೊಟ್ಟೂರು ದೇವಾಲಯಕ್ಕೆ ರಾಹುಲ್ ಗಾಂಧಿ ಭೇಟಿ?
ಬಳ್ಳಾರಿ, ಫೆಬ್ರವರಿ 02 : ಕರ್ನಾಟಕಕ್ಕೆ ಆಗಮಿಸುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳ್ಳಾರಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಟ್ಟೂರು ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆಯೇ?. ಕಳೆದ ಒಂದು ವಾರದಿಂದ ಕೊಟ್ಟೂರು ಜನರಲ್ಲಿ ಮತ್ತು ಶ್ರೀಕೊಟ್ಟೂರೇಶ್ವ ದೇವಾಲಯದ ಭಕ್ತರಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಭೀಮಾ ನಾಯಕ್ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಸಭೆಯೊಂದರಲ್ಲಿ ಮಾತನಾಡುವಾಗ, 'ಫೆಬ್ರವರಿ 10ರ ಶನಿವಾರ ಹೊಸಪೇಟೆಗೆ ಬರಲಿರುವ ರಾಹುಲ್ ಗಾಂಧಿ ಅವರನ್ನು ಕೊಟ್ಟೂರಿಗೆ ಕರೆತರಲು ಪ್ರಯತ್ನಿಸುತ್ತಿರುವೆ' ಎಂದು ಹೇಳಿಕೆ ನೀಡಿದ್ದಾರೆ.
'ರಾಹುಲ್ ಗಾಂಧಿ ಅವರನ್ನು ಕೊಟ್ಟೂರು ಪಟ್ಟಣಕ್ಕೆ ಕರೆಸಿ, ಶ್ರೀ ಕೊಟ್ಟೂರೇಶ್ವರನ ನೂತನ ರಥಕ್ಕೆ ಪೂಜೆ, ಶ್ರೀಗಳ ಪೂಜಾ ಮೂರ್ತಿಯ ದರ್ಶನ ಮಾಡಿಸುವ ಇಚ್ಛೆ ಇದೆ' ಎಂದು ಭೀಮಾ ನಾಯಕ್ ಹೇಳಿದ್ದಾರೆ.

ಫೆಬ್ರವರಿ 10 ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಜನರು ಕೊಟ್ಟೂರು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಈ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. ವಾಸ್ತವದಲ್ಲಿ ರಾಹುಲ್ ಗಾಂಧಿ ಅವರನ್ನು ಕೊಟ್ಟೂರು ಪಟ್ಟಣಕ್ಕೆ ಕರೆತರಲು ಸಾಧ್ಯವೇ? ಎನ್ನುವುದು ಅನೇಕರ ಪ್ರಶ್ನೆಯಾಗಿದೆ.
'ಹೊಸಪೇಟೆಯಿಂದ ಕೊಟ್ಟೂರು ತಲುಪಲು 60ಕಿ.ಮೀ.ರಸ್ತೆ ಮಾರ್ಗವಿದೆ. ರಸ್ತೆ ಮಾರ್ಗ ಸಾಧಾರಣವಾಗಿದ್ದು, ಮಾರ್ಗದಲ್ಲಿ ಬರುವುದಾದಲ್ಲಿ, ರಸ್ತೆ ದುರಸ್ತಿ ಕಾರ್ಯ ತುರ್ತಾಗಿ ನಡೆಯಬೇಕು. ಹೆಲಿಕಾಪ್ಟರ್ ಮೂಲಕ ಬಂದಲ್ಲಿ, ಹೆಲಿಪ್ಯಾಡ್ ಸಿದ್ಧಗೊಳ್ಳಬೇಕಿದೆ. ಯಾವುದಕ್ಕೂ ನಾವುಗಳು ಆಶಾಜೀವಿಗಳಾಗಿದ್ದೇವೆ' ಎನ್ನುತ್ತಾರೆ ಶಾಸಕರ ಬೆಂಬಲಿಗರು.
ಆದರೆ, ರಾಹುಲ್ ಗಾಂಧಿ ಭೇಟಿಯ ಸಂಪೂರ್ಣ ಆಗು ಹೋಗುಗಳ ವ್ಯವಸ್ಥೆಯ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಮೇಲಿದೆ. ಅವರಾಗಲೀ, ಪೊಲೀಸ್, ಕಾಂಗ್ರೆಸ್ ಮುಖಂಡರು ಈ ವರೆಗೂ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.












Click it and Unblock the Notifications