ಜಗನ್ ಮೋಹನ್ ರೆಡ್ಡಿ ಸಂಪುಟ ಸೇರಿದ ಕೂಡ್ಲಿಗಿಯ ಮೊಮ್ಮಗಳು!
ಬಳ್ಳಾರಿ, ಏಪ್ರಿಲ್ 11; ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಚಿವ ಸಂಪುಟ ಪುನಾರಚನೆ ಮಾಡಿದ್ದಾರೆ. ಎಲ್ಲಾ ಸಚಿವರ ರಾಜೀನಾಮೆ ನೀಡಿದ್ದ ಜಗನ್ ಮೋಹನ್ ರೆಡ್ಡಿ ಹೊಸ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಕೂಡ್ಲಿಗಿಯ ಮೊಮ್ಮಗಳು ಸಹ ಸಂಪುಟ ಸೇರಿದ್ದಾರೆ.
ಕಲ್ಯಾಣದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿ ಕೆ. ವಿ. ಉಷಾ ಚರಣ್ ಸಚಿವರಾಗಿ ಸೋಮವಾರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೇರಿದರು. ಪ್ರಮಾಣ ವಚನ ಸಮಾರಂಭದ ಬಳಿಕ ಖಾತೆ ಹಂಚಿಕೆ ಮಾಡಿದ್ದು, ಉಷಾ ಚರಣ್ಗೆ ಮಹಿಳಾ ಮತ್ತು ಮಕ್ಕಳು, ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಖಾತೆ ಹಂಚಿಕೆ ಮಾಡಲಾಗಿದೆ.
ಕೆ. ವಿ. ಉಷಾ ಚರಣ್ ಕರ್ನಾಟಕದ 31ನೇ ಜಿಲ್ಲೆಯಾದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನವರು. ಕೂಡ್ಲಿಗಿ ತಾಲೂಕಿನ ಗಡಿಗ್ರಾಮವಾದ ತಾಯಕನಹಳ್ಳಿಯವರು. ಉಷಾ ಅವರ ತಾಯಿಯ ಮನೆ ಆಂಧ್ರ ಪ್ರದೇಶ. ಕಲ್ಯಾಣದುರ್ಗದಲ್ಲಿ ಉಷಾ ಚರಣ್ ನೆಲೆಸಿದ್ದಾರೆ.

ತಾಯಕನಹಳ್ಳಿಯ ಕೆ. ವಿರೂಪಾಕ್ಷಪ್ಪ ಪುತ್ರಿ ಉಷಾ ಚರಣ್ ಜೊತೆ ವಿವಾಹವಾದ ಬಳಿಕ ಆಂಧ್ರ ಪ್ರದೇಶದಲ್ಲಿ ನೆಲೆಸಿದ್ದಾರೆ. ಕಲ್ಯಾಣದುರ್ಗದಲ್ಲಿ ಜನರ ಸೇವೆ ಮಾಡುತ್ತಿದ್ದ ಉಷಾ ಕಿರಣ್ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದಾರೆ.
ಉಷಾ ಕಿರಣ್ ತಂದೆ ನಿಧನಹೊಂದಿದ್ದಾರೆ. ಚಿಕ್ಕಪ್ಪ ತಾಯಕನಹಳ್ಳಿ ಬಿಟ್ಟು ಚಿತ್ರದುರ್ಗದಲ್ಲಿ ವಾಸವಾಗಿದ್ದಾರೆ. ಉಷಾ ಅವರ ಅತ್ತೆ ಗುರಮ್ಮ ಈಗಲೂ ತಾಯಕನಹಳ್ಳಿಯಲ್ಲಿಯೇ ಇದ್ದಾರೆ. ಉಷಾ ಕಿರಣ್ ಮುಂತ್ರಿಯಾಗಿದ್ದರಿಂದ ಸಂಬಂಧಿಕರು ಸಂತಸಗೊಂಡಿದ್ದಾರೆ.
ಆಗಾಗ ಆಗಮಿಸುತ್ತಾರೆ; ಕಲ್ಯಾಣದುರ್ಗದಲ್ಲಿ ವಾಸವಾಗಿದ್ದರೂ ಸಹ ಶಾಸಕಿ ಕೆ. ವಿ. ಉಷಾ ಚರಣ್ ತಾಯಕನಹಳ್ಳಿಯನ್ನು ಮರೆತಿಲ್ಲ. ಆಗಾಗ ಆಗಮಿಸಿ ಕುಟುಂಬ ಸದಸ್ಯರನ್ನು ಮಾತನಾಡಿಸಿಕೊಂಡು ಹೋಗುತ್ತಾರೆ. ತಂದೆ ಸಮಾಧಿಗೆ ಪೂಜೆ ಸಲ್ಲಿಕೆ ಮಾಡಲು ಸಹ ಆಗಮಿಸುತ್ತಾರೆ.

