ನಿಟ್ಟುಸಿರುಬಿಟ್ಟ ಬಳ್ಳಾರಿ ಜನ; ಜಿಲ್ಲೆಯಲ್ಲೀಗ ಒಂದೇ ಒಂದು ಕಂಟೈನ್ಮೆಂಟ್ ಝೋನ್
ಬಳ್ಳಾರಿ, ಮೇ 04: ಲಾಕ್ ಡೌನ್ ನಲ್ಲಿದ್ದ ಬಳ್ಳಾರಿಯ ಜನತೆ ಈಗ ನಿಟ್ಟುಸಿರುಬಿಡುವಂತಾಗಿದೆ. ಒಂದು ಕಡೆ ಸರ್ಕಾರ ಲಾಕ್ ಡೌನ್ ನಿಯಮ ಸಡಿಲಿಕೆ ಮಾಡಿದ್ದರೆ, ಇನ್ನೊಂದು ಕಡೆ ಜಿಲ್ಲೆಯಲ್ಲಿ ಒಂದೇ ಒಂದು ಕಂಟೈನ್ಮೆಂಟ್ ಝೋನ್ ಉಳಿದುಕೊಂಡಿದೆ.
ಜಿಲ್ಲೆಯಲ್ಲಿ ಈವರೆಗೆ 13 ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿದ್ದವು. ಅದರಲ್ಲಿ ಹೊಸಪೇಟೆ ನಗರವೊಂದರಲ್ಲೇ 11 ಪ್ರಕರಣಗಳು ಇದ್ದವು. ಬಳ್ಳಾರಿ ಗುಗ್ಗರಟ್ಟಿ ಹಾಗು ಸಿರಗುಪ್ಪ ತಾಲೂಕಿನ ಎಚ್ ಹೊಸಹಳ್ಳಿಯಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆ ಆಗಿದ್ದವು. ಹೀಗಾಗಿ ಈ ಮೂರು ಪ್ರದೇಶಗಳನ್ನು ಜಿಲ್ಲಾಡಳಿತ ಕಂಟೈನ್ಮಂಟ್ ಝೋನ್ ಮಾಡಿತ್ತು.
ಬಳ್ಳಾರಿಯಲ್ಲಿ ದೇವರ ಪ್ರಸಾದ ತಿಂದವರಿಗೆ ಕ್ವಾರಂಟೈನ್ ಶಿಕ್ಷೆ
ನಿಯಮಾನುಸಾರ ಆ ಒಂದು ಪ್ರದೇಶದ ಕೊನೆಯ ಕೊರೊನಾ ವೈರಸ್ ಪತ್ತೆಯಾದ 28 ದಿನಗಳ ಕಾಲ ಲಾಕ್ ಡೌನ್ ಮಾಡಿ ಕಂಟೈನ್ಮೆಂಟ್ ಝೋನ್ ಮಾಡಬೇಕು. ಬಳಿಕ ಅಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆ ಆಗದೇ ಇದಲ್ಲಿ ಕಂಟೈನ್ಮೆಂಟ್ ಝೋನ್ ತೆರವು ಮಾಡಬಹುದು. ಹೀಗಾಗಿ ಜಿಲ್ಲೆಯ ಈ ಎರಡು ಕಂಟೈನ್ಮೆಂಟ್ ಝೋನ್ ಗಳನ್ನು ಜಿಲ್ಲಾಡಳಿತ ಇಂದು ತೆರವು ಮಾಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಹೊಸಪೇಟೆ ನಗರ ಮಾತ್ರ ಈಗ ಕಂಟೈನ್ಮೆಂಟ್ ಝೋನ್ ಆಗಿ ಉಳಿದುಕೊಂಡಿದೆ.
ಜಿಲ್ಲೆಯಲ್ಲಿ ಈವರೆಗೂ 13 ಪ್ರಕರಣಗಳ ಪೈಕಿ 8 ಪಾಸಿಟಿವ್ ರೋಗಿಗಳು ಗುಣಮುಖ ಆಗಿದ್ದಾರೆ. ಇನ್ನು ಉಳಿದ 5 ಜನರು ಕೆಲವೇ ದಿನಗಳಲ್ಲಿ ಗುಣಮುಖ ಆಗಲಿದ್ದಾರೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಜನತೆಯಲ್ಲಿ ಇದ್ದ ಕೊರೊನಾ ಭೀತಿ ಮಾಯವಾಗಿದೆ.
ಕಂಟೈನ್ಮೆಂಟ್ ಝೋನ್ ನಲ್ಲಿಲ್ಲ ಎಣ್ಣೆ ಮಾರಾಟ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿಗಳಿಗೆ ಇಂದು ನಿರಾಶೆ ಉಂಟಾಗಿದೆ. ಆರೆಂಜ್ ಝೋನ್ ನಲ್ಲಿರುವ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ಇಲ್ಲದಂತಾಗಿದೆ. ಆದರೆ ಬೆಳಿಗ್ಗೆಯಿಂದಲೇ ಹೊಸಪೇಟೆ ನಗರದಲ್ಲಿರುವ ಎಣ್ಣೆ ಅಂಗಡಿ ಮುಂದೆ ಜನ ಕಾದು ಕುಳಿತಿದ್ದು, ನಿರಾಶರಾಗಿ ಮನೆಗಳಿಗೆ ಹಿಂದಿರುಗಿದ ದೃಶ್ಯ ಕಂಡುಬಂತು.