ಮಣ್ಣೆತ್ತಿನ ಅಮಾವಾಸ್ಯೆ : ಮಣ್ಣಿನ ಬಸವಣ್ಣನಿಗೆ ಭಾರೀ ಬೇಡಿಕೆ
ಬಳ್ಳಾರಿ, ಜುಲೈ 12 : ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಮಣ್ಣಿನಿಂದ ತಯಾರಿಸಿದ ಎತ್ತುಗಳ ವಿಗ್ರಹದ ಮಾರಾಟ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಭರ್ಜರಿಯಾಗಿ ನಡೆಯಿತು. ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ನಡೆಯಲಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕಂಪಿಲರಾಯ (ನಡುವಲ ಮಸೀದಿ) ಬಳಿ ಮಣ್ಣೆತ್ತುಗಳ ಮಾರಾಟ ಮಾಡುವಲ್ಲಿ ಚಿತ್ರಗಾರ ಕುಟುಂಬದ ಸದಸ್ಯರು ಹಾಗೂ ಬೇರೆ ಊರಿನಿಂದ ಬಂದಂತಹ ಕುಂಬಾರ ಕುಟುಂಬದವರು ಪೈಪೋಟಿ ನಡೆಸಿ, ಗ್ರಾಹಕರ ಬಳಿ ಚೌಕಾಸಿ ನಡೆಸುತ್ತಿರುವುದು ಸಾಮಾನ್ಯವಾಗಿತ್ತು.
ಬಳ್ಳಾರಿ ಜಿಲ್ಲೆಯ ಹಲವೆಡೆ ಮಣ್ಣಿನಿಂದ ತಯಾರಿಸಿದ, ನೀರಿನಲ್ಲಿ ಕರಗುವ ಬಸವಣ್ಣಗಳ ಮಾರಾಟ ನಡೆದಿದೆ. ಬಣ್ಣವಿಲ್ಲದ ಹಸಿ ಮಣ್ಣಿನ ಒಂದು ಜೋಡಿ ಎತ್ತು ಮತ್ತು ಗೋದ್ಲಿಗಳನ್ನು 30 ರೂಪಾಯಿ ಬೆಲೆಗೆ, ಬಣ್ಣ ಹಚ್ಚಿದ ಜೋಡಿ ಎತ್ತು ಮತ್ತು ಗೋದ್ಲಿಯನ್ನು 40 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ.

ಮಣ್ಣೆತ್ತಿನ ಬಸವಣ್ಣಗಳನ್ನು ಮಣ್ಣೆತ್ತಿನ ಅಮಾವಾಸ್ಯೆಯಾದ ಶುಕ್ರವಾರದಂದು ಮನೆಯ ಜಗುಲಿಯಲ್ಲಿ ಪ್ರತಿಷ್ಠಾಪಿಸಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ಪದಾರ್ಥಗಳ ನೈವೇದ್ಯ ಮಾಡುವುದು ಕೃಷಿಕ ಕುಟುಂಬಗಳ ಸಹಜ ಸಂಪ್ರದಾಯ.
ಈ ಹಬ್ಬದ ಆಚರಣೆಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನಲೆಯೂ ಇದೆ ಎಂದು ಹಿರಿಯರು ಹೇಳುತ್ತಾರೆ.
ಶುಕ್ರವಾರ ಸಂಜೆ ಈ ಬಸವಣ್ಣಗಳನ್ನು ಚಿಕ್ಕ ಮಕ್ಕಳು ಕೈಯಲ್ಲಿ ಹಿಡಿದುಕೊಂಡು ಸ್ಪರ್ಧೆಯಲ್ಲಿ ಓಡಿ, ಗುರಿ ತಲುಪುತ್ತಾರೆ. ದೊಡ್ಡ ಮಟ್ಟದಲ್ಲಿ ಒಲಂಪಿಕ್ನಂತೆ ಓಟದ ಸ್ಪರ್ಧೆಯೂ ಹಳ್ಳಿಗಳಲ್ಲಿ ನಡೆಯಲಿದೆ.

ಪೂಜೆ, ಆಟದ ನಂತರ ಮನೆಯ ಹಿರಿಯರು ಎತ್ತುಗಳನ್ನು ದನದ ಕೊಟ್ಟಿಗೆಯಲ್ಲಿ ಕಟ್ಟಿ, ಮುಂದಿನ ವರ್ಷದವರೆಗೆ ಕಾಪಾಡಿಕೊಂಡು ಬರುತ್ತಾರೆ ಅಥವಾ ನೀರಿಗೆ ಹಾಕುತ್ತಾರೆ.












Click it and Unblock the Notifications