ಲೋಡ್ ಶೆಡ್ಡಿಂಗ್; ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ಸಿಹಿಸುದ್ದಿ
ಬಳ್ಳಾರಿ, ನವೆಂಬರ್ 02: ನೈಋತ್ಯ ಮುಂಗಾರು ಮಳೆಯ ಕೊರೆಯ ಕಾರಣ ಕರ್ನಾಟಕದ ವಿವಿಧ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಡ್ಯಾಂಗಳ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡುವ ಕಾರಣ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಆದ್ದರಿಂದ ಕರ್ನಾಟಕದಲ್ಲಿ ಬೇಸಿಗೆ ಆರಂಭಕ್ಕೂ ಮೊದಲೇ ಲೋಡ್ ಶೆಡ್ಡಿಂಗ್ ಆರಂಭವಾಗಿದೆ.
ಈ ಬಾರಿಯ ಲೋಡ್ ಶೆಡ್ಡಿಂಗ್ ಪರಿಣಾಮ ಉದ್ಯಮಗಳ ಮೇಲೆ ಉಂಟಾಗಿದೆ. ಜನವರಿ ಬಳಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಲಿದೆ? ಎಂಬುದು ಸದ್ಯ ಅಂದಾಜಿಗೆ ಸಿಗದಾಗಿದೆ. ಅಕ್ಟೋಬರ್ ತಿಂಗಳ ಕೆಲವು ದಿನಗಳ ಕಾಲ ಆನ್ಶೆಡ್ಯೂಲ್ಡ್ ಲೋಡ್ ಶೆಡ್ಡಿಂಗ್ ಕೈಗೊಂಡ ಕಾರಣ, ರೈತರು, ಉದ್ಯಮಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಲೋಡ್ ಶೆಡ್ಡಿಂಗ್ ಪರಿಣಾಮ ಬಳ್ಳಾರಿಯ ಜೀನ್ಸ್ ಉದ್ಯಮ ಆತಂಕ ಎದುರಿಸುವಂತೆ ಆಗಿತ್ತು. ಕಲಬುರಗಿ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಲಿಂಗಣ್ಣನವರ್ ಜೀನ್ಸ್ ಉದ್ಯಮಕ್ಕೆ ಸಿಹಿಸುದ್ದಿಯನ್ನು ನೀಡಿದ್ದಾರೆ.
ಉದ್ಯಮಗಳಿಗೆ ಅಭಯ; "ನಿರಂತರ ವಿದ್ಯುತ್ ಪೂರೈಕೆ ಮಾಡಲು ಜೆಸ್ಕಾಂ ಕಂಪನಿಯು ಕ್ರಮಕೈಗೊಂಡಿದೆ ಹಾಗೂ ಮುಂದಿನ ದಿನಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ರವೀಂದ್ರ ಕರಿಲಿಂಗಣ್ಣನವರ್ ತಿಳಿಸಿದ್ದಾರೆ.
ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ನಿರಂತರ ವಿದ್ಯುತ್ ಪೂರೈಕೆಗಾಗಿ ಅವರು ಜೀನ್ಸ್ ಅಪೆರಲ್ ಪಾರ್ಕ್ಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ಆಲಿಸಿದರು. ಜೀನ್ಸ್ ಉದ್ಯಮಿಗಳ ಪರವಾಗಿ ಉಪಾಧ್ಯಕ್ಷ ಮಲ್ಲಿಕಾರ್ಜುನ ತೊಂದರೆಗಳನ್ನು ವಿವರಿಸಿದರು.
ರವೀಂದ್ರ ಕರಿಲಿಂಗಣ್ಣನವರ್ ಅವರ ಜೊತೆ ಜೆಸ್ಕಾಂ ಕಂಪನಿಯ ತಾಂತ್ರಿಕ ನಿರ್ದೇಶಕ ಆರ್.ಡಿ.ಚಂದ್ರಶೇಖರ್, ಬಳ್ಳಾರಿ ಗ್ರಾಮೀಣ ವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರರಾದ ಜೆ.ರಂಗನಾಥ ಬಾಬು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉದ್ಯಮಿಗಳ ಜೊತೆ ನಡೆದ ಸಭೆಯಲ್ಲಿ ಉಪಸ್ಥಿತರಿದ್ದರು.
