ಕೋವಿಡ್ ಪರಿಸ್ಥಿತಿ; ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆ ರದ್ದು
ಬಳ್ಳಾರಿ, ಫೆಬ್ರವರಿ 25: ಕೊಟ್ಟೂರು ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವ ರದ್ದಾಗಿದೆ. ಕೋವಿಡ್ ಸೋಂಕಿನ ಭೀತಿಯ ನಡುವೆಯೂ ಮಾರ್ಚ್ 7ರಂದು ರಥೋತ್ಸವ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿತ್ತು.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಇತಿಹಾಸ ಪ್ರಸಿದ್ಧ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ರದ್ದು ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ ಹೇಳಿದ್ದಾರೆ. ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಅನುಮತಿ ನೀಡಲಾಗಿದೆ.
ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ ಎಸ್. ಭೀಮಾನಾಯ್ಕ್, "ರಥೋತ್ಸವ ರದ್ದು ಮಾಡಿ ಧಾರ್ಮಿಕ ವಿಧಿ ವಿಧಾನ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿದೆ. ಜನರು ಸಹಕಾರ ನೀಡಬೇಕು" ಎಂದರು.

"ರಾಜ್ಯದ ಅಲ್ಲಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ, ಮುಂಜಾಗ್ರತಾ ಕ್ರಮವಾಗಿ ರಥೋತ್ಸವ ರದ್ದು ಮಾಡಲಾಗಿದೆ. ಜಿಲ್ಲಾಡಳಿತ ಕೈಗೊಂಡ ತೀರ್ಮಾನಕ್ಕೆ ಜನರು ಸಹಕಾರ ನೀಡಬೇಕು" ಎಂದು ಮನವಿ ಮಾಡಿದರು.
ಜಿಲ್ಲಾಡಳಿತ ಪ್ರತಿ ವರ್ಷ ಜಾತ್ರೆಯ ದಿನ ನಡೆಸುತ್ತಿದ್ದ ಪೂಜೆಗಳನ್ನು ಮಾಡಲು ಅವಕಾಶ ನೀಡಿದೆ. ರಥೋತ್ಸವದ ಸಮಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಭಕ್ತರು ಕೊಟ್ಟೂರಿಗೆ ಆಗಮಿಸುತ್ತಿದ್ದರು.
ಈ ವರ್ಷ ಹೊರಗಿನ ಜಿಲ್ಲೆಗಳಿಂದ ಯಾವುದೇ ಭಕ್ತರು ಆಗಮಿಸಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಪ್ರತಿ ವರ್ಷ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುತ್ತಿದ್ದ ರಥೋತ್ಸವ ಈ ಬಾರಿ ಸಾಂಪ್ರದಾಯಿಕ ಪೂಜೆಗಳ ಮೂಲಕ ಮಾತ್ರ ನಡೆಯಲಿದೆ.












Click it and Unblock the Notifications