ಸಿಎಂ ಸಿದ್ದು ಕುರ್ಚಿ ಕಾಲು ಯಾರ ಕೈಲಿದೆ ಗೊತ್ತೆ?
ಬಳ್ಳಾರಿ, ಆ.19 : "ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿಯ ಒಂದು ಕಾಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೈಯಲ್ಲಿರುವುದರಿಂದ ಸಿದ್ದರಾಮಯ್ಯನವರಿಗೆ ಕುರ್ಚಿಯನ್ನು ಕಳೆದುಕೊಳ್ಳುವ ಭಯ ಆವರಿಸಿದೆ" ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಲೇವಡಿ ಮಾಡಿದ್ದಾರೆ.
ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಮಂಗಳವಾದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಓಬಳೇಶ್ ಪರವಾಗಿ ಮತಯಾಚನೆ ಮಾಡಲು ಆಗಮಿಸಿದ್ದ ಮಾಜಿ ಸಂಸದೆ ತೇಜಸ್ವಿನಿ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಳ್ಳಾರಿ ಚುನಾವಣಾ ಉಸ್ತುವಾರಿ ಡಿಕೆ ಶಿವಕುಮಾರ್ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.

ಬಳ್ಳಾರಿ ಜಿಲ್ಲೆಯ ಗಣಿಸಂಪತ್ತಿನ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಚುನಾವಣೆ ಹೆಸರಿನಲ್ಲಿ ಬಳ್ಳಾರಿಗೆ ಸ್ವಾರ್ಥ ರಾಜಕಾರಣ ಮಾಡಲು ಬಂದಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ಕನಕಪುರ, ರಾಮನಗರ, ಪ್ರದೇಶದ ನೈಸರ್ಗಿಕ ಸಂಪತ್ತನ್ನು ನುಂಗಿ ನೀರು ಕುಡಿದಿರುವ ಡಿ.ಕೆ.ಶಿವಕುಮಾರ್ ಅಕ್ರಮ ಕಲ್ಲು ಗಣಿಗಾರಿಕೆ ಮೂಲಕ ಸಾವಿರಾರು ಕೋಟಿ ರೂ. ಅಕ್ರಮ ಸಂಪತ್ತು ಗಳಿಸಿದ್ದಾರೆ ಎಂದು ದೂರಿದರು. [ಉಪ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು]
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿಯ ಒಂದು ಕಾಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೈಯಲ್ಲಿರುವುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿಎಂ ಮುಂದಾಗುತ್ತಿಲ್ಲ. ಡಿಕೆ ಶಿವಕುಮಾರ್ ಅಕ್ರಮದ ವಿರುದ್ಧ ಕ್ರಮ ತೆಗೆದುಕೊಂಡರೆ, ಸಿದ್ದರಾಮಯ್ಯನವರಿಗೆ ಕುರ್ಚಿಯನ್ನು ಕಳೆದುಕೊಳ್ಳುವ ಭಯವಿದೆ ಎಂದು ತೇಜಸ್ವಿನಿ ಅವರು ಲೇವಡಿ ಮಾಡಿದರು.
ಸತ್ತ ವ್ಯಕ್ತಿಗಳ ಹೆಸರಿನಲ್ಲೇ ಡಿನೋಟಿಫಿಕೇಶನ್ ಮಾಡಿಸಿದ್ದ ಕುಖ್ಯಾತಿಗೆ ಸಚಿವ ಶಿವಕುಮಾರ್ ಹೆಸರಾಗಿದ್ದಾರೆ ಎಂದು ವ್ಯಂಗ್ಯವಾಡಿದ ತೇಜಸ್ವಿನಿ ಅವರು, ಕನಕಪುರದಲ್ಲಿ ಶಿವಕುಮಾರ್ ಅವ್ಯಾವಹತವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಆದರೆ ಇದನ್ನು ತಡೆಯುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದರು.
ಅಂದಹಾಗೆ, ಆ.21ರಂದು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಮಂಗಳವಾರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಕಾಂಗ್ರೆಸ್ನಿಂದ ಎನ್.ವೈ.ಗೋಪಾಲಕೃಷ್ಣ ಮತ್ತು ಬಿಜೆಪಿಯಿಂದ ಓಬಳೇಶ್ ಚುನಾವಣೆಗೆ ಸ್ಪರ್ಧಿಸಿದ್ದಾರೆ.












Click it and Unblock the Notifications