ಬಳ್ಳಾರಿಯಲ್ಲಿ ಕಾಂಗ್ರೆಸ್ ಸಮಾವೇಶ, 2 ಲಕ್ಷ ಜನರ ನಿರೀಕ್ಷೆ
ಬಳ್ಳಾರಿ, ಫೆಬ್ರವರಿ 08 : ರಾಹುಲ್ ಗಾಂಧಿ ಸಮಾವೇಶಕ್ಕೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಫೆ.10 ರ ಶನಿವಾರ ಹೊಸಪೇಟೆಯ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ತಾಲೂಕು ಕ್ರೀಡಾಂಗಣದಲ್ಲಿ 100*40 ಅಡಿಯ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. 1.25 ಲಕ್ಷ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. 45ಕ್ಕೂ ಹೆಚ್ಚು ಎಲ್ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ.
ಹೊಸಪೇಟೆಯಲ್ಲಿ ರಾಹುಲ್ ಸಮಾವೇಶ, ವಿಶೇಷತೆಗಳೇನು?
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಈ ಕುರಿತು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದಾರೆ. 'ಹೊಸಪೇಟೆಯ ನಾಲ್ಕು ದಿಕ್ಕುಗಳಲ್ಲೂ ವಾಹನಗಳ ನಿಲುಗಡೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಗಳನ್ನು ಮಾಡಲಾಗಿದೆ. ಜನರು ಸಭಾಂಗಣಕ್ಕೆ ಬರಲು ಮತ್ತು ಹೊರ ಹೋಗಲು 8 ದ್ವಾರಗಳನ್ನು ನಿರ್ಮಿಸಲಾಗಿದೆ' ಎಂದು ಹೇಳಿದರು.
'ರಾಹುಲ್ ಗಾಂಧಿ ಭಾಷಣವನ್ನು ಸ್ಪಷ್ಟವಾಗಿ ಕೇಳಲು ಅನುಕೂಲವಾಗುವಂತೆ ಕನಿಷ್ಠ ಒಂದು ಕಿಲೋ ಮೀಟರ್ ದೂರ ತಲುಪುವಂತಹ ಮೈಕ್ಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ 2 ಲಕ್ಷ ಜನರು ಸೇರುವ ನಿರೀಕ್ಷೆ ಇದೆ' ಎಂದು ಸಂತೋಷ್ ಲಾಡ್ ತಿಳಿಸಿದರು.
ರಾಹುಲ್ ಗಾಂಧಿ ರಾಜ್ಯ ಪ್ರವಾಸ : ಕಾರ್ಯಕ್ರಮಗಳ ಪಟ್ಟಿ
ಪಾರ್ಕಿಂಗ್ ವ್ಯವಸ್ಥೆ : ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಕಡೆಯಿಂದ ಆಗಮಿಸುವ ವಾಹನಗಳಿಗೆ ಹರಿಹರ ರಸ್ತೆಯಲ್ಲಿ ಮುರ್ನೀ ಮಸೀದಿ ಹತ್ತಿರ, ಎಪಿಎಂಸಿ ಮಾರುಕಟ್ಟೆ, ಶ್ರೀಗುರು ಪಿಯು ಕಾಲೇಜ್, ನ್ಯಾಷನಲ್ ಕಾಲೇಜ್ ಆವರಣ, ಸಂಚಾರಿ ಪೊಲೀಸ್ ಠಾಣೆ ಎದುರು ಹಾಗೂ ರಾಯರ ಕೆರೆ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿ, ಕಂಪ್ಲಿ, ಸಿರುಗುಪ್ಪ ಕಡೆಯ ವಾಹನಗಳಿಗೆ ಹೊಸಪೇಟೆಯ ಹೊರ ವಲಯದ ರಿಂಗ್ ರೋಡ್ ನಲ್ಲಿ ಇರುವ ಭಟ್ರಹಳ್ಳಿ ಆಂಜನೇಯ ಗುಡಿ, ಬಳ್ಳಾರಿ ರಸ್ತೆಯಲ್ಲಿ ಇರುವ ಭಾಗ್ಯೋದಯ ಶೋ ರೂಂ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಸಂಡೂರು, ತೋರಣಗಲ್ಲು, ಬಳ್ಳಾರಿ ಕಡೆಯಿಂದ ಆಗಮಿಸುವ ವಾಹನಗಳಿಗೆ ಲಿಟಲ್ ಪ್ಲವರ್ ಆಂಗ್ಲ ಮಾಧ್ಯಮ ಶಾಲೆ ಎದುರು ಪಾರ್ಕಿಂಗ್ ವ್ಯವಸ್ಥೆ ಇದೆ. ವಾಹನಗಳು ಅಂಬೇಡ್ಕರ್ ವೃತ್ತದ ಹತ್ತಿರ ಕಾರ್ಯಕರ್ತರನ್ನು ಇಳಿಸಬೇಕಿದೆ.
ರಾಹುಲ್ಗಾಂಧಿ ಅವರು ಹೊಸಪೇಟೆ, ಕೊಪ್ಪಳ, ಯಾದಗಿರಿ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಮೊದಲ ದಿನ ಕೊಪ್ಪಳ ಜಿಲ್ಲೆಯ ಕುಕನೂರುನ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.