ಬಳ್ಳಾರಿ ಕರ್ನಾಟಕದಲ್ಲಿ ಜೀನ್ಸ್ ಹಬ್ ಎಂದೇ ಖ್ಯಾತಿಗಳಿಸಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆ, ರಫ್ತು ದರ ಹೆಚ್ಚಳ ಮುಂತಾದ ಸಮಸ್ಯೆಗಳಿಗೆ ಸಿಲುಕಿದ್ದ ಜೀನ್ಸ್ ಉದ್ಯಮಕ್ಕೆ ಈ ಬಾರಿ ಲೋಡ್ ಶೆಡ್ಡಿಂಗ್ ಆತಂಕ ತಂದೊಡ್ಡಿತ್ತು. ಅನಿಯಮಿತ ಲೋಡ್ ಶೆಡ್ಡಿಂಗ್ನಿಂದ ದಿನಕ್ಕೆ 300 ರೂ. ದುಡಿಯುವ ಕಾರ್ಮಿಕರಿಗೂ ಸಹ ಸಂಕಷ್ಟ ಉಂಟಾಗಿತ್ತು.
ಜೀನ್ಸ್ ಉದ್ಯಮ ನಂಬಿಕೊಂಡು ಸುಮಾರು 60 ರಿಂದ 80 ಸಾವಿರ ಕುಟುಂಬಗಳು ಜೀವನ ನಡೆಸುತ್ತಿವೆ ಎಂದು ಅಂದಾಜಿಸಲಾಗಿದೆ. ಉದ್ಯಮದ ವಿವಿಧ ವಿಭಾಗದಲ್ಲಿ ಪ್ರತಿದಿನ ಸಾವಿರಾರು ಜನರು ಕೆಲಸ ಮಾಡುತ್ತಾರೆ. ಆದರೆ ಲೋಡ್ ಶೆಡ್ಡಿಂಗ್ ಪರಿಣಾಮ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ಈಗ ಅಧಿಕಾರಿಗಳ ಅಭಯ ಉದ್ಯಮಿಗಳ ಆತಂಕವನ್ನು ಸ್ಪಲ್ಪಮಟ್ಟಿಗೆ ಕಡಿಮೆ ಮಾಡಿದೆ.
ದಿನಕ್ಕೆ 5-6 ಗಂಟೆ ಲೋಡ್ ಶೆಡ್ಡಿಂಗ್ ಆದರೆ ಜೀನ್ಸ್ ಉದ್ಯಮದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಪ್ರತಿದಿನ ದುಡಿಯುವ ಹಣದಲ್ಲಿ ಕಡಿಮೆಯಾಗುತ್ತದೆ. ವಿದ್ಯುತ್ ಕಡಿತಕ್ಕೆ ಸಮಯ ನಿಗದಿ ಮಾಡಬೇಕು ಎಂದು ಕಾರ್ಮಿಕರು ಸರ್ಕಾರವನ್ನು ಆಗ್ರಹಿಸಿದ್ದರು. ಉದ್ಯಮಿಗಳು ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದರು.
ಸರ್ಕಾರ ಮುಂದಿನ ಬಜೆಟ್ನಲ್ಲಿ ಬಳ್ಳಾರಿಯಲ್ಲಿ ಮತ್ತೊಂದು ಜೀನ್ಸ್ ಪಾರ್ಕ್ ಮಾಡಲು ಘೋಷಣೆ ಮಾಡಲಿದೆ ಎಂಬ ಸುದ್ದಿ ಇದೆ. ಆದರೆ ಈ ವರ್ಷ ಉದ್ಯಮ ಲೋಡ್ ಶೆಡ್ಡಿಂಗ್ ಪರಿಣಾಮ ತೊಂದರೆ ಅನುಭವಿಸುತ್ತಿದೆ. ಗ್ಯಾರಂಟಿ ನೀಡುವ ಭರದಲ್ಲಿ ಉದ್ಯಮಿಗಳಿಗೆ ನಷ್ಟ ಮಾಡಬೇಡಿ ಎಂದು ಸರ್ಕಾರಕ್ಕೆ ಉದ್ಯಮಿಗಳು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸರ್ಕಾರ ಜನರಿಗೆ ಅಭಯ ನೀಡುತ್ತಿದೆ. ಬೇಸಿಗೆಯಲ್ಲಿ ರಾಜ್ಯದ ಪರಿಸ್ಥಿತಿ ಏನಾಗಲಿದೆ? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications