ಕೆಂಚನಗುಡ್ಡದ ಜಲರಾಶಿಯ ವೈಭವ ನೋಡಲು ಮುಗಿಬಿದ್ದ ಪ್ರವಾಸಿಗರು
ಬಳ್ಳಾರಿ, ಜುಲೈ.23: ನೀರಿನ ಏರಿಳಿತ, ರಭಸದ ಸದ್ದು, ನಿಶ್ಯಬ್ಧವನ್ನು ಬೇಧಿಸಿ ಝೇಂಕರಿಸುವ ಜುಳುಜುಳು ನಿನಾದ, ನೊರೆಯಾಗಿ ಹರಿಯುವ ನೀರನ್ನು ನೋಡಲು ಪ್ರಕೃತಿ ಪ್ರಿಯರು ಹಾತೊರೆಯುತ್ತಿರುತ್ತಾರೆ.
ಇದನ್ನೆಲ್ಲಾ ಕಣ್ತುಂಬಿಕೊಳ್ಳಲೆಂದೆ ಪ್ರವಾಸಿಗರು ಹಳ್ಳ-ಕೊಳ್ಳ, ಜಲಾಶಯಗಳಿಗೆ ಲಗ್ಗೆ ಇಡುತ್ತಾರೆ, ಪ್ರಕೃತಿಯಲ್ಲಿ ಮಿಂದೆದ್ದು ವಿಶ್ರಮಿಸುತ್ತಾರೆ.
ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಪ್ರದೇಶದಲ್ಲಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ, ಇಂದಿಗೂ ಸುಭದ್ರವಾಗಿರುವ 'ಚೆಕ್ಡ್ಯಾಂ' ತುಂಬಿ, ನೀರು ಡ್ಯಾಂನ ಮೇಲೆ ಹರಿಯುತ್ತಿದೆ.

ಡ್ಯಾಂ ಯುವಮನಸ್ಸುಗಳಿಗೆ, ಪ್ರಕೃತಿ ಪ್ರಿಯರಿಗೆ ಮಿಂದೆದ್ದು, ವಿಶ್ರಮಿಸಲು ಆಹ್ವಾನ ನೀಡುತ್ತಿದೆ.
ತುಂಗಭದ್ರಾ ಜಲಾಶಯದಿಂದ ಕಳೆದ ಗುರುವಾರ ಸಂಜೆ ನೀರು ಹರಿಬಿಟ್ಟ ಕಾರಣ ತುಂಗಭದ್ರಾ ನದಿಯ ಮೂಲಕ ನೀರು ಶುಕ್ರವಾರ ನಸುಕಿನಲ್ಲಿ ಕೆಂಚನಗುಡ್ಡ ಸೇರಿ, ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಚೆಕ್ಡ್ಯಾಂ ತುಂಬಿ, ಮೇಲ್ಮಟ್ಟದಲ್ಲಿ ಹರಿಯುತ್ತಿದೆ.

ಜಲರಾಶಿಯ ಈ ದೃಶ್ಯವನ್ನು ಕಣ್ಣಾರೆ ಅನುಭವಿಸಿ, ರಿಲ್ಯಾಕ್ಸ್ ಆಗಲಿಕ್ಕಾಗಿ ಸಿರುಗುಪ್ಪದ ಅನೇಕರು ಕೆಂಚನಗುಡ್ಡದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಕೆಂಚನಗುಡ್ಡದಲ್ಲಿ ವಸುದೇಂದ್ರ ತೀರ್ಥರ ಬೃಂದಾವನವೂ ಇದೆ. ಅಲ್ಲದೇ, ಇದು, ಸಿರುಗುಪ್ಪ ಮತ್ತು ಸುತ್ತಲಿನ ಪ್ರಕೃತಿ ಪ್ರಿಯರಿಗೆ ಪಿಕ್ ನಿಕ್ ಸ್ಪಾಟ್ ಕೂಡ ಹೌದು. ಸಿರುಗುಪ್ಪ ಪೊಲೀಸರು, ಈ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿದ್ದು, ನೀರಿಗಿಳಿಯುವ ಉತ್ಸಾಹಿಗಳನ್ನು ದಡದಲ್ಲಿಯೇ ತಡೆಯುತ್ತಿದ್ದಾರೆ.

ಆದರೂ ಅನೇಕ ಯುವಕರು ಈ ಸ್ಥಳಕ್ಕೆ ಶುಕ್ರವಾರ ಬೆಳಗ್ಗೆಯಿಂದಲೇ ಲಗ್ಗೆ ಹಾಕುತ್ತಿದ್ದಾರೆ.












Click it and Unblock the Notifications