ಶ್ರೀರಾಮುಲುನಂತಹ ಪೆದ್ದನ ಜೊತೆಗೆ ಚರ್ಚೆ ಮಾಡುವ ಹುಂಬತನ ಇಲ್ಲ: ಸಿದ್ದರಾಮಯ್ಯ
ಬಳ್ಳಾರಿ, ಅಕ್ಟೋಬರ್ 15: ಕಾಂಗ್ರೆಸ್ ಪಕ್ಷ, ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಈ ದೇಶಕ್ಕಾಗಿ ಏನು ಮಾಡಿಲ್ಲ ಎಂಬ ಶ್ರೀರಾಮುಲು ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಸಿದ್ಧ. ಆದರೆ, ಶ್ರೀರಾಮುಲುನಂತಹ ಪೆದ್ದನ ಜೊತೆಗೆ ಚರ್ಚೆ ಮಾಡುವ ಹುಂಬತನದ ಕೆಲಸ ಮಾಡಲ್ಲ ಎಂದಿದ್ದಾರೆ.
ಬಳ್ಳಾರಿಗೆ ಭಾರತ್ ಜೋಡೋ ಯಾತ್ರೆ ಆಗಮಿಸಿದ ಹಿನ್ನಲೆಯಲ್ಲಿ ಶ್ರೀರಾಮುಲು ಸರಣಿ ಟ್ವೀಟ್ಗಳ ಮೂಲಕ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಟ್ವೀಟ್ ಮಾಡಿದ್ದರು. ಬಳ್ಳಾರಿಯಲ್ಲಿ ರಾಜಕೀಯವಾಗಿ ಮರುಹುಟ್ಟು ಪಡೆದಿದ್ದ ಸೋನಿಯಾ ಗಾಂಧಿಯವರಿಂದ ಜಿಲ್ಲೆಗೆ ಸಿಕ್ಕಿರುವ ಕೊಡುಗೆ ಏನು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ತಿಳಿಸಲಿ ಎಂದು ಪ್ರಶ್ನಿಸಿದ್ದರು.
ಕಾಂಗ್ರೆಸ್ ಪಕ್ಷ ತಂದುಕೊಟ್ಟ ಸ್ವಾತಂತ್ರ್ಯವನ್ನು ಬಿಜೆಪಿ ಇಂದು ಅನುಭವಿಸುತ್ತಿದ್ದಾರೆ: ಸಿದ್ದರಾಮಯ್ಯ
ಬಳ್ಳಾರಿ ಸಮಾವೇಶದಲ್ಲಿ ಮಾತನಾಡುವ ವೇಳೆ ಈ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, "ಸಚಿವ ಶ್ರೀರಾಮುಲು ಕಾಂಗ್ರೆಸ್ ಪಕ್ಷ ಮತ್ತು ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಈ ದೇಶಕ್ಕಾಗಿ ಏನು ಮಾಡಿಲ್ಲ ಎಂದಿದ್ದಾರೆ. ನಾನು ಶ್ರೀರಾಮುಲು ಅವರಿಗೆ ಇತಿಹಾಸ ನೆನಪಿಸಲು ಬಯಸುತ್ತೇನೆ. 1977ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆ ಮಾಡಿದ್ದು ಯಾರು ಗೊತ್ತಾ? ಇಂದು ಸಾವಿರಾರು ಜನರಿಗೆ ಉದ್ಯೋಗ, ಆ ಮೂಲಕ ಅನ್ನಕ್ಕೆ ದಾರಿ ಆಗಿದ್ದರೆ ಅದಕ್ಕೆ ಕಾರಣ ಶ್ರೀಮತಿ ಇಂದಿರಾ ಗಾಂಧಿ . ಸೋನಿಯಾ ಗಾಂಧಿ ಅವರು 1999ರಲ್ಲಿ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಲೋಕಸಭಾ ಸದಸ್ಯರಾದ ಮೇಲೆ 3,300 ಕೋಟಿ ರೂಪಾಯಿಯ ಕುಡಿತಿನಿ ವಿದ್ಯುತ್ ಯೋಜನೆ ಜಾರಿ ಮಾಡಿದ್ದರು," ತಿರುಗೇಟು ನೀಡಿದ್ದಾರೆ.
