ಬಳ್ಳಾರಿಯಲ್ಲಿ ಕಾರು ಅಪಘಾತ; ಕಾರಿನಲ್ಲಿದ್ದುದು ಆರ್ ಅಶೋಕ್ ಮಗ?
Recommended Video
ಬಳ್ಳಾರಿ, ಫೆಬ್ರವರಿ 13: ಬಳ್ಳಾರಿಯಲ್ಲಿ ಸೋಮವಾರ ನಡೆದಿದ್ದ ಅಪಘಾತದಲ್ಲಿ ಸ್ಥಳದಲ್ಲೇ ಪಾದಚಾರಿ ಸೇರಿದಂತೆ ಇಬ್ಬರು ಸಾವಿಗೀಡಾದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಪ್ರಭಾವಿ ನಾಯಕರೊಬ್ಬರ ಮಗ ಈ ಕಾರಿನಲ್ಲಿದ್ದರು ಎಂಬ ಕುರಿತು ಎರಡು ದಿನಗಳಿಂದ ಚರ್ಚೆಯೂ ನಡೆದಿತ್ತು. ಇದೀಗ ಆ ಕಾರಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಪುತ್ರ ಶರತ್ ಇದ್ದರು ಎಂಬ ವಿಚಾರ ಪ್ರಸ್ತಾಪವಾಗಿದೆ.
ಬಳ್ಳಾರಿಯಲ್ಲಿ ನಡೆದ ಈ ಅಪಘಾತದ ಸುತ್ತ ಅನುಮಾನಗಳು ಹುಟ್ಟಿಕೊಂಡಿತ್ತು. ಅಪಘಾತವಾದ ಕಾರಿನಲ್ಲಿ ಪ್ರಭಾವಿ ನಾಯಕನ ಮಗನಿದ್ದು, ಆತನನ್ನು ಅಪಘಾತವಾಗುತ್ತಿದ್ದಂತೆ ತಪ್ಪಿಸಿಕೊಳ್ಳುವಂತೆ ಮಾಡಿದ್ದಾರೆ, ಪೊಲೀಸರ ನೆರವಿನೊಂದಿಗೆ ಎಸ್ಕೇಪ್ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೇ ಸೋಮವಾರ ಈ ಅಪಘಾತ ನಡೆದಿದ್ದು, ಮೂರು ದಿನಗಳ ನಂತರ ವಿಚಾರ ಚರ್ಚೆಗೆ ಬಂದಿದೆ.
KA-05 MW-0357 ನಂಬರಿನ ಕಾರು
KA-05 MW-0357 ಕಾರಿನ ನಂಬರ್ ಮರ್ಸಿಡಿಸ್ ಬೆಂಜ್ ಕಾರ್ ಇದಾಗಿದೆ. ಹಂಪಿ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮೋಜು ಮಸ್ತಿ ಮಾಡಿಕೊಂಡು ಸೋಮವಾರ ಬೆಂಗಳೂರಿನ ಕಡೆಗೆ ಐದು ಜನರಿದ್ದ ಬೆಂಜ್ ಕಾರು ಹೊಸಪೇಟೆಯ ಹೊರವಲಯದಲ್ಲಿ ಇರುವ ಮರಿಯಮ್ಮನಹಳ್ಳಿ ಮಾರ್ಗವಾಗಿ ಪಯಣಿಸುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ.
ಪ್ರಭಾವಿ ನಾಯಕರ ಮಗನ ಕಾರು ಅಪಘಾತ; ಬಳ್ಳಾರಿಯಲ್ಲಿ ಇಬ್ಬರ ಸಾವು
ಮತ್ತೊಂದು ಕಾರಿನಲ್ಲಿ ಗಾಯಾಳು ಆಸ್ಪತ್ರೆಗೆ
ಕಾರು ಅಪಘಾತಕ್ಕೀಡಾದ ಸಮಯದಲ್ಲಿ ಗಾಯಗೊಂಡ ಶರತ್ ನನ್ನು ಮತ್ತೊಂದು ಕಾರಿನಲ್ಲಿ ಕರೆದುಕೊಂಡು ಬರಲಾಗಿದೆ ಎಂದು ತಿಳಿದುಬಂದಿತ್ತು. ಆ ಸಮಯದಲ್ಲಿ ಅಲ್ಲೇ ಸ್ಥಳೀಯ ಆಸ್ಪತ್ರೆಗೆ ಮೊದಲು ಕರೆದುಕೊಂಡು ಹೋಗಲಾಗಿದೆ. ತಲೆಗೆ ಪೆಟ್ಟು ಬಿದ್ದಿದ್ದು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ. ಎಫ್ ಐ ಆರ್ ನಲ್ಲಿ ಕಾರು ಚಾಲಕನ ಹೆಸರನ್ನು ರಾಹುಲ್ ಎಂದು ಉಲ್ಲೇಖಿಸಲಾಗಿದೆ.
ಟೀ ಕುಡಿಯುತ್ತ ನಿಂತಿದ್ದವನಿಗೆ ಗುದ್ದಿದ ಕಾರು
ಅದೇ ಮಾರ್ಗದಲ್ಲಿ ತನ್ನ ಬೈಕ್ ಪಂಚರ್ ಆದ ಕಾರಣ ಪಕ್ಕದ ಹೋಟೆಲ್ ಒಂದರಲ್ಲಿ ಟೀ ಕುಡಿಯುತ್ತ ನಿಂತಿದ್ದ ಮರಿಯಮ್ಮನ ಹಳ್ಳಿಯ ರವಿ ನಾಯಕ್ (21) ಎಂಬ ಯುವಕನ ಮೇಲೆ ಕಾರ್ ಹರಿದು 200 ಮೀಟರ್ ಗಳಷ್ಟು ದೂರ ಯುವಕನ್ನು ತಳ್ಳಿಕೊಂಡು ಹೋಗಿ ರಸ್ತೆ ಪಕ್ಕದಲ್ಲಿ ಪಲ್ಟಿ ಆಗಿದೆ. ಹೀಗಾಗಿ ರವಿ ನಾಯಕ್ ಕಾರ್ ಕೆಳಗೆ ಸಿಲುಕಿ ಸಾವಿಗೀಡಾಗಿದ್ದಾನೆ. ಕಾರ್ ಚಾಲನೆ ಮಾಡುತಿದ್ದ ಸಚಿನ್ ಎಂಬ ಯುವಕ ಸಹ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ. ಆದರೆ ಈ ಕುರಿತು ಮೃತಪಟ್ಟವನ ಮನೆಯವರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಬೆಂಗಳೂರಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರಿನಿಂದ ಸರಣಿ ಅಪಘಾತ
ಅಪಘಾತವಾದ ಆ ಕಾರು ಯಾರದ್ದು?
ಅಪಘಾತವಾದ ಕಾರು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ. ಅತೀವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ್ದು ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ಕಾರಿಗೂ, ಅಪಘಾತಕ್ಕೂ ನಮಗೂ ಸಂಬಂಧ ಇಲ್ಲ ಎಂದು ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.