ಕಾಂಗ್ರೆಸ್ - ಜೆಡಿಎಸ್ ಗೂ ಅದೇ ಸ್ಥಿತಿ ಬಂದಿದೆ; ಈಶ್ವರಪ್ಪ
ಬಳ್ಳಾರಿ, ಅಕ್ಟೋಬರ್ 08: "ಒಂದ್ ಕಾಲ ಇತ್ತು. ಬಿಜೆಪಿ ಟಿಕೆಟ್ ಕೊಟ್ಟರೆ ನಾನೊಲ್ಲೆ, ನೀನೊಲ್ಲೆ ಅಂತಿದ್ರು. ಈಗ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳಿಗೂ ಅಂಥದ್ದೇ ಗತಿ ಬಂದೈತಿ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಬಿಜೆಪಿಗೆ ಈ ಹಿಂದೆ ಇದೇ ರೀತಿಯ ಸನ್ನಿವೇಶ ನಿರ್ಮಾಣವಾಗಿತ್ತು. ಇದೀಗ ಕಾಂಗ್ರೆಸ್- ಜೆಡಿಎಸ್ ಗೆ ಸೋಲಿನ ಪರ್ವಾರಂಭವಾಗಿದೆ. ಬಿಜೆಪಿಗೆ ನಿರಂತರವಾಗಿ ಗೆಲುವಿನ ಪರ್ವಾರಂಭವಾಗಿದೆ. ಹೀಗಾಗಿ, ಇನ್ಮುಂದೆ ಗೆಲುವಿನ ಸರಮಾಲೆಯೇ ನಮಗೆ ಒಲಿಯಲಿದೆ" ಎಂದು ಹೇಳಿದರು.

ಉಪಚುನಾವಣೆಗಳಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ
ತಮ್ಮ ಶಾಸಕ ಸ್ಥಾನ ರಾಜೀನಾಮೆ ನೀಡಿ ಪಕ್ಷಕ್ಕೆ ಬಂದವರಿಗೆ ಪಕ್ಷ ಋಣ ತೀರಿಸಲಿದೆ ಎನ್ನುವ ಮೂಲಕ ರಾಜರಾಜೇಶ್ವರಿ ನಗರದ ಉಪಚುನಾವಣೆಯ ಟಿಕೆಟ್ ಅನ್ನು
ಮುನಿರತ್ನಗೆ ದೊರೆಯಲಿದೆ ಎಂಬ ಸುಳಿವನ್ನು ಸಚಿವ ಕೆ.ಎಸ್.ಈಶ್ವರಪ್ಪ ಬಿಟ್ಟುಕೊಟ್ಟಿದ್ದಾರೆ.
ಈ ಮೊದಲು ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲುತ್ತಿದ್ದರು. ಅದಕ್ಕಾಗಿ ಆಗ ಅಭ್ಯರ್ಥಿಗಳ ಹೆಸರನ್ನು ಆದಷ್ಟು ಮೊದಲೇ ಪ್ರಕಟಿಸಲಾಗುತ್ತಿತ್ತು. ಆದರೆ, ಇಂದು ಪಕ್ಷ ಸಾಕಷ್ಟು ಸಂಘಟಿತವಾಗಿದೆ. ಆಕಾಂಕ್ಷಿಗಳು ಹೆಚ್ವಿರುವುದು ಮತ್ತು ಗೆಲುವು ಖಚಿತ ಇರೋದರಿಂದ ಅಭ್ಯರ್ಥಿಗಳ ಆಯ್ಕೆ ತಡವಾಗಿದೆ ಎಂದರು. ಈ ಎರಡೂ ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಬಿಐ ದಾಳಿ ಸಮರ್ಥನೆ ಮಾಡಿಕೊಂಡ ಸಚಿವ
ಸಿಬಿಐ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದನ್ನು ಸಮರ್ಥಿಸಿಕೊಂಡ ಅವರು, ಸಿಬಿಐ ತನ್ನ ಕೆಲಸ ತಾನು ಮಾಡುತ್ತಿದೆ ಎಂದರು. ಉಗ್ರಪ್ಪ ಅವರು ನಿನ್ನೆ ಎಲ್ಲ ಪಕ್ಷದ ಮುಖಂಡರ ಮನೆ ಮೇಲೆ ದಾಳಿ ನಡೆಯಲಿ ಎಂದು ಸವಾಲು ಹಾಕಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಹಿಂದೆ ಅವರ ಸರ್ಕಾರ ಇದ್ದಾಗ ಈ ಕೆಲಸ ಯಾಕೆ ಮಾಡಲಿಲ್ಲ ಎಂದರು.
ಈ ಹಿಂದೆ ಸಿಬಿಐ ಬಂಧನದಿಂದ ಜೈಲಿನಿಂದ ಹೊರ ಬಂದ ಡಿ.ಕೆ.ಶಿ ಅವರನ್ನು ಮೆರವಣಿಗೆ ಮೂಲಕ ಕರೆತರುತ್ತಾರೆ. ಅದೇನು ಘನಂದಾರಿ ಕಾರ್ಯವೇ? ಎಂದು ಹೇಳಿದರು.

