Ballari Utsav 2023 : ಇದೇ ಮೊದಲ ಬಾರಿಗೆ ಬಳ್ಳಾರಿ ಉತ್ಸವ, ವಿಶೇಷತೆಗಳು
ಬಳ್ಳಾರಿ, ಡಿಸೆಂಬರ್ 20; ಬಳ್ಳಾರಿ ಮತ್ತು ವಿಜಯನಗರ ವಿಭಜನೆಗೊಂಡಿದೆ. ಹೊಸಪೇಟೆ ಕೇಂದ್ರಸ್ಥಾನವಾದ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಹೊಸ ಜಿಲ್ಲೆ ರಚನೆಯಾದ ಬಳಿಕ ಮೊದಲ ಬಾರಿಗೆ ಎರಡು ದಿನಗಳ 'ಬಳ್ಳಾರಿ ಉತ್ಸವ'ವನ್ನು ಆಯೋಜನೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ, ಶಾಸಕ ಸೋಮಶೇಖರ ರೆಡ್ಡಿ ಸಹ ಸಭೆಯಲ್ಲಿ ಉಪಸ್ಥಿತರಿದ್ದರು.
ಬಳ್ಳಾರಿ; ಜನವರಿಯಿಂದ ಭತ್ತ, ರಾಗಿ ಮತ್ತು ಜೋಳ ಖರೀದಿ ಕೇಂದ್ರ ಆರಂಭ
ಸಚಿವ ಬಿ. ಶ್ರೀರಾಮುಲು ಮಾತನಾಡಿ, "ಬಳ್ಳಾರಿ ಜಿಲ್ಲೆ ವಿಭಜನೆಯಾದ ನಂತರ, ಮೊದಲ ಬಾರಿಗೆ ಬಳ್ಳಾರಿ ಉತ್ಸವವನ್ನು ಜನವರಿ 21 ಮತ್ತು 22ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ಎರಡು ದಿನಗಳ ಬಳ್ಳಾರಿ ಉತ್ಸವವನ್ನು ಆಚರಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಒಂದೊಂದು ಜವಾಬ್ದಾರಿಯನ್ನು ತೆಗೆದುಕೊಂಡು ಅದ್ದೂರಿ ಆಚರಣೆಗೆ ಕ್ರಮ ಕೈಗೊಳ್ಳಬೇಕು" ಎಂದು ಸಚಿವರು ಸೂಚನೆ ನೀಡಿದರು.
ಬಳ್ಳಾರಿ; ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಆಹ್ವಾನ
ಬಳ್ಳಾರಿ ಮತ್ತು ವಿಜಯನಗರ ಒಂದೇ ಆಗಿದ್ದಾಗ 'ಹಂಪಿ ಉತ್ಸವ' ನಡೆಯುತ್ತಿತ್ತು. ಈಗ ಇದೇ ಮಾದರಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 'ಬಳ್ಳಾರಿ ಉತ್ಸವ'ವನ್ನು 2 ದಿನಗಳ ಕಾಲ ನಗರದ ಡಾ. ರಾಜ್ಕುಮಾರ್ ರಸ್ತೆಯ ಮುನಿಸಿಪಾಲ್ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುತ್ತದೆ.
Breaking: ವಿಜಯನಗರ ಜಿಲ್ಲೆಗೆ ಆನಂದ್ ಸಿಂಗ್ ಉಸ್ತುವಾರಿ ಸಚಿವ
ವಿಶೇಷತೆಗಳು; ಬಳ್ಳಾರಿ ಜಿಲ್ಲಾಡಳಿತ ಮೊದಲ ಬಾರಿಗೆ ನಡೆಯುತ್ತಿರುವ ಬಳ್ಳಾರಿ ಉತ್ಸವಕ್ಕೆ ಸಿದ್ಧತೆಗಳನ್ನು ನಡೆಸುತ್ತಿದೆ. ಜನವರಿ ಮೊದಲ ವಾರದಿಂದಲೇ ಶಾಲಾ-ಕಾಲೇಜುಗಳಲ್ಲಿ ಕ್ವಿಜ್, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಇನ್ನು ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಮಾತನಾಡಿ, "ತೋಟಗಾರಿಕೆ ಇಲಾಖೆ ವತಿಯಿಂದ ನೂತನ ಜಿಲ್ಲಾಡಳಿತ ಭವನದಲ್ಲಿ ಹೂಗಳ ಪ್ರದರ್ಶನ, ಮಹಾನಗರ ಪಾಲಿಕೆ ವತಿಯಿಂದ ಓಟಸ್ಪರ್ಧೆ, ಗಾಳಿಪಟ ಸ್ಪರ್ಧೆ, ವಾಟರ್ ಸ್ಪರ್ಧೆ, ರಂಗೋಲಿ ಸ್ಪರ್ಧೆಯನ್ನು ಆಯೋಜಿಸಬೇಕು" ಎಂದು ತಿಳಿಸಿದರು.
