Darshan Health: ದರ್ಶನ್ಗೆ ಜೈಲಿನಲ್ಲಿ ಚಿಕಿತ್ಸೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇಂದು ಬಳ್ಳಾರಿ ಜೈಲಿನಲ್ಲೇ ದರ್ಶನ್ಗೆ ವಿಮ್ಸ್ ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ. ನಟ ದರ್ಶನ್ಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡ ಕಾರಣ, ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ನಟ ದರ್ಶನ್ಗೆ ಬೆಡ್ ಮತ್ತು ದಿಂಬು ಕೊಡಬೇಕೆಂದು ವಕೀಲರು, ಕುಟುಂಬದವರು ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ನಿಯಮಗಳ ಕಾರಣದಿಂದ ಅಧಿಕಾರಿಗಳು ಬೆಡ್ ಕೊಡಲು ನಿರಾಕರಿಸಿದ್ದಾರೆ. ಇದರಿಂದ ದರ್ಶನ್ ನೆಲದಲ್ಲಿ ಮಲಗಬೇಕಾಗಿದ್ದು, ಬೆನ್ನು ನೋವು ಸಮಸ್ಯೆ ಹೆಚ್ಚಾಗಿದೆ.

ಬೆನ್ನು ನೋವಿನ ಜೊತೆಗೆ ಕೈ ನೋವು ಕೂಡ ಇರುವ ಕಾರಣ ವೈದ್ಯರು ದರ್ಶನ್ರ ಆರೋಗ್ಯ ತಪಾಸಣೆ ನಡೆಸಿದರು. ಬೆನ್ನು ನೋವು ಹೆಚ್ಚಾಗಿರುವ ಕಾರಣ ಎಂಆರ್ ಐ ಮಾಡಿಸುವಂತೆ ದರ್ಶನ್ಗೆ ವೈದ್ಯರು ಸಲಹೆ ಕೊಟ್ಟಿದ್ದಾರೆ. ಆದರೆ ನಟ ದರ್ಶನ್ ಎಂಆರ್ ಐ ಮಾಡಿಸಲು ನಿರಾಕರಿಸಿದ್ದು, ಬೆಂಗಳೂರಿಗೆ ಹೋದ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಎಂಆರ್ ಐ ಮಾಡಿಸಿಕೊಳ್ಳುವುದಾಗಿ ಹೇಳಿದ್ದು, ಸದ್ಯಕ್ಕೆ ಮಾತ್ರೆ ಕೊಡುವಂತೆ ಕೇಳಿದ್ದು, ನೋವು ನಿವಾರಣೆಗಾಗಿ 10 ದಿನಗಳವರೆಗೆ ದರ್ಶನ್ಗೆ ವೈದ್ಯರು ಮಾತ್ರೆಗಳನ್ನು ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಐಷಾರಾಮಿ ಜೀವನ
ನಟ ದರ್ಶನ್ ಹೊರಗಡೆ ಐಷಾರಾಮಿ ಜೀವನ ನಡೆಸಿದವರು. ಪ್ರತಿ ದಿನ ಜಿಮ್ ಮಾಡುತ್ತಿದ್ದ ಅವರು ಫಿಟ್ನೆಸ್ಗೆ ಆದ್ಯತೆ ಕೊಡುತ್ತಿದ್ದರು. ಈಗ ಜೈಲಿನ ಊಟಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿದ್ದು, ಜಿಮ್ ಮಾಡಲು ಸಮಸ್ಯೆಯಾಗುತ್ತಿರುವ ಕಾರಣ ಬೆನ್ನು ನೋವು ಕಾಣಿಸಿಕೊಂಡಿದೆ. ಮನೆ ಊಟಕ್ಕೆ ಮನವಿ ಮಾಡಿದ್ದರೂ, ಜೈಲಧಿಕಾರಿಗಳು ಮನೆ ಊಟ ಕೊಡಲು ನಿವಾರಿಸಿದ್ದಾರೆ. ಇದರಿಂದ ಕುಟುಂಬಸ್ಥರು ಪ್ರತಿಬಾರಿ ಭೇಟಿಗೆ ಬಂದಾಗ ಡ್ರೈಫ್ರೂಟ್ಸ್, ಹಣ್ಣುಗಳನ್ನು ತಂದುಕೊಡುತ್ತಿದ್ದಾರೆ.
ನಾಳೆ ಜಾಮೀನು ಅರ್ಜಿ ವಿಚಾರಣೆ
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 4 (ನಾಳೆ) ನಡೆಯಲಿದೆ. ಪದೇ ಪದೇ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದ್ದು ದರ್ಶನ್ಗೆ ಆತಂಕ ಹೆಚ್ಚಿಸಿದೆ. ನಾಳೆಯಾದರೂ ವಿಚಾರಣೆ ನಡೆದು ಜಾಮೀನು ಸಿಕ್ಕರೆ ಸಾಕು ಎಂದು ದರ್ಶನ್ ಕಾಯುತ್ತಿದ್ದಾರೆ.











Click it and Unblock the Notifications