ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಶ್ರೀರಾಮುಲು ಗೈರು, ಕುಚುಕುಗಳ ನಡುವೆ ಮನಸ್ತಾಪ?
ಬಳ್ಳಾರಿ, ಡಿಸೆಂಬರ್, 04: ಎರಡು ದೇಹ ಒಂದೇ ಜೀವದಂತಿದ್ದ ಆಪ್ತ ಸ್ನೇಹಿತರಾದ ಸಚಿವ ಶ್ರೀರಾಮುಲು, ಮಾಜಿ ಸಚಿವ ಜನಾರ್ದನರೆಡ್ಡಿ ನಡುವೆ ಬಿರುಕು ಕಾಣಿಸಿಕೊಂಡಂತಿದೆ. ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಚಿವ ಶ್ರೀರಾಮುಲು ಗೈರಾಗಿದ್ದು, ಇದು ರಾಜಕೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ಜನಾರ್ದನ ರೆಡ್ಡಿ ಅವರ ಯಾವುದೇ ಕಾರ್ಯಕ್ರಮವಿದ್ದರೂ ಶ್ರೀ ರಾಮುಲು ಸ್ವಂತ ಸಹೋದರನಂತೆ ಹಾಜರಾಗುತ್ತಿದ್ದರು. ಯಾರಿಗೆ ಆಹ್ವಾನವಿಲ್ಲದಿದ್ದರೂ ಶ್ರೀರಾಮುಲುಗೆ ಆಹ್ವಾನ, ಪ್ರಮುಖ್ಯತೆ ಇದ್ದೇ ಇರುತ್ತಿತ್ತು. ಆದರೆ ಇತ್ತೀಚೆಗೆ ನಡೆದ ಜನಾರ್ದನರೆಡ್ಡಿ ಮೊಮ್ಮಗಳ ನಾಮಕರಣ ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮುಲು ಗೈರಾಗಿದ್ದಾರೆ. ಕಾರ್ಯಕ್ರಮಕ್ಕೆ ಬಿ.ಎಸ್.ಯಡಿಯೂರಪ್ಪ ಹೋದರೂ ಶ್ರೀರಾಮುಲು ಹೋಗಿಲ್ಲ. ಹೀಗಾಗಿ ಆಪ್ತ ಗೆಳೆಯರ ಮಧ್ಯೆ ಮುನಿಸು ಉಂಟಾಗಿದೆಯಾ? ಎಂಬ ಚರ್ಚೆಗಳು ಶುರುವಾಗಿವೆ. ಜನಾರ್ದನ ರೆಡ್ಡಿಯಿಂದ ಆಪ್ತ ಸ್ನೇಹಿತ ಸಚಿವ ಶ್ರೀರಾಮುಲು ಅಂತರ ಕಾಯ್ದುಕೊಂಡಿದ್ದು ಏಕೆ? ಎನ್ನುವ ಪ್ರಶ್ನೆಗಳು ಎದ್ದಿವೆ.
ಸಿದ್ದರಾಮಯ್ಯಗೆ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ: ಶ್ರೀರಾಮುಲು
ಬಿಜೆಪಿಯಲ್ಲಿ ಮನ್ನಣೆ ಸಿಗದ ಹಿನ್ನೆಲೆ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆಗೆ ಯೋಜನೆ ರೂಪಿಸಿದ್ದಾರೆ. ಹೀಗಾಗಿ ಸಚಿವ ಬಿ.ಶ್ರೀರಾಮುಲು ಜನಾರ್ದನ ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆಯಾ?. ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಸಹೋದರರು ಮಾತ್ರ ಹಾಜರಾಗಿದ್ದಾರೆ. ಆದರೆ ಸಚಿವ ಶ್ರೀರಾಮುಲು ಗೈರು ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗಳು ಶುರುವಾಗಿವೆ.
ಬಿಜೆಪಿ ವಿರುದ್ಧ ರೆಡ್ಡಿ ಮುನಿಸಿದ್ದೇಕೆ?
ಕಾಂಗ್ರೆಸ್ಗಿಂತ ಬಿಜೆಪಿ ನಾಯಕರೇ ನನಗೆ ತೊಂದರೆ ಕೊಡುತ್ತಿದ್ದಾರೆ. ನಾನು ಬೆಳೆಸಿದ ಪಕ್ಷದವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ ಎಂದು ಹೇಳುವ ಮೂಲಕ ಈ ಹಿಂದೆ ಸಮಾರಂಭವೊಂದರಲ್ಲಿ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ವೇಳೆ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುವ ಬಗ್ಗೆಯೂ ಸುಳಿವು ನೀಡಿದ್ದರು.