ಶಾಸಕಿಯಾದರೂ ಸಂಬಂಧಿಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಉಷಾ ಚರಣ್ ಸಚಿವರಾಗಲಿದ್ದಾರೆ ಎಂಬ ಸುದ್ದಿ ತಾಯಕನಹಳ್ಳಿ ಗ್ರಾಮದಲ್ಲಿ ಸಂತಸ ಮೂಡಿಸಿತ್ತು. ಗ್ರಾಮಸ್ಥರು ಸಂಭ್ರಮಪಟ್ಟಿದ್ದರು.
ಉಷಾ ಚರಣ್ ಕೆಲವು ದಿನಗಳ ಹಿಂದೆ ತಾಯಕನಹಳ್ಳಿ ಗ್ರಾಮಕ್ಕೆ ಬಂದು ಹೋಗಿದ್ದರು. ಚಿತ್ರದುರ್ಗದಲ್ಲಿರುವ ಅವರ ಚಿಕ್ಕಪ್ಪ ಭಾನುವಾರ ಗ್ರಾಮಕ್ಕೆ ಆಗಮಿಸಿದ್ದರು. ಉಷಾ ಚರಣ್ ಒಳ್ಳೆಯ ಕೆಲಸ ಮಾಡಲಿ ಎಂದು ಗ್ರಾಮಸ್ಥರು ಹಾರೈಸಿದ್ದಾರೆ.
ಸಚಿವರ ರಾಜೀನಾಮೆ; ಏಪ್ರಿಲ್ 7ರ ಗುರುವಾರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂಪುಟದ ಸಚಿವರು ರಾಜೀನಾಮೆ ನೀಡಿದ್ದರು. ಆದರೆ ಹಿಂದಿನ ಸಂಪುಟದಲ್ಲಿದ್ದ 11 ಸಚಿವರನ್ನು ಉಳಿಸಿಕೊಂಡು ಜಗನ್ ಸಂಪುಟ ಪುನಾಚರನೆ ಮಾಡಿದ್ದಾರೆ.
ಹೊಸದಾಗಿ ಜಗನ್ ಸಂಪುಟ ಸೇರಿದ 25 ಸಚಿವರಲ್ಲಿ 17 ಮಂದಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪ ಸಂಖ್ಯಾತ ಸಮುದಾಯದವರು ಇದ್ದಾರೆ. ಹಿಂದಿನ ಸರ್ಕಾರದಲ್ಲಿ 5 ಎಸ್ಸಿ, 1 ಎಸ್ಟಿ, 7 ಓಬಿಸಿ, 1 ಅಲ್ಪ ಸಂಖ್ಯಾತ ಮತ್ತು 11 ಇತರ ಜಾತಿಗಳ ಶಾಸಕರಿದ್ದರು.
ಹಿಂದಿನ ಸಚಿವ ಸಂಪುಟದಿಂದ ಉಳಿಸಿಕೊಂಡಿರುವ 10 ಸಚಿವರಲ್ಲಿ ಮೂವರು ಪರಿಶಿಷ್ಟ ಜಾತಿ, ಐವರು ಹಿಂದುಳಿದ ವರ್ಗ ಮತ್ತು ಇಬ್ಬರು ಇತರ ಜಾತಿಯವರು. ಇಂದು ಸಂಪುಟ ಪುನಾರಚನೆ ಸಂದರ್ಭದಲ್ಲಿ ನಟಿ ರೋಜಾ ಸಹ ಜಗನ್ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ಹಿಂದಿನ ಮೂವರು ಮುಖ್ಯಮಂತ್ರಿಗಳಿಗೆ ಹೋಲಿಕೆ ಮಾಡಿದರೆ ಸಂಪುಟದಲ್ಲಿನ ಮಹಿಳಾ ಪ್ರಾತಿನಿಧ್ಯವನ್ನು 4ಕ್ಕೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.












Click it and Unblock the Notifications