ಆದರೆ ಬಳ್ಳಾರಿಯ ಅಭಿವೃದ್ಧಿಗೆ ಶ್ರೀರಾಮುಲು ಅಥವಾ ಬಿಜೆಪಿಯ ಕೊಡುಗೆ ಏನು? ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 8 ವರ್ಷಗಳು ಕಳೆದಿದೆ, ಬಳ್ಳಾರಿಗೆ ಒಂದೇ ಒಂದು ರೂಪಾಯಿ ಉಪಯೋಗ ಆಗಿಲ್ಲ. ಶ್ರೀರಾಮುಲು ಚರ್ಚೆಗೆ ತಯಾರಾಗಿದ್ದಾರಂತೆ ಆದರೆ ಅವರಂಥ ಪೆದ್ದನ ಜೊತೆ ಚರ್ಚೆ ಮಾಡುವ ಹುಂಬತನದ ಕೆಲಸ ನಾವು ಮಾಡಲ್ಲ ಎಂದು ವ್ಯಂಗ್ಯವಾಡಿದರು.
ಬಳ್ಳಾರಿಯ ಅಕ್ರಮ ಗಣಿಗಾರಿಕೆಯಲ್ಲಿ ಲೂಟಿ ಹೊಡೆದಿದ್ದು ನಿಮ್ಮ ಸಾಧನೆ. ಇದಕ್ಕೆ ಕುಮ್ಮಕ್ಕು ಕೊಟ್ಟವರು ಯಾರು? ಈ ಅಕ್ರಮಗಳ ವಿರುದ್ಧ ಬೆಂಗಳೂರಿಂದ ಬಳ್ಳಾರಿಗೆ ನಾವು ಪಾದಯಾತ್ರೆ ಮಾಡಿದ ಮೇಲೆ ಜನಾರ್ಧನ ರೆಡ್ಡಿ ಜೈಲು ಸೇರಿದ್ದು. ಇಂದು ಕೂಡ ಅವರ ವಿರುದ್ಧ ಅನೇಕ ಕ್ರಿಮಿನಲ್ ಮೊಕದ್ದಮೆಗಳಿವೆ. ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕತೆ ಶ್ರೀರಾಮುಲುಗೆ ಇಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷ ಬಳ್ಳಾರಿಗೆ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಲೇಬೇಕು ಎಂದಿದಾರೆ ನಮ್ಮ ಪಕ್ಷದ ನಾಯಕರಾದ ಉಗ್ರಪ್ಪನವರನ್ನು ಕಳಿಸಿಕೊಡ್ತೇವೆ ತಯಾರಾಗಿ ಎಂದು ಸವಾಲೆಸೆದರು.
ಇಂದು ರಾಜ್ಯದ ಬಿಜೆಪಿ ಸರಕಾರವನ್ನು 40% ಕಮಿಷನ್ ಸರ್ಕಾರ ಎಂದು ಕರೆಯುತ್ತಿದ್ದಾರೆ. ಈ ಮಾತನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು ಇಲ್ಲಿನ ಸರಕಾರ ಪ್ರತಿ ಕಾಮಗಾರಿಗೆ 40% ಕಮಿಷನ್ ಕೇಳುತ್ತಿದೆ ಎಂದು ಆರೋಪ ಮಾಡಿದ್ದಾರೆ. ಪತ್ರ ಬರೆದು 1 ವರ್ಷ ಆಯಿತು, ನರೇಂದ್ರ ಮೋದಿ ಅವರು ಈ ವರೆಗೆ ಯಾವ ಕ್ರಮ ಕೈಗೊಂಡಿಲ್ಲ. ನಾ ಖಾವೂಂಗ, ನಾ ಖಾನೆದೂಂಗ ಎನ್ನುವ ಮೋದಿ ಅವರು ಈಗೆಲ್ಲಿದ್ದಾರೆ? ಇವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.