ರಾಮುಲು ಜೊತೆಗೂ ಚರ್ಚೆ ನಡೆಸಿದ್ರಾ?
ಅದರಂತೆಯೇ ಅಸಮಾಧಾನಿತ ಹಾಗೂ ಟಿಕೆಟ್ ಗೊಂದಲದಲ್ಲಿರುವವರ ಜೊತೆ ಜನಾರ್ದನ ರೆಡ್ಡಿ ಸಪರ್ಕದಲ್ಲಿದ್ದಾರೆ. ಈ ಹಿಂದೆ ಶ್ರೀರಾಮುಲು ಜೊತೆಗೂ ಚರ್ಚೆ ನಡೆದಿದೆ. ಆದರೆ ರಾಮುಲು ಇದಕ್ಕೆ ಮಣೆ ಹಾಕಿಲ್ಲ. ಹೀಗಾಗಿ ಇವರಿಬ್ಬರ ನಡುವೆ ಮುನಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಗೈರಾದ ಬಗ್ಗೆ ಸಚಿವ ಶ್ರೀರಾಮುಲು ಹೇಳಿದ್ದೇನು?
ಇನ್ನು ಕಾರ್ಯಕ್ರಮಕ್ಕೆ ಭೇಟಿ ನೀಡದ ಸಂಬಂಧ ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. "ಸ್ವಾಮೀಜಿಯೊಬ್ಬರ ತಂಗಿ ಮದುವೆಗೆ ಜೈಪುರಕ್ಕೆ ಹೋಗಿದ್ದೆ. ಹಾಗಾಗಿ ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಹೋಗಿಲ್ಲ. ಈ ವಿಚಾರದಲ್ಲಿ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಾಜಕೀಯ ಹೊರತುಪಡಿಸಿ ನಾನು, ಜನಾರ್ದನ ರೆಡ್ಡಿ ಉತ್ತಮ ಸ್ನೇಹಿತರಾಗಿದ್ದಾರೆ. ಹೊಸ ಪಕ್ಷ ಕಟ್ಟುವ ವಿಚಾರ ಜನಾರ್ದನ ರೆಡ್ಡಿ ವಿವೇಚನೆಗೆ ಬಿಟ್ಟಿದ್ದು. ಪಕ್ಷ ಕಟ್ಟುವ ವಿಚಾರವನ್ನು ಜನಾರ್ದನ ರೆಡ್ಡಿ ನನ್ನ ಜೊತೆ ಚರ್ಚಿಸಿಲ್ಲ. ರಾಜಕೀಯವಾಗಿ ಎಲ್ಲೇ ಇದ್ದರೂ ಜನಾರ್ದನ ರೆಡ್ಡಿಗೆ ಒಳ್ಳೆಯದಾಗಲಿ. ಕೆಲವು ವಿಚಾರದಲ್ಲಿ ಬಿಜೆಪಿ ಮೇಲೆ ಜನಾರ್ದನ ರೆಡ್ಡಿಗೆ ಬೇಸರ ಆಗಿದೆ. ಅವರು ಹೊಸ ಪಕ್ಷದ ಬಗ್ಗೆ ನನಗೆ ಮಾಹಿತಿ ಇಲ್ಲ. ರೆಡ್ಡಿ ಅಸಮಾಧಾನದ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ ಅಂತಾ," ಹೇಳಿದ್ದಾರೆ.
ಚರ್ಚೆಗೆ ಕಾರಣವಾಯ್ತ ಕುಚುಕುಗಳ ಮನಸ್ತಾಪ?
ರೆಡ್ಡಿ ಶ್ರೀರಾಮುಲು ಎಂಬ ಇಬ್ಬರು ಕುಚುಕು ಗೆಳೆಯರ ನಡುವೆ ಈಗ ಮನಸ್ತಾಪ ಉಂಟಾಗಿದೆ ಅನ್ನುವುದು ಗಣಿನಾಡಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸ್ನೇಹಿತರ ನಡುವಿನ ಈ ಬಿರುಕು ಮುಂದೆ ರಾಜಕೀಯವಾಗಿ ಯಾವ ತಿರುವು ಪಡೆದುಕೊಳ್ಳುತ್ತದೆ ಅನ್ನುವುದನ್ನು ಕಾದುನೋಡಬೇಕಾಗಿದೆ.