ಆಫ್ರಿಕಾದಿಂದ ಹೊಸಪೇಟೆಗೆ ಮರಳಿದ ಇಬ್ಬರಿಗೆ 7 ದಿನಗಳ ಕಾಲ ಹೋಂ ಕ್ವಾರಂಟೈನ್
ವಿಜಯನಗರ, ಡಿಸೆಂಬರ್ 1: ಕೊರೊನಾ ವೈರಸ್ ಹೊಸ ರೂಪಾಂತರ ಓಮಿಕ್ರಾನ್ ಕಾಣಿಸಿಕೊಂಡಿರುವ ಪಶ್ಚಿಮ ಆಫ್ರಿಕಾದ ಗಿನಿಯಾದಿಂದ ಹಿಂದಿರುಗಿದ ಇಬ್ಬರು ವ್ಯಕ್ತಿಗಳನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಅವರ ಮನೆಗಳಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಹೊಸಪೇಟೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಭಾಸ್ಕರ್ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಆಫ್ರಿಕಾದ ಗಿನಿಯಾದಿಂದ ಹಿಂದಿರುಗಿದವರ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ -19 ನೆಗೆಟಿವ್ ಬಂದಿದೆ. ಆದರೂ ಓಮಿಕ್ರಾನ್ ರೂಪಾಂತರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 29ರಂದು ಹಿಂದಿರುಗಿದ ಇಬ್ಬರಿಗೂ ಕೋವಿಡ್-19 ನೆಗೆಟಿವ್ ಎಂದು ಪರೀಕ್ಷೆಯಲ್ಲಿ ವರದಿಯಾಗಿದೆ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಹೊಸ ಕೋವಿಡ್-19 ರೂಪಾಂತರದ ಹರಡುವಿಕೆಯ ದೃಷ್ಟಿಯಿಂದ ಹೊಸ ಮಾರ್ಗಸೂಚಿಗಳ ಪ್ರಕಾರ ನಾವು ಅವರನ್ನು ಏಳು ದಿನಗಳವರೆಗೆ ಮನೆಯಲ್ಲಿಯೇ ನಿರ್ಬಂಧಿಸಿದ್ದೇವೆ. ಅವರ ಕ್ವಾರಂಟೈನ್ ಮುಗಿದ ನಂತರ ಮತ್ತೆ ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದರು.

"ಆಫ್ರಿಕಾದ ರಾಜ್ಯಗಳಿಂದ ಹಿಂದಿರುಗಿದವರು ಅಧಿಕಾರಿಗಳಿಗೆ ವರದಿ ಮಾಡಬೇಕು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೊಸಪೇಟೆ ತಾಲೂಕು ಆರೋಗ್ಯ ಅಧಿಕಾರಿ ಭಾಸ್ಕರ್ ಹೇಳಿದರು.
ಆಫ್ರಿಕಾದ ಗಿನಿಯಾ ದೇಶದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆಂದು ತೆರಳಿದ್ದ ಇಬ್ಬರು ಮರಳಿ ಹೊಸಪೇಟೆಗೆ ಆಗಮಿಸಿದ್ದಾರೆ. ಆಫ್ರಿಕಾದಿಂದ ಮುಂಬೈಗೆ, ಮುಂಬೈಯಿಂದ ನೇರವಾಗಿ ಹೊಸಪೇಟೆಗೆ ಬಂದಿದ್ದಾರೆ. ಇಬ್ಬರ ಕೋವಿಡ್ ವರದಿ ನೆಗೆಟಿವ್ ಇರುವ ಕಾರಣ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಅಧಿಕಾರಿ ಭಾಸ್ಕರ್ ತಿಳಿಸಿದರು.
ಮಹಾರಾಷ್ಟ್ರಕ್ಕೆ ಬಂದಿಳಿದ ಆರು ಮಂದಿಗೆ ಕೊರೊನಾ ಸೋಂಕು
ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ಅಪಾಯಕಾರಿ ದೇಶಗಳಿಂದ ಮಹಾರಾಷ್ಟ್ರಕ್ಕೆ ಆಗಮಿಸಿದ ಆರು ಮಂದಿ ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಮುಂಬೈ ಕಾರ್ಪೊರೇಷನ್, ಕಲ್ಯಾಣ್-ಡೊಂಬಿವಲಿ ಕಾರ್ಪೊರೇಷನ್, ಮೀರಾ-ಭಯಂದರ್ ಕಾರ್ಪೊರೇಷನ್ ಮತ್ತು ಪುಣೆಯಲ್ಲಿ ತಲಾ ಒಬ್ಬರು ಮತ್ತು ಪಿಂಪ್ರಿ-ಚಿಂಚ್ವಾಡ್ ಕಾರ್ಪೊರೇಷನ್ನಲ್ಲಿ ನೈಜೀರಿಯಾದಿಂದ ಬಂದ ಇಬ್ಬರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ.
ಇದೀಗ ಸೋಂಕಿತರ ರಕ್ತದ ಮಾದರಿಗಳನ್ನು ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ. ಈ ಎಲ್ಲಾ ಆರು ಜನ ಪ್ರಯಾಣಿಕರಿಗೂ ಕೋವಿಡ್-19 ಸೋಂಕು ಪಾಸಿಟಿವ್ ದೃಢವಾಗಿದ್ದು, ಅವರಿಗೆ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ.
ಮತ್ತೊಂದೆಡೆ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡಿಸೆಂಬರ್ 1ರಿಂದ ಇತರ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರನ್ನು ಕ್ವಾರಂಟೈನ್ಗೊಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.












Click it and Unblock the Notifications