ಬಳ್ಳಾರಿಯ ನೂತನ ಎಸ್ಪಿಯಾಗಿ ಸೈದುಲ್ಲಾ ಅದಾವತ್; ಅಧಿಕಾರ ಹಸ್ತಾಂತರದ ಹೈಡ್ರಾಮಾ
ಬಳ್ಳಾರಿ, ಸೆಪ್ಟೆಂಬರ್ 2: ನೂತನ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೈದುಲ್ಲಾ ಅದಾವತ್ ಅವರು ಇಂದು ಸಂಜೆ ಅಧಿಕಾರ ಸ್ವೀಕರಿಸಿದರು. ಬೆಳಿಗ್ಗೆ 10 ಗಂಟೆಗೆ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ನಿರ್ಗಮಿತ ಎಸ್ಪಿ ಸಿ.ಕೆ.ಬಾಬಾ ಅವರು ಅಧಿಕಾರ ಹಸ್ತಾಂತರಿಸಲು ವಿಳಂಬಧೋರಣೆ ತೋರಿದ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸಂಜೆ ನಡೆಯಿತು.
Recommended Video
ಇಂದು ಬೆಳಿಗ್ಗೆಯೇ ಅಧಿಕಾರ ಸ್ವೀಕಾರಕ್ಕೆ ಸೈದುಲ್ ಅದಾವತ್ ಅವರು ಬಳ್ಳಾರಿಯ ಜಿಮ್ ಖಾನಾದಲ್ಲಿ ಕಾಯುತ್ತಾ ಕುಳಿತಿದ್ದರು. ಆದರೆ, ಎಸ್ಪಿ ಸಿ.ಕೆ.ಬಾಬಾ ಅವರು ಎಸ್ಪಿ ವೃತ್ತದಲ್ಲಿರುವ ತಮ್ಮ ನಿವಾಸದಲ್ಲಿಯೇ ಇದ್ದರು. ಮಧ್ಯಾಹ್ನವಾದರೂ ಅವರು ಪೊಲೀಸ್ ಜಿಮ್ ಖಾನ್ ಹತ್ತಿರ ಸುಳಿಯಲಿಲ್ಲ.
ಅಧಿಕಾರ ಹಸ್ತಾಂತರದ ಹೈಡ್ರಾಮಾ: ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲು ಆಗಮಿಸಿದ ಸೈದುಲ್ಲಾ ಅದಾವತ್ ಹಾಗೂ ನಿರ್ಗಮಿತ ಎಸ್ಪಿ ಸಿ.ಕೆ.ಬಾಬಾ ಅವರ ನಡುವೆ ಅಧಿಕಾರ ಹಸ್ತಾಂತರದ ಹೈಡ್ರಾಮಾವೇ ನಡೆಯಿತು. ಆಗಸ್ಟ್ 27ರಂದು ಸಿ.ಕೆ. ಬಾಬಾ ಅವರಿಗೆ ವರ್ಗಾವಣೆ ಆದೇಶವಾಗಿತ್ತು. ಅಂದು ಸಂಜೆಯೇ ಆ ಆದೇಶವನ್ನು ತಡೆ ಹಿಡಿಯಲಾಗಿತ್ತು ಎನ್ನಲಾಗುತ್ತಿದೆ. ಬಳಿಕ ಮತ್ತೊಮ್ಮೆ ಆದೇಶವನ್ನು ಹಿಂಪಡೆಯಲಾಗಿತ್ತು.

ಅಂದಿನಿಂದ ಇಂದಿನವರೆಗೂ ಬಾಬಾ ಅವರು ಅಧಿಕಾರ ಹಸ್ತಾಂತರ ಮಾಡಲು ಹಿಂದೇಟು ಹಾಕಿದ್ದರು. ಅಧಿಕಾರ ಹಸ್ತಾಂತರ ಮಾಡಲು ಜನಪ್ರತಿನಿಧಿಗಳ ಮೌಖಿಕ ಆದೇಶಕ್ಕೆ ಬಾಬಾ ಕಾದು ಕುಳಿತಿದ್ದರು. ಕೊನೆಗೂ ಜನಪ್ರತಿನಿಧಿಗಳಿಂದ ಯಾವುದೇ ಮೌಖಿಕ ಆದೇಶ ಬಾರದ ಕಾರಣ ಸೈದುಲ್ಲಾ ಅದಾವತ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಎಲ್ಲರಿಗೂ ಆಲ್ ದಿ ಬೆಸ್ಟ್ ಹೇಳಿ ಎಸ್ಪಿ ಕಚೇರಿಯಿಂದ ಹೊರ ನಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಎಸ್ಪಿ ಸೈದುಲ್ಲಾ ಅದಾವತ್, ಈ ಜಿಲ್ಲೆಯ ಎಸ್ಪಿಯನ್ನಾಗಿ ಆಗಸ್ಟ್ 26ರಂದೇ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಾನು ಈ ದಿನ ಅಧಿಕಾರ ಸ್ವೀಕರಿಸಿರುವೆ. ನನಗೆ ಈ ಜಿಲ್ಲೆಯ ಎಸ್ಪಿಯಾಗಿ ಬಂದಿರುವುದು ಹೆಮ್ಮೆ ಎನಿಸುತ್ತಿದೆ. ವಿಜಯನಗರ ಸಾಮ್ರಾಜ್ಯದ ಗತವೈಭವದ ಇತಿಹಾಸ ಹೊಂದಿರುವ ಈ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ" ಎಂದು ತಿಳಿಸಿದರು.












Click it and Unblock the Notifications