ಹೊಸಪೇಟೆ-ಕೊಟ್ಟೂರು-ದಾವಣಗೆರೆ ರೈಲು ಸಂಚಾರಕ್ಕೆ ಒಪ್ಪಿಗೆ
ಬಳ್ಳಾರಿ, ಮಾರ್ಚ್ 14 : ಹೊಸಪೇಟೆ-ಕೊಟ್ಟೂರು-ದಾವಣಗೆರೆ ಭಾಗದ ಜನರ ಬಹು ವರ್ಷಗಳ ಬೇಡಿಕೆ ಈಡೇರಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ನಡೆಸಲು ನೈರುತ್ಯ ರೈಲ್ವೆ ಹಸಿರು ನಿಶಾನೆ ತೋರಿದೆ.
ನೈರುತ್ಯ ರೈಲ್ವೆ ವಲಯದ ಉಪ ಪ್ರಾದೇಶಿಕ ವ್ಯವಸ್ಥಾಪಕ ರಾಜೀಶ್ ಮೋಹನ್ ಹಗರಿಬೊಮ್ಮನಹಳ್ಳಿಯಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದರು. 'ಹೊಸಪೇಟೆ-ಕೊಟ್ಟೂರು-ದಾವಣಗೆರೆ ಮಾರ್ಗದಲ್ಲಿ ಜೂನ್ ತಿಂಗಳಿನಲ್ಲಿ ರೈಲು ಸಂಚಾರ ಆರಂಭವಾಗಲಿದೆ' ಎಂದರು.
'ರೈಲ್ವೆ ಮಾರ್ಗದಲ್ಲಿ ತಾಂತ್ರಿಕ ಪರೀಕ್ಷೆ ನಡೆಸಲಾಗುತ್ತಿದೆ. ತಾಂತ್ರಿಕವಾಗಿ ಮಾರ್ಗವು ಪ್ರಯಾಣಿಕರ ಸಂಚಾರಕ್ಕೆ ಸುರಕ್ಷಿತವಾಗಿದೆ. ಕೇಂದ್ರದ ಅಧಿಕಾರಿಗಳಿಗೆ ವರದಿ ಸಲ್ಲಿಸಿ, ರೈಲು ಸಂಚಾರಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ' ಎಂದು ಹೇಳಿದರು.

'ಮರಿಯಮ್ಮನಹಳ್ಳಿ-ಕೊಟ್ಟೂರು ಮಾರ್ಗದಲ್ಲಿಯ 35 ರೈಲ್ವೆ ಗೇಟ್ಗಳಲ್ಲಿ ಖಾಯಂ ನೌಕರರನ್ನು ನೇಮಕ ಮಾಡಬೇಕಿದೆ. ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಕುಡಿಯುವ ನೀರು, ವಿಶ್ರಾಂತ್ರಿ ಗೃಹ, ಶೌಚಾಲಯ ಹೀಗೆ ಇನ್ನಿತರ ಮೂಲ ಸೌಕರ್ಯಕಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗಿದೆ' ಎಂದರು.
ಗೂಡ್ಸ್ ರೈಲನ್ನು ಹೊಸಪೇಟೆಯಿಂದ ಹರಿಹರಕ್ಕೆ ಮಾತ್ರ ಓಡಿಸಲಾಗುತ್ತಿದೆ. ನಮ್ಮ ಭಾಗದಿಂದ ಮೆಕ್ಕೆಜೋಳ, ಜೋಳ, ರಾಗಿ, ತೊಗರಿ ಬೇಳೆ, ಭತ್ತ, ಅಲಸಂದೆ, ಮೆಣಸಿನಕಾಯಿ ಹೀಗೆ ಹತ್ತಾರು ಧಾನ್ಯಗಳನ್ನು ಲಾರಿಗಳ ಮೂಲಕ ಹೊರ ರಾಜ್ಯಗಳಿಗೆ ಕಳುಹಿಸುತ್ತಿದ್ದೇವೆ ಎಂದು ಹೇಳಿದ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ನ ಅಧ್ಯಕ್ಷ ಎಸ್.ಎಂ. ಚಂದ್ರಯ್ಯ, ನಮಗೂ ಸಹ ಗೂಡ್ಸ್ ರೈಲು ಸೇವೆ ಬಳಸಲು ಅನುಕೂಲ ಮಾಡಿಕೊಡಿ ಎಂದು ಮನವಿ ಸಲ್ಲಿಸಿದರು.












Click it and Unblock the Notifications