ಕುರುಬರ ಹೋರಾಟಕ್ಕೆ ಬೆಂಬಲ
ರಾಜ್ಯದಲ್ಲಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂಬ ಹೋರಾಟಕ್ಕೆ ತಮ್ಮ ಬೆಂಬಲ ಇದೆ. ಕಾರಣ ಎಸ್ಟಿಗೆ ಸೇರಲು ಅರ್ಹತೆ ಇರುವ ಹಿಂದುಳಿದ ವರ್ಗದಲ್ಲಿರುವ ಕುರುಬ, ಕೋಲಿ ಮೊದಲಾದವರ ಬೇಡಿಕೆ ಇದೆ. ನಮ್ಮ ಸಮಾಜದ ಸ್ವಾಮೀಜಿಗಳು ಎಸ್ಟಿಗೆ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಕುರಿತು ಹೋರಾಟ ಮಾಡಲು ಅ.11 ರಂದು ಕರೆದಿರುವ ಸಭೆಗೆ ಬೆಂಬಲ ಇದೆ ಎಂದರು.
ಹಿಂದುಳಿದ ವರ್ಗದಲ್ಲಿರುವ ಸಮುದಾಯಗಳು ಎಸ್ಟಿಗೆ ಬರುವುದಾದರೆ ಓಬಿಸಿಯಲ್ಲಿನ ತಮ್ಮ ಮೀಸಲಾತಿ ಪಾಲನ್ನು ತೆಗೆದುಕೊಂಡು ಎಸ್ಟಿಗೆ ಬರಬೇಕು. ಹಾಗಾಗಿ ಎಸ್ಟಿಗಳಿಗೆ ಇದರಿಂದ ಅನ್ಯಾಯವಾಗಬಾರದೆಂದರು.

ವಿಧಾನ ಪರಿಷತ್ತಿನಲ್ಲಿ ನಮ್ಮ ಬಲ ಹೆಚ್ಚಲಿದೆ
ಸದ್ಯ ನಡೆಯಲಿರುವ ರಾಜ್ಯದ ನಾಲ್ಕು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳೇ ಆಯ್ಕೆಯಾಗುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ, ಇದರಿಂದ ವಿಧಾನ ಪರಿಷತ್ತಿನಲ್ಲಿ ನಮ್ಮ ಬಲ ಹೆಚ್ಚಲಿದೆ ಎಂದರು. ಸದ್ಯ ವಿಧಾನ ಪರಿಷತ್ತಿನಲ್ಲಿ ಒಟ್ಟು 75 ಸದಸ್ಯರ ಪೈಕಿ 27 ಜನ ಬಿಜೆಪಿ ಪಕ್ಷದ ಸದಸ್ಯರಿದ್ದಾರೆ. ಬರುವ ಫಲಿತಾಂಶಗಳ ಮೂಲಕ 31 ಕ್ಕೆ ಏರಲಿದೆ. ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಇದನ್ನು ಚುನಾವಣಾ ಆಯೋಗಕ್ಕೂ ತಿಳಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಚುನಾವಣೆ ನಡೆಸಲು ಯಾವಾಗಲಾದರೂ ಸೂಚಿಸಿದರೂ ಸರ್ಕಾರ ನಡೆಸಲಿದೆ ಎಂದರು.












Click it and Unblock the Notifications