ಬಳ್ಳಾರಿ ಉತ್ಸವದಲ್ಲಿ ಲೇಸರ್ ಶೋ, ಕುಸ್ತಿ ಪಂದ್ಯಾವಳಿ, ಹಳ್ಳಿಗಳ ಎತ್ತಿನ ಬಂಡಿ ಉತ್ಸವ, ಆಹಾರ ಪ್ರದರ್ಶನ, ಸಿರಿಧಾನ್ಯಗಳ ಪ್ರದರ್ಶನ, ಮಕ್ಕಳ ಉತ್ಸವ, ಮಹಿಳಾ ಉತ್ಸವ ಆಯೋಜನೆ ಮಾಡಲಾಗುತ್ತಿದೆ. ನಗರದ ಕೋಟೆಗೆ ಲೈಟ್ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ.
ಯುವಕರಿಗೆ ಬಳ್ಳಾರಿ ಉತ್ಸವಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ನೀಡಲು ಮತ್ತು ಸಲಹೆಗಳನ್ನು ಸ್ವೀಕರಿಸಲು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಖಾತೆಗಳನ್ನು ತೆರೆಯಲಾಗುತ್ತದೆ.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಮತ್ತು ಕಂಪ್ಲಿ ಶಾಸಕ ಜೆ. ಎನ್. ಗಣೇಶ್ ಹಲವು ಸಲಹೆಗಳನ್ನು ನೀಡಿದರು.
ಹೊಸ ಜಿಲ್ಲೆ ಉದಯ; ಬಳ್ಳಾರಿ ಮತ್ತು ವಿಜಯನಗರವನ್ನು ವಿಭಾಗ ಮಾಡಿ ವಿಜಯನಗರ ಜಿಲ್ಲೆಯಾಗಿ ಮಾಡಲಾಗಿದೆ. ಕರ್ನಾಟಕದ 31ನೇ ಜಿಲ್ಲೆಯಾಗಿ 2021ರಲ್ಲಿ ವಿಜಯನಗರವನ್ನು ಘೋಷಣೆ ಮಾಡಿ ಸರ್ಕಾರ ಗೆಜೆಟ್ ಅಧಿಸೂಚನೆ ಪ್ರಕಟಿಸಿತು.
ವಿಜಯನಗರ ಜಿಲ್ಲೆಗೆ ಹೊಸಪೇಟೆ ಕೇಂದ್ರ ಸ್ಥಾನವಾಗಿದೆ. ಹೊಸಪೇಟೆ, ಕೂಡ್ಲಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ ತಾಲೂಕುಗಳು ಹೊಸ ಜಿಲ್ಲೆಗೆ ಸೇರಿವೆ.
ಬಳ್ಳಾರಿ ಮತ್ತು ವಿಜಯನಗರ ಒಟ್ಟಿಗೆ ಇದ್ದಾಗ ಹಂಪಿ ಉತ್ಸವ ಅದ್ದೂರಿಯಾಗಿ ನಡೆಯುತ್ತಿತ್ತು. ಈಗ ಹಂಪಿ ವಿಜಯನಗರಕ್ಕೆ ಸೇರಿರುವ ಕಾರಣ ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ 'ಬಳ್ಳಾರಿ ಉತ್ಸವ'ವನ್ನು ಆಯೋಜನೆ ಮಾಡಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಈಗ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ ಮತ್ತು ಸಂಡೂರು ತಾಲೂಕುಗಳಿವೆ. ಕಂಪ್ಲಿ ತಾಲೂಕನ್ನು ನೂತನವಾದ ವಿಜಯನಗರ ಜಿಲ್ಲೆಗೆ ಸೇರಿಸಬೇಕು ಎಂಬ ಮನವಿಯನ್ನು ಸರ್ಕಾರ ತಳ್ಳಿ ಹಾಕಿದೆ.
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನವೆಂಬರ್ 27ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲಾ ರಚನೆಗೆ ಅನುಮೋದನೆ ನೀಡಲಾಗಿತ್ತು. ಬಳಿಕ ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಲಾಗಿತ್ತು.