ಬಳ್ಳಾರಿಯಲ್ಲಿ ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ದಾಳಿ: ಐವರ ವಿರುದ್ಧ ಎಫ್ಐಆರ್
ಬಳ್ಳಾರಿ, ಅಕ್ಟೋಬರ್ 12: ವೈದ್ಯಕೀಯ ಪದವಿ ಪಡೆಯದ ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ಬಳ್ಳಾರಿ ತಾಲೂಕು ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದು, ಐದು ಕ್ಲಿನಿಕ್ಗಳನ್ನು ಸೀಜ್ ಮಾಡಿ ಎಫ್ಐಆರ್ ದಾಖಲು ಮಾಡಿದ್ದಾರೆ.
ಕರ್ನಾಟಕ ಖಾಸಗಿ ಆಸ್ಪತ್ರೆಗಳ ಅಧಿನಿಯಮ-2007ರ ಅಡಿಯಲ್ಲಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿ ಅನುಮತಿ ಪಡೆದುಕೊಂಡು ಕಾರ್ಯ ಆರಂಭ ಮಾಡಬೇಕು. ಒಂದು ವೇಳೆ ಅನುಮತಿ ಪಡೆಯದೆ ಆರಂಭಿಸಿದರೆ ತಕ್ಷಣ ಸ್ಥಗಿತಗೊಳಿಸಿ ಅನುಮತಿ ಪಡೆಯಬೇಕು. ಅದರಲ್ಲೂ ವೈದ್ಯರು ಅಲ್ಲದವರು ವೈದ್ಯ ವೃತ್ತಿ ಮಾಡುತ್ತಿದ್ದಲ್ಲಿ ಕಾನೂನು ರೀತಿಯಲ್ಲಿ ಎಫ್ಐಅರ್ ದಾಖಲಿಸಲಾಗುವುದು ಎಂದು ಬಳ್ಳಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನ ಕುಮಾರಿ ತಿಳಿಸಿದರು.

ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶಬಾಬು ಅವರ ಮಾರ್ಗದರ್ಶನದಲ್ಲಿ ಬಳ್ಳಾರಿ ನಗರದ ಜಾಗೃತಿ ನಗರ, ಕವಾಡಿ ಸ್ಟ್ರೀಟ್, ರೇಷ್ಮೆ ಕಚೇರಿ ಹತ್ತಿರ ಯಾವುದೇ ಕ್ಲಿನಿಕ್ ಹೆಸರಿನ ಬೋರ್ಡ್ಗಳಿಲ್ಲ 04 ನಕಲಿ ಕ್ಲಿನಿಕ್ಗಳ ಮೇಲೆ ದಾಳಿ ಮಾಡಿ, ಸೀಜ್ ಮಾಡಲಾಗಿದ್ದು, ನಕಲಿ ವೈದ್ಯರಾದ ಕರೀಮ್, ಗೋವಿಂದ್, ಜಾವೀದ್, ಶಬಾನಾ ವಿರುದ್ದ, ಕೌಲ್ ಬಜಾರ್ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವೈದ್ಯ ವೃತ್ತಿ ಮಾಡುವವರಿಗೆ ಬಾಡಿಗೆ ಕೊಡುವಾಗ ಅಂಗಡಿಗಳ ಮಾಲಿಕರು ಸದರಿಯವರ ಮಾಹಿತಿ ಪಡೆದು ಬಾಡಿಗೆ ನೀಡಬೇಕು. ಇಲ್ಲಿ ಮಾಲೀಕರ ಲೋಪವು ಇದೆ ಎಂದು ತಿಳಿಸಿದರು. ವೈದ್ಯ ಪದವಿ ಪಡೆಯದವರು ಗೊತ್ತಿಲ್ಲದ ಔಷಧಿಗಳನ್ನು ಜನತೆಗೆ ನೀಡುವುದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು. ಅದರಲ್ಲೂ ಜೀವದ ಪ್ರಶ್ನೆ ಇರುವ ಆರೋಗ್ಯ ಸೇವೆಗಳನ್ನು ನೀಡುವಾಗ ಅಧಿಕೃತವಾಗಿ ನೋಂದಣೆ ಮಾಡಿಸಬೇಕು.

ನೊಂದಣಿ ಮಾಡಿಸದೆ ವೈದ್ಯ ವೃತ್ತಿ ಮಾಡುತ್ತಿದ್ದಲ್ಲಿ ಅಂತವರ ವಿರುದ್ದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಅಧಿನಿಯಮ-2007 ಅಡಿಯಲ್ಲಿ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆಪಿಎಂಎ ತಂಡದ ಅರುಣ್ ಕುಮಾರ್ ಮತ್ತು ಗೋಪಾಲ್ ಹೆಚ್ ಕೆ.ಕೌಲ್ ಬಜಾರ್ ಪೊಲೀಸ್ ಸ್ಟೇಷನ್ ಸಿಬ್ಬಂದಿ ಕೂಡ ಸಾಥ್ ನೀಡಿದರು.












Click it and Unblock the Notifications